ಬೆಂಗಳೂರು: 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ (ಕಾರ್ಯಕ್ರಮಗಳು ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ಜನಸಂದಣಿ ನಿಯಂತ್ರಣ) ವಿಧೇಯಕವನ್ನು 16ನೇ ವಿಧಾನಸಭೆಯ 7ನೇ ಅಧಿವೇಶನದಲ್ಲಿ ದಿನಾಂಕ 21-08-2025ರಂದು ಚರ್ಚೆಗೆ ತೆಗೆದುಕೊಂಡಾಗ, ಸದಸ್ಯರ ಕೋರಿಕೆಯ ಮೇರೆಗೆ ಈ ವಿಧೇಯಕವನ್ನು ಸಮಗ್ರವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಪರಿಶೀಲನಾ ಸಮಿತಿಗೆ ವಹಿಸಲಾಗಿದೆ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 247ರ ಅನುಸಾರ, ಸನ್ಮಾನ್ಯ ಸಭಾಧ್ಯಕ್ಷರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದಾರೆ. ಈ ಸಮಿತಿಯ ಸದಸ್ಯರಾಗಿ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್, ವಿಧಾನಸಭಾ ಸದಸ್ಯರಾದ ರಿಜ್ವಾನ್ ಅರ್ಷದ್, ಶ್ರೀನಿವಾಸಯ್ಯ ಎನ್., ರವಿಶಂಕರ್ ಡಿ., ಶ್ರೀನಿವಾಸ್ ವಿ. ಮಾನೆ, ಪ್ರಕಾಶ್ ಕೋಳಿವಾಡ್, ಎಚ್.ಡಿ. ತಮ್ಮಯ್ಯ, ವಿ. ಸುನೀಲ್ ಕುಮಾರ್, ಎಸ್.ಆರ್. ವಿಶ್ವನಾಥ್ ಮತ್ತು ಜಿ.ಡಿ. ಹರೀಶ್ಗೌಡ ಅವರನ್ನು ನೇಮಿಸಲಾಗಿದೆ.
ಸದರಿ ಸಮಿತಿಯು ವಿಧೇಯಕವನ್ನು ವಿವರವಾಗಿ ಪರಿಶೀಲಿಸಿ, ಮೂರು ತಿಂಗಳ ಒಳಗೆ ವರದಿ ಸಲ್ಲಿಸಲು ಕಾಲಾವಧಿ ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.