ಬೆಂಗಳೂರು: ಬಾಂಗ್ಲಾದೇಶದ ಜವಳಿ ಉದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ್ದು, ಪೆಂಟಗಾನ್ ನಿಟ್ ಕಾಂನ ಮಾಲೀಕ ಬಿಪಿನ್ ಮುಂದ್ರಾ ಅವರು ಜವಳಿ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದಾರೆ. ರಾಜ್ಯ ಸರ್ಕಾರವು ಉದ್ಯಮ ಸ್ಥಾಪನೆಗೆ ಅಗತ್ಯ ಸಹಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಚರ್ಚೆಯಲ್ಲಿ ಸಚಿವ ಶಿವಾನಂದ ಪಾಟೀಲ, ಕರ್ನಾಟಕದಲ್ಲಿ ಜವಳಿ ಘಟಕ ಸ್ಥಾಪನೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಶಿಗ್ಗಾವಿಯನ್ನು ಸೂಕ್ತ ಸ್ಥಳಗಳಾಗಿ ಸಲಹೆ ನೀಡಿದರು. “ಈ ಮೂರು ಕಡೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಿವೆ. ಶಿಗ್ಗಾವಿಗೆ ವಿಮಾನ ಮತ್ತು ರೈಲ್ವೆ ಸಂಪರ್ಕವಿದೆ, ಜೊತೆಗೆ ಕೇವಲ ಮೂರು ತಿಂಗಳಲ್ಲಿ ಯೂನಿಟ್ ಆರಂಭಿಸಬಹುದು. ಗೌರಿಬಿದನೂರು ಮತ್ತು ಚಿಕ್ಕಬಳ್ಳಾಪುರ ರಾಜಧಾನಿಗೆ ಸಮೀಪದಲ್ಲಿವೆ. ಈ ಸ್ಥಳಗಳಿಗೆ ಭೇಟಿ ನೀಡಿ ಸೂಕ್ತ ಸ್ಥಳ ಆಯ್ಕೆ ಮಾಡಿಕೊಳ್ಳಿ,” ಎಂದು ಸಚಿವರು ತಿಳಿಸಿದರು.
ಪೆಂಟಗಾನ್ ನಿಟ್ ಕಾಂನ ಬಗ್ಗೆ ಮಾಹಿತಿ ಪಡೆದ ಸಚಿವರು, ಬಾಂಗ್ಲಾದೇಶದ ಜವಳಿ ಉದ್ಯಮಕ್ಕೆ ಅಲ್ಲಿನ ಸರ್ಕಾರ ನೀಡುವ ಸೌಲಭ್ಯಗಳನ್ನು ತಿಳಿದುಕೊಂಡರು. “ಬಾಂಗ್ಲಾದೇಶಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ವಿದ್ಯುತ್ ಶುಲ್ಕ ಕಡಿಮೆ ಇದ್ದು, ಸರ್ಕಾರ ಸಬ್ಸಿಡಿ ದರದಲ್ಲಿ ವಿದ್ಯುತ್ ಪೂರೈಸುತ್ತಿದೆ. ಜವಳಿ ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ,” ಎಂದು ಭರವಸೆ ನೀಡಿದರು.
ಪೆಂಟಗಾನ್ ನಿಟ್ ಕಾಂನ ಮಾಲೀಕ ಬಿಪಿನ್ ಮುಂದ್ರಾ, “ನಾವು 1980ರಿಂದ ಜವಳಿ ಕ್ಷೇತ್ರದಲ್ಲಿದ್ದು, ವಾರ್ಷಿಕ 13 ಶತಕೋಟಿ ಡಾಲರ್ ವಹಿವಾಟು ಹೊಂದಿದ್ದೇವೆ. ಕರ್ನಾಟಕದಲ್ಲಿ ಉದ್ಯಮ ವಿಸ್ತರಣೆಗೆ ಆಸಕ್ತರಿದ್ದೇವೆ. ಬಾಂಗ್ಲಾದೇಶದಲ್ಲಿ ಒಂದು ಯೂನಿಟ್ ವಿದ್ಯುತ್ಗೆ 9 ರೂ. ಶುಲ್ಕವಿದ್ದು, ಜವಳಿ ಕ್ಷೇತ್ರಕ್ಕೆ ಸೂಕ್ತ ವಾತಾವರಣ ಇಲ್ಲ. ಕರ್ನಾಟಕದೊಂದಿಗೆ ನಮಗೆ ಸಂಬಂಧವಿದ್ದು, ಏಕಗವಾಕ್ಷಿ ವ್ಯವಸ್ಥೆ ಮತ್ತು ಆಡಳಿತಾತ್ಮಕ ವಿಳಂಬವಿಲ್ಲದಿದ್ದರೆ ತ್ವರಿತವಾಗಿ ಬಂಡವಾಳ ಹೂಡಿಕೆಗೆ ಸಿದ್ಧರಿದ್ದೇವೆ,” ಎಂದು ತಿಳಿಸಿದರು.
ಸಭೆಯಲ್ಲಿ ಜವಳಿ ಇಲಾಖೆ ಆಯುಕ್ತೆ ಜ್ಯೋತಿ, ಕೆಎಸ್ಟಿಐಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ರವೀಂದ್ರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.