ಹಾವೇರಿ: ಭಗವಂತ ಮನುಷ್ಯನನ್ನು ಪರೀಕ್ಷಿಸಲು ಮನಸ್ಸು, ಬುದ್ಧಿ, ನೋಡುವ ಶಕ್ತಿ, ಸ್ಪರ್ಶ ಮತ್ತು ರುಚಿ ರಂದ್ರಗಳನ್ನು ಕೊಟ್ಟಿದ್ದಾನೆ. ಇವುಗಳನ್ನು ಮನುಷ್ಯ ಎಷ್ಟರ ಮಟ್ಟಿಗೆ ಸರಿಯಾಗಿ ಉಪಯೋಗಿಸುತ್ತಾನೆ ಅಥವಾ ದುರುಪಯೋಗ ಮಾಡುತ್ತಾನೆ ಎಂಬುದನ್ನು ಪರೀಕ್ಷಿಸಲು ಇವುಗಳನ್ನು ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ನಗರದಲ್ಲಿ ಲಿಂಗೈಕ್ಯ ಶ್ರೀ ಕುಮಾರ ಮಹಾಶಿವಯೋಗಿಗಳವರ 96ನೇ ಪುಣ್ಯಸ್ಮರಣೋತ್ಸವ ಹಾಗೂ ಕುಮಾರಜ್ಜನ ಉತ್ಸವ-2026 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪವಿತ್ರ ಸ್ಥಳದಲ್ಲಿ ನಾವು ಸೇರಿರುವುದು ಪೂರ್ವಲಿಖಿತವೇ ಎಂದು ಅವರು ಹೇಳಿದರು. ಮನಸ್ಸು ಮತ್ತು ಬುದ್ಧಿಯ ನಡುವೆ ಯಾವಾಗಲೂ ಗೊಂದಲ ಇರುತ್ತದೆ. ಮನಸ್ಸು ಸಕ್ಕರೆ ಖಾಯಿಲೆ ಇದೆ ಎಂದರೆ ತಿನ್ನಬೇಡ ಎನ್ನುತ್ತದೆ, ಆದರೆ ಬುದ್ಧಿ ರುಚಿ ಇದೆ ಎಂದು ತಿನ್ನಲು ಹೇಳುತ್ತದೆ. ನಾಲಿಗೆಯ ರುಚಿ ರಂದ್ರಗಳೇ ಜಗತ್ತಿನ ಅನೇಕ ವಿನಾಶಕ್ಕೆ ಕಾರಣವಾಗಿವೆ. ಭಗವಂತ ಇವುಗಳನ್ನು ಕೊಟ್ಟು ನಮ್ಮನ್ನು ಪರೀಕ್ಷಿಸುತ್ತಾನೆ ಎಂದು ವಿವರಿಸಿದರು.
ಜೀವನದ ಉದ್ದೇಶವನ್ನು ಕೊನೆಯ ಘಳಿಗೆಯಲ್ಲಿ ಮಾತ್ರ ಅರ್ಥವಾಗುತ್ತದೆ ಎಂದು ಹೇಳಿದ ಬೊಮ್ಮಾಯಿ, ಪಶ್ಚಾತ್ತಾಪ ಪಡುವುದು ತಪ್ಪಲ್ಲ. ಸಾಯುವಾಗ ಸಮಾಧಾನ ಮತ್ತು ತೃಪ್ತಿ ಇರಬೇಕು ಎಂದರು. ಹುಟ್ಟಿದಾಗ ಮಕ್ಕಳ ಮುಗ್ಧತೆಯನ್ನು ಕೊನೆಯವರೆಗೂ ಉಳಿಸಿಕೊಳ್ಳುವುದು ಕಷ್ಟ. ಇದು ಯೋಗಿಗಳಿಗೆ ಮಾತ್ರ ಸಾಧ್ಯ. ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಮತ್ತು ಮುಗ್ಧತೆಯನ್ನು ಕಾಪಾಡಿಕೊಳ್ಳುವುದು ಸಾಧನೆ ಎಂದು ತಿಳಿಸಿದರು.
ತಾವು ತತ್ವಜ್ಞಾನ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿ ಎಂದು ಹೇಳಿದ ಅವರು, ವ್ಯಾಪಾರದಲ್ಲಿ ಲಾಭ-ನಷ್ಟ, ಆಧ್ಯಾತ್ಮದಲ್ಲಿ ಪಾಪ-ಪುಣ್ಯ ಇದೆ. ಆದರೆ ತಾವು ಎರಡನ್ನೂ ಒಂದೇ ದೃಷ್ಟಿಕೋನದಿಂದ ನೋಡುತ್ತೇನೆ ಎಂದು ಹೇಳಿ, ಹೊಸ ವಿಚಾರಗಳು ಹುಟ್ಟುತ್ತವೆ ಎಂದರು.

ಧ್ಯಾನ ಮತ್ತು ಜ್ಞಾನ ಮುಖ್ಯ
21ನೇ ಶತಮಾನ ಜ್ಞಾನದ ಶತಮಾನ ಎಂದು ಹೇಳಿದ ಬೊಮ್ಮಾಯಿ, ಭೂಮಿ, ಸಂಪತ್ತು ಆಳುವ ಕಾಲ ಕಳೆದು ಜ್ಞಾನ ಇದ್ದವರು ಆಳುವ ಕಾಲ ಬಂದಿದೆ ಎಂದರು. ಜ್ಞಾನದ ಜೊತೆಗೆ ಧ್ಯಾನ ಅಗತ್ಯ. ಗುರುವಿನ ಮೂಲಕ ಇದು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಗುರುವನ್ನು ಭಕ್ತಿಯಿಂದ ಪಡೆದುಕೊಳ್ಳಬೇಕು. ಭಕ್ತಿ ಎಂದರೆ ಕರಾರುರಹಿತ ಪ್ರೀತಿ. ದೇವರಿಂದ ಏನನ್ನೂ ಕೇಳದೆ ಕರಗಿ ಲೀನವಾಗುವುದು ಭಕ್ತಿ ಎಂದು ಅವರು ಒತ್ತಿ ಹೇಳಿದರು.
ದೇವರು ಕೊಟ್ಟ ವರಗಳು
ಹಸಿವು ದೇವರು ಕೊಟ್ಟ ವರ ಎಂದು ಹೇಳಿದ ಬೊಮ್ಮಾಯಿ, ಹಸಿವಿಲ್ಲದಿದ್ದರೆ ಮನುಷ್ಯ ದುಡಿಯುತ್ತಿರಲಿಲ್ಲ. ಮರೆವು ಇಲ್ಲದಿದ್ದರೆ ದ್ವೇಷದ ಜಗತ್ತಾಗುತ್ತಿತ್ತು. ಸಾವು ಕೂಡ ವರ ಎಂದು, ಸಾವಿಲ್ಲದಿದ್ದರೆ ಜಗತ್ತಿನಲ್ಲಿ ಜಾಗವಿರುತ್ತಿರಲಿಲ್ಲ ಎಂದು ವಿವರಿಸಿದರು.
ಬದುಕನ್ನು ತಿಳಿದು ನಡೆದರೆ ಸಾಧನೆ ಸಾಧ್ಯ. ಇತರರಿಗೆ ಅನುಕೂಲ ಮಾಡಿದರೆ ಅದೇ ಸಾಧನೆ ಎಂದು ಹೇಳಿ, ಸ್ವಾಮಿ ವಿವೇಕಾನಂದರ ಉಲ್ಲೇಖಿಸಿ ಸಾಧಕನಿಗೆ ಸಾವು ಅಂತ್ಯವಲ್ಲ ಎಂದರು.
ಈ ಸಂದರ್ಭದಲ್ಲಿ ಜಗದ್ಗುರು ಶ್ರೀ ಗುರುಸಿದ್ದರಾಜಯೋಗೇಂದ್ರ ಮಹಾಸ್ವಾಮಿಗಳು, ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಶ್ರೀ ಚನ್ನಬಸವ ಮಹಾಸ್ವಾಮಿಗಳು ಸೇರಿದಂತೆ ಹಲವು ಶ್ರೀಗಳು ಸಾನಿಧ್ಯ ವಹಿಸಿದ್ದರು. ಡಾ.ಗಿರಿಧರ ಖಜೆ, ಡಾ.ವಿಜಯಲಕ್ಷ್ಮೀ ಗೇಟಿ, ಮೋಹನ ಭಾಸ್ಕರ ಹೆಗಡೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.












