ಸದಾಶಿವನಗರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಾಳೆ (ಎಪ್ರಿಲ್ 8) ಎಐಸಿಸಿ ವರ್ಕಿಂಗ್ ಕಮಿಟಿ ಸಭೆ ಅಹಮದಾಬಾದ್ನಲ್ಲಿ ನಡೆಯಲಿದೆ ಎಂದು ತಿಳಿಸಿದರು. ಖರ್ಗೆ ಅವರು ಸದಾಶಿವನಗರ ನಿವಾಸದಿಂದ ಅಹಮದಾಬಾದ್ಗೆ ತೆರಳಿದರು.
ಖರ್ಗೆ ಅವರ ಹೇಳಿಕೆ ಹೀಗಿತ್ತು:
“ನಾಳೆಯ ಸಭೆಯಲ್ಲಿ ದೇಶದ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಈ ಕುರಿತು ನಾವು ಅಜೆಂಡಾ ಸಿದ್ಧಪಡಿಸಿದ್ದೇವೆ. ಕೆಲವು ನಿರ್ಣಯಗಳು (ರೆಸಲ್ಯೂಶನ್) ಮಂಡನೆ ಮಾಡಲಾಗುತ್ತದೆ. ಹಿಂದಿನ ಸಭೆಯ ನಿರ್ಧಾರಗಳನ್ನು ದೃಢೀಕರಿಸುತ್ತೇವೆ. ದೇಶದ ಭವಿಷ್ಯಕ್ಕಾಗಿ ಹೊಸ ಅಜೆಂಡಾವನ್ನು ರೂಪಿಸಿದ್ದೇವೆ. ಆದರೆ ಇದರ ವಿವರಗಳನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಭೆ ಬಳಿಕವೇ ಘೋಷಣೆ ಮಾಡುತ್ತೇವೆ.”
“ಸಂಘಟನೆ ವರ್ಷ ಎಂಬ ಘೋಷಣೆಯ ವಿಚಾರದಲ್ಲೂ ಕ್ರಮಬದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈಗಾಗಲೇ ಬಿಹಾರ, ಅಸ್ಸಾಂಗಳಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಇನ್ನು ಉಳಿದ ರಾಜ್ಯಗಳಲ್ಲೂ ಹಂತ ಹಂತವಾಗಿ ಮುಂದುವರೆಯುತ್ತೇವೆ” ಎಂದು ಖರ್ಗೆ ಹೇಳಿದರು.
ಈಶ್ವರ್ ಖಂಡ್ರೆ ಪ್ರತಿಕ್ರಿಯೆ:
ಮತ್ತೊಂದೆಡೆ, ಸಚಿವ ಈಶ್ವರ್ ಖಂಡ್ರೆ ಕೆಪಿಸಿಸಿ ಅಧ್ಯಕ್ಷರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದರು. “ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ವೇಣುಗೋಪಾಲ್ ಅವರ ಭೇಟಿಯಾದಿದ್ದು, ಅಭಿವೃದ್ಧಿ ಸಂಬಂಧಿತ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೆ. ಯಾವುದೇ ಉದ್ದೇಶಿತ ಮಾತುಕತೆ ನಡೆದಿಲ್ಲ. ದೆಹಲಿಗೆ ಹೋದಾಗ ಹೈಕಮಾಂಡ್ ಜೊತೆ ಸಭೆ ನಡೆಸುತ್ತೇವೆ” ಎಂದು ಅವರು ತಿಳಿಸಿದರು.
“ಸತೀಶ್ ಜಾರಕಿಹೊಳಿ ಮತ್ತು ನಾನು ಇಬ್ಬರೂ ಹಿಂದೆ ಕಾರ್ಯಾಧ್ಯಕ್ಷರಾಗಿದ್ದೆವು. ಯಾರಿಗೆ ಅವಕಾಶ ಕೊಟ್ಟರೂ ಬೆಂಬಲಿಸುವೆವು. ಹೈಕಮಾಂಡ್ಗೆ ಯಾವುದೇ ಒತ್ತಡ ಇಲ್ಲ. ಈಗ ಕೆಪಿಸಿಸಿ ಅಧ್ಯಕ್ಷ ಹುದ್ದೆಯೂ ಖಾಲಿಯಿಲ್ಲ. ಅಂಥಹ ಪರಿಸ್ಥಿತಿಯಲ್ಲಿ ಚರ್ಚೆಯ ಅವಶ್ಯಕತೆಯೇ ಇಲ್ಲ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತಿದೆ” ಎಂದು ಖಂಡ್ರೆ ಸ್ಪಷ್ಟಪಡಿಸಿದರು.
ಬಿಜೆಪಿ ಪ್ರತಿಭಟನೆಯನ್ನು ಖಂಡಿಸಿದ ಖಂಡ್ರೆ:
“ಬಿಜೆಪಿಯವರಿಗೆ ನೈಜ ಕಾಳಜಿ ಇಲ್ಲ. ಅವರು ಅವರೇ ಸರ್ಕಾರದಲ್ಲಿದ್ದು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಪೆಟ್ರೋಲ್, ಡಿಸೇಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದರೆ ಅವರು ಕೇಂದ್ರದ ವಿರುದ್ಧ ಹೋರಾಟ ಮಾಡಲು ಮುಂದೆ ಬರುವುದಿಲ್ಲ. ಬಡವರಿಗೆ ಬದಲಾಗಿ ಕೋಟ್ಯಾದಿಪತಿಗಳಿಗೆ ಅನುಕೂಲವಾಗುವ ನೀತಿಗಳನ್ನು ಜಾರಿಗೆ ತರುತ್ತಿದ್ದಾರೆ. ಆ ನೀತಿಗಳ ವಿರುದ್ಧವೇ ಅವರು ಹೋರಾಡಬೇಕು” ಎಂದು ಖಂಡ್ರೆ ಕಿಡಿಕಾರಿದರು.
Discover more from amiroNEWS
Subscribe to get the latest posts sent to your email.