ಶಿಕ್ಷಕರು ಮಕ್ಕಳಲ್ಲಿ ಮತ್ತು ಮಕ್ಕಳ ಮೂಲಕ ಸಮಾಜದಲ್ಲಿ ಸಹೃದಯತೆ, ಸಮನ್ವಯತೆ, ಸಹಿಷ್ಣುತೆ, ಸದಾಚಾರ, ಸದ್ವಿಚಾರ, ಸಹಬಾಳ್ವೆ ಮತ್ತು ಸದಭಿರುಚಿಯನ್ನು ರೂಪಿಸುವ ಸಾಮಾಜಿಕ ರಾಯಭಾರಿಗಳು. ಇಂತಹ ಶಿಕ್ಷಕರನ್ನು ವಂದಿಸುವುದು ಉತ್ತಮ ಸಂಸ್ಕಾರವೆಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ಮೀಡಿಯಾ ಕನೆಕ್ಟ್ ಮತ್ತು ಪುಣ್ಯ ಫೌಂಡೇಷನ್ ಸಹಯೋಗದಲ್ಲಿ ವಿಧ್ಯಾಭವನದಲ್ಲಿ ಆಯೋಜಿಸಲಾದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಮಕೂರಿನ ಇಡಗೂರು ಸರ್ಕಾರಿ ಶಾಲೆಯ ಶಿಕ್ಷಕರು ಸಮಾಜಮುಖೀ ಪ್ರಜೆಗಳನ್ನು ರೂಪಿಸಿ ಸಮಾಜಕ್ಕೆ ಒಪ್ಪಿಸಿದ್ದಾರೆ ಎಂದರು. “25 ವರ್ಷಗಳ ಹಿಂದೆ ಶಿಕ್ಷಕರಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಇಂದು ತಮ್ಮ ಗುರುಗಳನ್ನು ವಂದಿಸುವ ಮೂಲಕ ತಮ್ಮ ಸಂಸ್ಕಾರವನ್ನು ಪ್ರದರ್ಶಿಸುತ್ತಿದ್ದಾರೆ,” ಎಂದು ಅವರು ತಿಳಿಸಿದರು.
“ರೈತರು, ಶಿಕ್ಷಕರು ಮತ್ತು ಸೈನಿಕರು ಆರೋಗ್ಯಕರ ಹಾಗೂ ನೆಮ್ಮದಿಯ ಸಮಾಜದ ಸೇನಾನಿಗಳು ಎಂದು ಮುಖ್ಯಮಂತ್ರಿಗಳು ಯಾವಾಗಲೂ ಹೇಳುತ್ತಾರೆ. ಇದಕ್ಕೆ ಐತಿಹಾಸಿಕ ಉದಾಹರಣೆಯೊಂದನ್ನು ನೆನಪಿಸುತ್ತೇನೆ,” ಎಂದ ಅವರು, ಸರ್ವಾಧಿಕಾರಿ ಹಿಟ್ಲರ್ನ ಪ್ರಸಂಗವನ್ನು ಉಲ್ಲೇಖಿಸಿದರು. “ಯುದ್ಧದಾಹಿಯಾಗಿದ್ದ ಹಿಟ್ಲರ್ ಯಾವುದೇ ದೇಶವನ್ನು ವಶಪಡಿಸಿಕೊಂಡಾಗ ಮೊದಲಿಗೆ ಶಿಕ್ಷಕರನ್ನು ಬಂಧಿಸುತ್ತಿದ್ದ. ಏಕೆಂದರೆ, ಶಿಕ್ಷಕರು ಮಕ್ಕಳನ್ನು ಮತ್ತು ಸಮಾಜವನ್ನು ಪ್ರಭಾವಿಸಿ, ಹೋರಾಟಗಳನ್ನು ರೂಪಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ತಿಳಿವಳಿಕೆ ಮತ್ತು ಭಯ ಎರಡೂ ಹಿಟ್ಲರ್ಗೆ ಇತ್ತು,” ಎಂದರು.
ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರ ಚಿಂತನೆಗಳಿಗೆ ಮೊದಲು ಸ್ಪಂದಿಸಿದವರು ಶಾಲಾ ಶಿಕ್ಷಕರೇ ಎಂದ ಅವರು, ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಉದಾಹರಣೆಯನ್ನು ನೀಡಿದರು. “ಗೋಪಾಲಗೌಡರು ತಮ್ಮ ಚಿಂತನೆಗಳನ್ನು ಜನರಿಗೆ ತಲುಪಿಸುವ ಮೊದಲು ಶಾಲೆಗಳಿಗೆ ತೆರಳಿ ಶಿಕ್ಷಕರು ಮತ್ತು ಮಕ್ಕಳಿಗೆ ವಿವರಿಸುತ್ತಿದ್ದರು. ಶಿಕ್ಷಕರು ಮತ್ತು ಮಕ್ಕಳ ಮೂಲಕ ಪೋಷಕರಿಗೆ ಸಂದೇಶ ತಲುಪುತ್ತಿತ್ತು,” ಎಂದು ವಿವರಿಸಿದರು.
ತಂತ್ರಜ್ಞಾನ ಮತ್ತು ಶಿಕ್ಷಣದ ಸವಾಲುಗಳು
ತಂತ್ರಜ್ಞಾನದ ಬೆಳವಣಿಗೆಯಿಂದ ಸಮಾಜ ವೇಗವಾಗಿ ಬದಲಾಗುತ್ತಿದ್ದು, ಶಿಕ್ಷಣದ ಅಗತ್ಯ ಮತ್ತು ಮಹತ್ವವೂ ರೂಪಾಂತರಗೊಳ್ಳುತ್ತಿದೆ ಎಂದ ಅವರು, “ಕಾರ್ಪೋರೇಟ್ ಜಗತ್ತಿನ ಮಾರುಕಟ್ಟೆಗೆ ಬೇಕಾದ ‘ಮಾಲು’ಗಳನ್ನು ಸೃಷ್ಟಿಸುವ ಒತ್ತಡವನ್ನು ಶಿಕ್ಷಕರ ಮೇಲೆ ಹೇರಲಾಗುತ್ತಿದೆ. ಈ ಸವಾಲನ್ನು ಸಮನ್ವಯದಿಂದ ಎದುರಿಸಬೇಕು. ರಾಜಕೀಯ ಮತ್ತು ಕಾರ್ಪೋರೇಟ್ ಒತ್ತಡಗಳಿಗೆ ಶಿಕ್ಷಕರು ಮಣಿಯಬಾರದು,” ಎಂದು ಕರೆ ನೀಡಿದರು.
ಸರ್ಕಾರಿ ಶಾಲೆಗಳ ಶಿಕ್ಷಕರ ಗುಣಮಟ್ಟ
ಸರ್ಕಾರಿ ಶಾಲೆಗಳ ಕುರಿತು ಮಾತನಾಡಿದ ಅವರು, “ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ. ಸರ್ಕಾರಿ ಶಾಲೆಗಳ ಶಿಕ್ಷಕರು ಲಿಂಗ ಸೂಕ್ಷ್ಮತೆ, ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ಬೆಳೆಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಖಾಸಗಿ ಶಾಲೆಗಳ ಕಟ್ಟಡದ ಗುಣಮಟ್ಟ ಉತ್ತಮವಾದರೂ, ಸರ್ಕಾರಿ ಶಾಲೆಗಳ ಶಿಕ್ಷಕರ ಗುಣಮಟ್ಟ ಅತ್ಯುನ್ನತವಾಗಿದೆ,” ಎಂದು ಶ್ಲಾಘಿಸಿದರು.
‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮ
ಸರ್ಕಾರದ ‘ನನ್ನ ಶಾಲೆ ನನ್ನ ಜವಾಬ್ದಾರಿ’ ಕಾರ್ಯಕ್ರಮವನ್ನು ಉಲ್ಲೇಖಿಸಿದ ಅವರು, “ಸರ್ಕಾರಿ ಶಾಲೆಗಳಲ್ಲಿ ಓದಿದ ಲಕ್ಷಾಂತರ ಮಂದಿ ತಾವು ಓದಿದ ಶಾಲೆಗಳಿಗೆ ನೆರವು ನೀಡುತ್ತಿದ್ದಾರೆ. ಕೆಲವರು ಶಾಲೆಗಳನ್ನು ದತ್ತು ಪಡೆದಿದ್ದಾರೆ, ಕೊಠಡಿಗಳನ್ನು ಕಟ್ಟಿಸಿದ್ದಾರೆ. ಇಂತಹ ಕಾಳಜಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದಲೇ ಹೆಚ್ಚಾಗಿ ವ್ಯಕ್ತವಾಗುತ್ತದೆ,” ಎಂದರು. ತಾವು ಕೋಲಾರದ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಆ ಶಾಲೆಗೆ ಅಪಾರ ನೆರವು ನೀಡಿರುವುದಾಗಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ತಮ್ಮ ಶಾಲೆಗೆ ಸಹಾಯ ಮಾಡಿರುವುದನ್ನು ಸ್ಮರಿಸಿದರು.
ಧನ್ಯವಾದ ಸಲ್ಲಿಕೆ
ಕಾರ್ಯಕ್ರಮಕ್ಕೆ ಆಹ್ವಾನಿಸಿ ತಮ್ಮ ಶಾಲೆ ಮತ್ತು ಶಿಕ್ಷಕರನ್ನು ಸ್ಮರಿಸಲು ಅವಕಾಶ ಮಾಡಿಕೊಟ್ಟ ಮೀಡಿಯಾ ಕನೆಕ್ಟ್ನ ದಿವ್ಯಾ ರಂಗೇನಹಳ್ಳಿ ಮತ್ತು ಪುಣ್ಯ ಫೌಂಡೇಷನ್ಗೆ ಕೆ.ವಿ.ಪ್ರಭಾಕರ್ ಧನ್ಯವಾದ ಅರ್ಪಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಜಗದ್ಗುರು ಶ್ರೀ ನಿರ್ಮಲಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.