ಬೆಂಗಳೂರು: ರಾಜ್ಯದ ಸಾರಿಗೆ ನಿಗಮಗಳು ಭಾರೀ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಸಾಲದ ಅವಲಂಬನೆಯತ್ತ ಮುನ್ನಡೆಯುತ್ತಿರುವುದು ಗಂಭೀರ ಚರ್ಚೆಗೆ ಕಾರಣವಾಗಿದೆ. ಈ ಹಿಂದೆ ಲಾಭದಾಯಕವೆಂದು ಘೋಷಿಸಲಾದ ಸಾರಿಗೆ ನಿಗಮಗಳು ಇದೀಗ ಭಾರೀ ನಷ್ಟಕ್ಕೆ ಸಿಲುಕಿದ್ದು, ಸರ್ಕಾರ ಸಾಲ ಪಡೆಯಲು ಮುಂದಾಗಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ, ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC), ಎನ್ಡಬ್ಲ್ಯುಕೆಆರ್ಟಿಸಿ (NWKRTC), ಮತ್ತು ಕೆಕೆಆರ್ಟಿಸಿ (KKRTC) ಸೇರಿ ಒಟ್ಟಾರೆ ₹2,000 ಕೋಟಿ ಸಾಲ ಪಡೆಯಲು ನಿರ್ಧರಿಸಿರುವ ಮಾಹಿತಿ ಹೊರಬಂದಿದೆ. ಇದರಲ್ಲಿ ಬಿಎಂಟಿಸಿ ಮಾತ್ರ ₹589.20 ಕೋಟಿ ಸಾಲಕ್ಕಾಗಿ ಹಾತೊರೆಯುತ್ತಿದೆ.
ಈ ಹಿಂದೆ, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸಾರಿಗೆ ನಿಗಮಗಳು ಲಾಭದಲ್ಲಿ ನಡೆಯುತ್ತವೆ ಎಂದು ಘೋಷಿಸಿದ್ದರು. ಆದರೆ, ಈಗ ಅದೇ ನಿಗಮಗಳು ಸಾಲದ ಬಲೆಗೆ ಸಿಲುಕಿರುವುದು ಸರ್ಕಾರದ ಆರ್ಥಿಕ ನಿರ್ವಹಣೆಯ ಕುರಿತು ಪ್ರಶ್ನೆಗಳನ್ನು ಮೂಡಿಸಿದೆ.
ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗಿದೆ ಎಂಬ ಆರೋಪಗಳು ಎದುರಾಗಿದ್ದು, ಸರ್ಕಾರದ ನಿರ್ಧಾರಗಳು ಇನ್ನಷ್ಟು ಆರ್ಥಿಕ ಸಂಕಷ್ಟವನ್ನು ಉಂಟುಮಾಡುವ ಆತಂಕವಿದೆ.
ಸಾರಿಗೆ ನಿಗಮಗಳ ಸಾಲ ವೃದ್ಧಿ ಮತ್ತು ಪ್ರಯಾಣ ದರ ಹೆಚ್ಚಳದ ನಡುವೆ, ಸಾರ್ವಜನಿಕರು ಸರ್ಕಾರದ ನೀತಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.