ಕನಕಪುರ: ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ (ಇ.ಡಿ.) ಸಂಸ್ಥೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ತಮ್ಮ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕನಕಪುರದ ಕೋಡಿಹಳ್ಳಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂಡಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇ.ಡಿ.ಗೆ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದರು. “ನನ್ನ ಪ್ರಕರಣವನ್ನೇ ಗಮನಿಸಿ. ನನ್ನ ಮೇಲೆ ಕೇಸ್ ದಾಖಲಿಸಿ ತಿಹಾರ್ ಜೈಲಿಗೆ ಕಳುಹಿಸಲಾಯಿತು. ಆದರೆ, ಆ ಕೇಸ್ ರದ್ದಾಯಿತು. ಇ.ಡಿ. ರಾಜಕೀಯ ಒತ್ತಡಕ್ಕೆ ಸಿಲುಕುವ ಬಗ್ಗೆ ಪರಿಶೀಲನೆ ನಡೆಸಬೇಕು. ಬಿ ರಿಪೋರ್ಟ್ ಸಲ್ಲಿಕೆಯಾದ ಬಳಿಕ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಸುಪ್ರೀಂ ಕೋರ್ಟ್ ಈ ರೀತಿಯ ತೀರ್ಪು ನೀಡಿರಬೇಕು,” ಎಂದು ಶಿವಕುಮಾರ್ ತಿಳಿಸಿದರು.
ಕೇಂದ್ರ ಸರ್ಕಾರ ಇ.ಡಿ.ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ, “ಬಿಜೆಪಿ ನಾಯಕರ ಮೇಲೆ ಯಾಕೆ ಇ.ಡಿ. ಕೇಸ್ ದಾಖಲಾಗುತ್ತಿಲ್ಲ? ಕೇವಲ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಯಾಕೆ ಕೇಸ್ ಹಾಕಲಾಗುತ್ತಿದೆ? ಬಿಜೆಪಿಗೆ ಸೇರಿದವರೆಲ್ಲ ಶುದ್ಧರೇ? ಇದು ಬಿಜೆಪಿಯ ವಾಷಿಂಗ್ ಮಷಿನ್ ಅಲ್ಲವೇ?” ಎಂದು ತಿರುಗೇಟು ನೀಡಿದರು.
ಟನಲ್ ಕಾರಿಡಾರ್ಗೆ ತೇಜಸ್ವಿ ಸೂರ್ಯ ಟೀಕೆಗೆ ತಿರುಗೇಟು
ಬೆಂಗಳೂರಿನ ಟನಲ್ ಕಾರಿಡಾರ್ ಯೋಜನೆಯ ಅಗತ್ಯತೆಯ ಬಗ್ಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ತೇಜಸ್ವಿ ಸಣ್ಣ ಹುಡುಗ. ಅವರ ಪಕ್ಷದಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ. ಅವರ ಮೂಲಕ ಸದನದಲ್ಲಿ ಚರ್ಚೆ ಮಾಡಿಸಲಿ,” ಎಂದು ವ್ಯಂಗ್ಯವಾಡಿದರು.
ಬಿಡದಿ ಟೌನ್ಶಿಪ್ ವಿರೋಧ: ರೈತರೊಂದಿಗೆ ಚರ್ಚೆ
ಬಿಡದಿ ಟೌನ್ಶಿಪ್ ಯೋಜನೆಗೆ ಕೆಲವು ಪಂಚಾಯಿತಿ ರೈತರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಕೇಳಿದಾಗ, ಶಿವಕುಮಾರ್, “ಈ ಯೋಜನೆಯನ್ನು ನಾನು ರೂಪಿಸಿಲ್ಲ. ಕುಮಾರಸ್ವಾಮಿ ಅವರು ರೂಪಿಸಿದ್ದಾರೆ. ಡಿನೋಟಿಫಿಕೇಷನ್ ಮಾಡಲು ನನಗೆ ಅಧಿಕಾರವಿಲ್ಲ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಆಗ ಹೋರಾಟ ಮಾಡದೇ ಈಗ ಯಾಕೆ ವಿರೋಧ? 9,000 ಎಕರೆಯ ಪೈಕಿ 1,000ಕ್ಕೂ ಹೆಚ್ಚು ಎಕರೆ ಜಮೀನು ಕೆಐಎಡಿಬಿಗೆ ನೀಡಲಾಗಿದೆ. ಆಗ ಯಾಕೆ ಹೋರಾಟವಿಲ್ಲ? 75% ಜನರು ತಮಗೆ ಬೇಕಾದ ಪರಿಹಾರವನ್ನು ಕೇಳಿದ್ದಾರೆ,” ಎಂದರು.
ರೈತರೊಂದಿಗೆ ಚರ್ಚೆ ನಡೆಸದಿರುವ ಬಗ್ಗೆ ಕೇಳಿದಾಗ, “ರೈತರನ್ನು ಕರೆಯುವುದಿಲ್ಲ. ನಾನೇ ಅವರ ಬಳಿಗೆ ಹೋಗಿ ಚರ್ಚೆ ಮಾಡುತ್ತೇನೆ. ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಅವರೂ ನಮ್ಮ ರೈತರೇ,” ಎಂದು ತಿಳಿಸಿದರು.
ಜನಸ್ಪಂದನ ಕಾರ್ಯಕ್ರಮ
ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶಿವಕುಮಾರ್, “ನಮ್ಮ ಕ್ಷೇತ್ರದಲ್ಲಿ ದೊಡ್ಡ ಸಮಸ್ಯೆಗಳಿಲ್ಲ. ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಇಂದು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಪಿಂಚಣಿ, ಇ-ಖಾತಾ, ಜಿಎಸ್ಟಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇವೆ,” ಎಂದು ತಿಳಿಸಿದರು.