ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮೂಲಕ ಸಾರ್ವಜನಿಕರನ್ನೇ ಲೂಟಿ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದ ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ನಡೆದ ಆಹೋರಾತ್ರಿ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಕೊಟ್ಟಿತ್ತು, ಆದರೆ ಈಗ ಜನರ ಮೇಲೆ ಬೆಲೆ ಏರಿಕೆ ಬೇರೋನ್ ಮಾಡುತ್ತಿದೆ. ಎರಡು ವರ್ಷಗಳಲ್ಲಿ ಹಾಲಿನ ದರವನ್ನು ಮೂರನೇ ಬಾರಿ ಹೆಚ್ಚಿಸಲಾಗಿದೆ. ಈ ಸರ್ಕಾರದಲ್ಲಿ 136 ಜನ ಕಳ್ಳರು ಇದ್ದಾರೆ. ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ, ಅದಕ್ಕಾಗಿ ಬೆಲೆ ಏರಿಕೆ ಮೂಲಕ ಲೂಟಿ ಮಾಡುತ್ತಿದೆ” ಎಂದು ಆರೋಪಿಸಿದರು.
“ಬಜೆಟ್ನಲ್ಲಿ ಯಾವುದೇ ಹೊಸ ತೆರಿಗೆ ಹೇರುವುದಿಲ್ಲ ಎಂದು ಹೇಳಿದ ಸರ್ಕಾರ, ಈಗಲ್ಲೆಲ್ಲ ಬೆಲೆ ಏರಿಕೆ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕರ್ನಾಟಕದ ಮನೆಮನೆ ಲೂಟಿ ಮಾಡಲಾಗುತ್ತಿದೆ. ಸಚಿವರು ತಾವು ಅಂಗಡಿ ತೆರೆದಂತೆ ಆಡಳಿತ ನಡೆಸುತ್ತಿದ್ದಾರೆ. 40% ಕಮಿಷನ್ ಆರೋಪಕ್ಕೆ ಸಾಕ್ಷಿ ಇಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಕಾಂಗ್ರೆಸ್ ಸರ್ಕಾರವೇ ಈಗ 60% ಕಮಿಷನ್ ಪಡೆದುಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ನಲ್ಲಿ ₹15,000 ಕೋಟಿ ಹಗರಣ ನಡೆದಿದೆ. ಸಿದ್ದರಾಮಯ್ಯ ಹೆಸರಿಗಷ್ಟೇ ಮುಖ್ಯಮಂತ್ರಿ, ಆದರೆ ಸರ್ಕಾರದ ಗಾಲಿ ಕುರ್ಚಿಯಲ್ಲಿದೆ” ಎಂದು ತೀವ್ರ ಟೀಕಿಸಿದರು.
ವಕ್ಫ್ ಕಾಯ್ದೆ ತಿದ್ದುಪಡಿ ಸ್ವಾಗತಾರ್ಹ
ವಕ್ಫ್ ಕಾಯ್ದೆಗೆ ಕೇಂದ್ರ ಸರ್ಕಾರ ತಂದಿರುವ ತಿದ್ದುಪಡಿಯನ್ನು ಸ್ವಾಗತಿಸುತ್ತೇವೆ ಎಂದು ಆರ್. ಅಶೋಕ್ ಹೇಳಿದರು.
“ಕಾಂಗ್ರೆಸ್ ತನ್ನ ಓಲೈಕೆ ರಾಜಕಾರಣಕ್ಕಾಗಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದರ ಮೂಲಕ ಯಾವುದೇ ಜಮೀನನ್ನು ವಕ್ಫ್ ಬೋರ್ಡ್ ಆಸ್ತಿಯೆಂದು ಘೋಷಿಸಿ ಕಬಳಿಸುವ ಅವಕಾಶ ನೀಡಿತ್ತು. ಇದರಿಂದ ರೈತರ ಜಮೀನು, ದೇವಸ್ಥಾನ, ಮಠ-ಮಂದಿರಗಳ ಆಸ್ತಿಯೂ ಅಪಾಯಕ್ಕೆ ಒಳಗಾಗಿತ್ತು. ಆದರೆ ಈಗ ಎನ್ಡಿಎ ಸರ್ಕಾರ ತಂದಿರುವ ತಿದ್ದುಪಡಿಯಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಮಠ-ಮಾನ್ಯಗಳ ಜಮೀನು ಸುರಕ್ಷಿತವಾಗಿ ಉಳಿಯಲಿದೆ” ಎಂದು ಅವರು ತಿಳಿಸಿದರು.
“ಈ ಮಹತ್ವದ ತಿದ್ದುಪಡಿಯಿಗಾಗಿ ಪ್ರಧಾನಿ ನರೇಂದ್ರ ಮೋದಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾಹ್ಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ಹೇಳಿದರು.