ಬೀದರ್: ಕರ್ನಾಟಕ ಮಾಧ್ಯಮ ಅಕಾಡೆಮಿಯು ಕಲ್ಯಾಣ ಕರ್ನಾಟಕ ವಿಭಾಗದ ಪತ್ರಕರ್ತರಿಗಾಗಿ ಒಂದು ದಿನದ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಆಗಸ್ಟ್ 6, 2025ರಂದು ಬೀದರ್ನಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮವು ಪತ್ರಕರ್ತರ ವೃತ್ತಿಕೌಶಲ್ಯವನ್ನು ಉನ್ನತೀಕರಿಸುವ ಉದ್ದೇಶ ಹೊಂದಿದೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಈಶ್ವರ್ ಖಂಡ್ರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ‘ಪರಿಸರ ಸಂರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ’ ಕುರಿತು ಮಾತನಾಡಲಿದ್ದಾರೆ. ಪೌರಾಡಳಿತ ಸಚಿವ ಶ್ರೀ ರಹೀಂ ಖಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ತರಬೇತಿಯಲ್ಲಿ “ನ್ಯೂಸ್ ರೂಂನಲ್ಲಿ AI ಮತ್ತು ನಾನು” ಮತ್ತು “ಸುದ್ದಿಯಲ್ಲಿ ನಿಖರತೆ ಮತ್ತು ಪರಿಣಾಮಕಾರಿ ಸಂವಹನ” ಎಂಬ ವಿಷಯಗಳ ಕುರಿತು ಗೋಷ್ಠಿಗಳು ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಕಲ್ಯಾಣ ಕರ್ನಾಟಕ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪತ್ರಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಆಯೇಶಾ ಖಾನಂ ಅವರು, “ಪತ್ರಕರ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಪರ ಕೌಶಲ್ಯವನ್ನು ಉತ್ತಮಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ. ಕಲ್ಯಾಣ ಕರ್ನಾಟಕದ ಇತರ ಜಿಲ್ಲೆಗಳಿಂದ ಆಗಮಿಸುವ, ಮುಂಚಿತವಾಗಿ ನೋಂದಾಯಿಸಿಕೊಂಡಿರುವ ಪತ್ರಕರ್ತರಿಗೆ ತರಬೇತಿ ದಿನದಂದು ವಸತಿ ಸೌಲಭ್ಯ ಒದಗಿಸಲಾಗುವುದು.
ಆಸಕ್ತ ಪತ್ರಕರ್ತರು ಆಗಸ್ಟ್ 2, 2025ರೊಳಗೆ https://forms.gle/uwoA67T1b5gBPDuB8 ಗೂಗಲ್ ಫಾರ್ಮ್ ಭರ್ತಿಮಾಡಿ ನೋಂದಾಯಿಸಿಕೊಳ್ಳಬೇಕು ಎಂದು ಕಾರ್ಯದರ್ಶಿ ಸಹನಾ ಎಂ. ಕೋರಿದ್ದಾರೆ.