ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಈಶಾ ಫೌಂಡೇಶನ್ ಆಯೋಜಿಸಿದ್ದ ಮಹಾಶಿವರಾತ್ರಿ ಉತ್ಸವ ಬುಧವಾರ ಅದ್ಧೂರಿಯಾಗಿ ನೆರವೇರಿತು. ಈ ವಿಶೇಷ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಈಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಅವರು ಭಾಗವಹಿಸಿದರು.
ಉತ್ಸವದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸದ್ಗುರು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಅವರೊಂದಿಗೆ ಚರ್ಚೆ ನಡೆಸಿದರು. ಈ ಭೇಟಿಯಲ್ಲಿ ಶಿವಕುಮಾರ್ ಅವರ ಪತ್ನಿ ಉಷಾ, ಪುತ್ರಿ ನಾದಿನಿ, ಕುಣಿಗಲ್ ಶಾಸಕ ಡಾ. ರಂಗನಾಥ್ ಅವರ ಪತ್ನಿ ಡಾ. ಸುಮಾ ಮತ್ತಿತರರು ಉಪಸ್ಥಿತರಿದ್ದರು.
ಈಶಾ ಫೌಂಡೇಶನ್ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಮಹಾಶಿವರಾತ್ರಿಯಂದು ನಡೆದ ಈ ವಿಶಿಷ್ಟ ಉತ್ಸವದಲ್ಲಿ ಭಕ್ತಿ, ಸಂಗೀತ ಮತ್ತು ಯೋಗದ ಸಂಯೋಜನೆಯಿಂದ ಭಕ್ತರು ಭಾವೋದ್ರಿಕ್ತಗೊಳ್ಳುವಂತಹ ಅನುಭವ ಪಡೆದರು.