ಬೆಂಗಳೂರು, ಮೇ 3: ಕೇಂದ್ರ ಸರ್ಕಾರಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆಯನ್ನು ನೀಡಿದರೂ ರಾಜ್ಯಕ್ಕೆ ಕೇವಲ 60 ಸಾವಿರ ಕೋಟಿ ರೂ. ಮಾತ್ರ ವಾಪಾಸ್ ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಅನ್ಯಾಯದ ವಿರುದ್ಧ ದಕ್ಷಿಣ ಭಾರತದ ರಾಜ್ಯಗಳೊಂದಿಗೆ ಸೇರಿ ಧ್ವನಿ ಎತ್ತುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಬೆಂಗಳೂರಿನ ಬ್ಯಾಂಕ್ವೆಂಟ್ ಹಾಲ್ನಲ್ಲಿ ಆರ್ಥಿಕ ಇಲಾಖೆಯ ಕಾರ್ಯಕ್ರಮದಲ್ಲಿ ಹೊಸ ವಾಹನಗಳಿಗೆ ಚಾಲನೆ ನೀಡಿ, ಅನುಕಂಪ ಆಧಾರಿತ ನೇಮಕಾತಿ ಆದೇಶ ವಿತರಿಸಿ ಮಾತನಾಡಿದ ಸಿಎಂ, “ನಾವು ಆರ್ಥಿಕ ಇಲಾಖೆಗೆ ವಾಹನ, ಸಿಬ್ಬಂದಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇವೆ. ಆದರೆ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲೇಬೇಕು. ಇದರಲ್ಲಿ ಯಾವುದೇ ರಾಜಿಯಿಲ್ಲ,” ಎಂದು ಸ್ಪಷ್ಟಪಡಿಸಿದರು.
ಕೇಂದ್ರದ ಧೋರಣೆಯ ವಿರುದ್ಧ ಆಕ್ರೋಶ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳಿಗೆ ಶೇ.50ರಷ್ಟು ತೆರಿಗೆ ವಾಪಾಸ್ ಕೊಡಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದರು. ಆದರೆ, ಈಗ ಪ್ರಧಾನಿಯಾಗಿರುವ ಅವರೇ ರಾಜ್ಯಗಳಿಗೆ ದೊಡ್ಡ ಮಟ್ಟದ ಅನ್ಯಾಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. “ಹದಿನೈದನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 11,495 ಕೋಟಿ ರೂ. ಅನ್ಯಾಯವಾಗಿದೆ. ಕೇಂದ್ರ ಹಣಕಾಸು ಸಚಿವೆ ಘೋಷಣೆ ಮಾಡಿದ್ದ ಹಣದಲ್ಲಿ ಒಂದು ಪೈಸೆಯೂ ರಾಜ್ಯಕ್ಕೆ ಬಂದಿಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತೆರಿಗೆ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ:
ತೆರಿಗೆ ವಂಚನೆ ಮತ್ತು ಸೋರಿಕೆ ತಡೆಯಲು ಸರ್ಕಾರ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಿದೆ ಎಂದ ಸಿಎಂ, “ತೆರಿಗೆ ಸಂಗ್ರಹದ ಗುರಿಯನ್ನು ತಲುಪದಿದ್ದರೆ ಯಾವುದೇ ಸಮರ್ಥನೆಯನ್ನೂ ಸ್ವೀಕರಿಸಲಾಗದು,” ಎಂದರು. ವೇತನ ಆಯೋಗದ ಶಿಫಾರಸ್ಸಿನಂತೆ ಸರ್ಕಾರಿ ನೌಕರರಿಗೆ ಪೂರ್ಣ ವೇತನವನ್ನು ಯಾವುದೇ ಚೌಕಾಸಿ ಇಲ್ಲದೆ ನೀಡಲಾಗಿದೆ ಎಂದು ಹೇಳಿದ ಅವರು, “ನೌಕರರು ಕೂಡ ಅದೇ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಬೇಕು,” ಎಂದು ಒತ್ತಾಯಿಸಿದರು.
ಗ್ಯಾರಂಟಿಗಳಿಗೆ ಹಣ ರಾಖೀಸ್, ಬಂಡವಾಳ ವೆಚ್ಚಕ್ಕೆ ಒತ್ತು:
ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ರಾಖೀಸಲಾಗಿದೆ ಎಂದ ಸಿಎಂ, “ಈ ವರ್ಷ 83 ಸಾವಿರ ಕೋಟಿ ರೂ. ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ. ಕಳೆದ ವರ್ಷ 52 ಸಾವಿರ ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ 31 ಸಾವಿರ ಕೋಟಿ ರೂ. ಹೆಚ್ಚಿನ ವೆಚ್ಚವನ್ನು ಒದಗಿಸಿದ್ದೇವೆ. ಆದರೂ ಬಿಜೆಪಿ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಆರೋಪಿಸುತ್ತಿದೆ,” ಎಂದು ಟೀಕಿಸಿದರು.
ದಕ್ಷಿಣ ರಾಜ್ಯಗಳ ಒಗ್ಗಟ್ಟಿನ ಕರೆ:
ಕೇಂದ್ರದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಆಗಿರುವ ಅನ್ಯಾಯದ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದು ಸಿಎಂ ಕರೆ ನೀಡಿದರು. “ಕರ್ನಾಟಕದ ಜನತೆಯ ಹಣವನ್ನು ಕೇಂದ್ರ ರಾಜ್ಯಕ್ಕೆ ಸಮರ್ಪಕವಾಗಿ ವಾಪಾಸ್ ನೀಡುತ್ತಿಲ್ಲ. ಇದನ್ನು ಎಲ್ಲ ದಕ್ಷಿಣ ರಾಜ್ಯಗಳು ಒಟ್ಟಾಗಿ ವಿರೋಧಿಸಬೇಕು,” ಎಂದು ಒತ್ತಾಯಿಸಿದರು.