ಬೆಂಗಳೂರು: ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತವು 2024-25ನೇ ಹಣಕಾಸು ವರ್ಷದಲ್ಲಿ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿ, ರಾಜ್ಯ ಸರ್ಕಾರಕ್ಕೆ ಲಾಭಾಂಶದ ಪಾಲಾಗಿ ₹1.69 ಕೋಟಿಗಳ ಚೆಕ್ ಅನ್ನು ಹಸ್ತಾಂತರಿಸಿದೆ.
53 ವರ್ಷಗಳಿಂದ ರಾಜ್ಯದ ರೈತರಿಗೆ ನಿರಂತರ ಸೇವೆ ಸಲ್ಲಿಸುತ್ತಿರುವ ಈ ನಿಗಮವು ಪ್ರಸಕ್ತ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿದೆ. ನಿಗಮದ ಒಟ್ಟು ವಹಿವಾಟು ₹349.72 ಕೋಟಿಗಳಷ್ಟಾಗಿದ್ದು, ನಿವ್ವಳ ಲಾಭ ₹13.48 ಕೋಟಿಗಳನ್ನು ತಲುಪಿದೆ. ಸರ್ಕಾರದ ನಿಯಮಾವಳಿಯಂತೆ ನಿವ್ವಳ ಲಾಭದ 30% ಭಾಗವಾದ ₹1.69 ಕೋಟಿಗಳನ್ನು ಲಾಭಾಂಶವಾಗಿ ಪಾವತಿಸಲಾಗಿದೆ.
ಪ್ರಸ್ತುತ ನಿಗಮವು 24 ಬೆಳೆಗಳ 153 ವಿವಿಧ ತಳಿಗಳ ಪ್ರಮಾಣಿತ ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ರೈತರಿಗೆ ತಲುಪಿಸುತ್ತಿದೆ. ಸುಮಾರು 4.50 ಲಕ್ಷ ರೈತರು ನಿಗಮದ ಬೀಜಗಳನ್ನು ಬಳಸಿಕೊಂಡು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಚೆಕ್ ಹಸ್ತಾಂತರ ಸಮಾರಂಭ: ಫೆಬ್ರವರಿ 06, 2026ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ನಿಗಮದ ಅಧ್ಯಕ್ಷ ಎಂ. ಅಂಜನಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಲಾಭಾಂಶದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಕೃಷಿ ಆಯುಕ್ತ ವೈ.ಎಸ್. ಪಾಟೀಲ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ.ಜಿ. ಅವರು ಉಪಸ್ಥಿತರಿದ್ದರು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಾಧನೆಯು ರಾಜ್ಯದ ಕೃಷಿ ವಲಯಕ್ಕೆ ಬಲವರ್ಧನೆ ನೀಡುವ ಜೊತೆಗೆ ನಿಗಮದ ಸಮರ್ಥ ನಿರ್ವಹಣೆಯನ್ನು ತೋರಿಸುತ್ತದೆ.












