ಬೆಂಗಳೂರು:ಕುವೆಂಪು ಅವರ ಪ್ರಖರ ವೈಚಾರಿಕತೆ ಜಾತಿ ಅಸಮಾನತೆ ಇರುವವರೆಗೂ ಸಮಾಜಕ್ಕೆ ಪ್ರಸ್ತುತವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಜನ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಬರಗೂರು ರಾಮಚಂದ್ರಪ್ಪ ಸಂಪಾದಿತ “ಕುವೆಂಪು ವಿಚಾರ ಕ್ರಾಂತಿ” ಕೃತಿಯನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕುವೆಂಪು ಅವರಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸ್ಪಷ್ಟತೆ ಇತ್ತು. ಜಾತಿ ತಾರತಮ್ಯ ಇಲ್ಲದ ಸಮಾನ ಸಮಾಜವೇ ಅವರ ಆಶಯವಾಗಿತ್ತು. ಆದರೆ, ಇಂದು ಶಿಕ್ಷಣ ಹೆಚ್ಚಾದಂತೆ ಮೌಡ್ಯ ಮತ್ತು ಕಂದಾಚಾರಗಳು ಹೆಚ್ಚಾಗುತ್ತಿರುವುದು ವಿಷಾದಕರ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು. “ಜಾತಿ ವ್ಯವಸ್ಥೆಯ ಸ್ಥಾಯಿತ್ವದಿಂದ ಸಮಾಜದ ಪ್ರಗತಿಯ ವೇಗ ಕುಂಠಿತವಾಗಿದೆ. ನಮ್ಮ ಜಾತಿಯ ದೃಷ್ಟಿಕೋನ ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೆ ಅಡ್ಡಿಯಾಗಿದೆ” ಎಂದು ಅವರು ತಿಳಿಸಿದರು.
ನಮ್ಮ ಸಂವಿಧಾನದಲ್ಲಿ ಕುವೆಂಪು ಮತ್ತು ಬಸವಣ್ಣ ಅವರ ಆಶಯಗಳು ಅಡಕವಾಗಿವೆ. ಆದರೆ, ಸಂವಿಧಾನದ ಮೌಲ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ಆಗಬೇಕು. ಈ ಉದ್ದೇಶದಿಂದಲೇ ‘ಸಂವಿಧಾನ ಓದು’ ಮತ್ತು ‘ಸಂವಿಧಾನ ಪೀಠಿಕೆ’ ಅಭಿಯಾನವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಜಕಾರಣಿಯಾಗಿ ಕೆಲವು ಸಾಮಾಜಿಕ ನಂಬಿಕೆಗಳ ಜೊತೆಗೆ ನಡೆಯಬೇಕಾದ ಸಂದಿಗ್ಧತೆಯನ್ನು ಒಪ್ಪಿಕೊಂಡ ಅವರು, “ದೇವಸ್ಥಾನಕ್ಕೆ ಹೋದರೆ ಕುಂಕುಮ ಇಡುತ್ತಾರೆ, ಇದಕ್ಕೆ ಕತೆ ಕಟ್ಟುತ್ತಾರೆ. ಗ್ರಾಮೀಣ ಭಾಗದಲ್ಲಿ ದೇವಸ್ಥಾನಕ್ಕೆ ಹೋಗದಿದ್ದರೆ ಬೇರೆ ಕತೆ ಕಟ್ಟುತ್ತಾರೆ. ಇಂತಹ ಕತೆಗಳನ್ನು ಕೆಲವರು ನಂಬಿದರೆ ಮತಗಳೇ ಸಿಗದಿರಬಹುದು” ಎಂದು ಹಾಸ್ಯಚಟಾಕಿಯಿಂದ ಹೇಳಿದರು.
“ಕೇವಲ ಕಾನೂನಿನ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ. ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಚಿಂತನೆ ಬೆಳೆಯದಿದ್ದರೆ ಮೌಡ್ಯ ನಿಷೇಧ ಕಾಯ್ದೆಯಂತಹ ಕಾನೂನುಗಳು ಪರಿಣಾಮಕಾರಿಯಾಗಲಾರವು. ಎಲ್ಲ ಕಾನೂನುಗಳೂ ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿರಬೇಕು” ಎಂದರು.
ಕುವೆಂಪು ಅವರ “ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು, ಬಡತನದ ಬೇರು ಕಿತ್ತುಹಾಕಲು ಬನ್ನಿ” ಎಂಬ ಕರೆಯನ್ನು ಉಲ್ಲೇಖಿಸಿದ ಸಿಎಂ, ಈ ಆಶಯವನ್ನು ಸಮಾಜ ಪಾಲಿಸಿದರೆ ಅಸಮಾನತೆಯಿಂದ ಸಮಾನತೆಯ ಕಡೆಗೆ ಚಲಿಸಬಹುದು ಎಂದರು. ಕುವೆಂಪು ಅವರ ಆಶಯಗಳು ಜಾಗತಿಕವಾಗಿ ಅನ್ವಯವಾಗುವುದರಿಂದ ಈ ಕೃತಿಯನ್ನು ಇತರ ಭಾಷೆಗಳಿಗೂ ತರ್ಜುಮೆ ಮಾಡಬೇಕು ಎಂದು ಆಶಿಸಿದರು.
ದ್ವಿಭಾಷಾ ಸೂತ್ರ: ಸಿಎಂ ಅಭಿಪ್ರಾಯ
ದ್ವಿಭಾಷಾ ಸೂತ್ರವು ತಮ್ಮ ವೈಯಕ್ತಿಕ ಅಭಿಪ್ರಾಯವಾಗಿದ್ದು, ಇದನ್ನು ಸರ್ಕಾರದ ನೀತಿಯಾಗಿ ರೂಪಿಸಲು ಪ್ರಯತ್ನಿಸುವುದಾಗಿ ಸಿಎಂ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಾಡೋಜ ಡಾ. ಹಂ.ಪ.ನಾಗರಾಜಯ್ಯ, ವಿಶ್ರಾಂತ ನ್ಯಾಯಾಧೀಶ ಹೆಚ್.ಎನ್.ನಾಗಮೋಹನ್ ದಾಸ್, ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ, ಕೃತಿಯ ಸಂಪಾದಕ ಪ್ರೊ.ಬರಗೂರು ರಾಮಚಂದ್ರಪ್ಪ, ಜನ ಪ್ರಕಾಶನದ ಬಿ.ರಾಜಶೇಖರಮೂರ್ತಿ, ಹೆಚ್.ಎನ್.ಹರಿ ಮತ್ತು ಎ.ವಿ.ಶ್ರೀಹರಿ ಉಪಸ್ಥಿತರಿದ್ದರು.