ಬೆಂಗಳೂರು, ಮೇ 30, 2025: ಚಿತ್ತಾಪುರದಲ್ಲಿ ತಮ್ಮ ದಿಗ್ಬಂಧನ ಮತ್ತು ಅಹಿತಕರ ಘಟನೆಗಳ ಕುರಿತು ಡಿಜಿಪಿ, ಗೃಹ ಸಚಿವ, ಮುಖ್ಯಮಂತ್ರಿ, ಮತ್ತು ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ವಿಧಾನಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಚಿತ್ತಾಪುರದಲ್ಲಿ 5 ಗಂಟೆಗಳ ಕಾಲ ನನ್ನನ್ನು ದಿಗ್ಬಂಧನದಲ್ಲಿ ಇರಿಸಲಾಗಿತ್ತು. ನಮ್ಮ ಕಾರ್ಯಕರ್ತರು ಬರದಂತೆ ತಡೆಯಲಾಯಿತು. ನನ್ನ ಕಾರಿನ ಮೇಲೆ ಮಸಿ ಸುರಿಯಲಾಯಿತು, ಕಲ್ಲುಗಳನ್ನು ಜಮಾಯಿಸಿ ಇಡಲಾಗಿತ್ತು, ಮೊಟ್ಟೆ ಎಸೆಯಲು ಮತ್ತು ಕಲ್ಲು ತೂರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದರು,” ಎಂದು ಆರೋಪಿಸಿದರು. “ನಾನು ತಕ್ಷಣವೇ ಗೃಹ ಸಚಿವರು ಮತ್ತು ಎಡಿಜಿಪಿಗೆ ಕರೆ ಮಾಡಿ ಮಾತನಾಡಿದೆ. ಸುಮಾರು 10 ಬಾರಿ ಎಸ್ಪಿಗೆ ಕರೆ ಮಾಡಿದ್ದೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ,” ಎಂದು ವಿವರಿಸಿದರು.
ಅಧಿಕಾರಿಗಳಿಂದ ಒತ್ತಡದ ಮಾತು
“ಅಡಿಷನಲ್ ಎಸ್ಪಿ 5 ಗಂಟೆಗಳ ಕಾಲ ನಮ್ಮ ಜೊತೆಗಿದ್ದರು. ಆದರೆ, ನನ್ನನ್ನು ನಿಂದಿಸಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಕೇಳಿದಾಗ, ‘ಸಾರ್, ಅರ್ಥ ಮಾಡಿಕೊಳ್ಳಿ, ನಮಗೆ ಒತ್ತಡವಿದೆ’ ಎಂದು ಹೇಳಿದರು. 5 ಗಂಟೆಗಳ ಬಳಿಕ ನನ್ನನ್ನು ಚಿತ್ತಾಪುರದಿಂದ ಹೊರಗೆ ಕಳುಹಿಸಿದರು. ನಾನು ಯಾದಗಿರಿಗೆ ತೆರಳಿ, ಕಾರ್ಯಕ್ರಮಗಳನ್ನು ರದ್ದುಗೊಳಿಸಿ ರಾತ್ರೋರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ವಾಪಸಾದೆ,” ಎಂದು ನಾರಾಯಣಸ್ವಾಮಿ ತಿಳಿಸಿದರು. “ಗುಲ್ಬರ್ಗದಲ್ಲಿ ನಡೆದ ‘ಗುಲ್ಬರ್ಗ ಚಲೋ’ ಪ್ರತಿಭಟನೆಯೂ ಈ ಘಟನೆಯಿಂದ ಪ್ರೇರಿತವಾಯಿತು,” ಎಂದು ಅವರು ಹೇಳಿದರು.
ಪಕ್ಷದ ಮುಖಂಡರ ಮೇಲೆ ಹಲ್ಲೆ
“ಚಿತ್ತಾಪುರದಲ್ಲಿ ನನ್ನನ್ನು ಭೇಟಿಯಾಗಲು ಬಂದಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿಯವರ ಮೇಲೆ ಹಲ್ಲೆ ನಡೆಸಲಾಗಿದೆ. ಅವರ ಬಟ್ಟೆಗಳನ್ನು ಹರಿದು ಬಿಸಾಡಲಾಗಿದೆ. ಅವರ ಮೇಲೇ ದೂರು ಕೊಡಿಸಿ, ತಹಸೀಲ್ ಕಚೇರಿಯಲ್ಲಿ ದಿಗ್ಬಂಧನದಲ್ಲಿ ಇರಿಸಲಾಗಿತ್ತು. ಇದಕ್ಕಾಗಿಯೇ ನಾವು ‘ರಿಪಬ್ಲಿಕ್ ಆಫ್ ಗುಲ್ಬರ್ಗ’ ಎಂದಿದ್ದೇವೆ,” ಎಂದು ಅವರು ಆಕ್ಷೇಪಿಸಿದರು.
ಕಾಂಗ್ರೆಸ್ ಸರಕಾರದ ವಿರುದ್ಧ ಟೀಕೆ
ಕಾಂಗ್ರೆಸ್ ಸರಕಾರದ ಕಾಲದಲ್ಲಿ ವಿಪಕ್ಷ ನಾಯಕರಿಗೆ ರಕ್ಷಣೆ ಒದಗಿಸಿದ ಉದಾಹರಣೆಯನ್ನು ಎತ್ತಿದ ಅವರು, “ನಮ್ಮ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯನವರು ಕೊಡಗಿಗೆ ಭೇಟಿ ನೀಡಿದ್ದಾಗ, ಮೊಟ್ಟೆ ಎಸೆದರೆಂದು ದೊಡ್ಡ ರಾದ್ಧಾಂತ ಮಾಡಿದ್ದರು. ಆದರೆ, ನಾವು ಅವರಿಗೆ ಸಂಪೂರ್ಣ ರಕ್ಷಣೆ ಒದಗಿಸಿದ್ದೆವು. ಆದರೆ, ಈಗಿನ ಸರಕಾರದಲ್ಲಿ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ,” ಎಂದು ಟೀಕಿಸಿದರು.
ಪ್ರಶಸ್ತಿ ಋಣಕ್ಕಾಗಿ ದೂರು
ವಿಧಾನಪರಿಷತ್ನ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ವಿರುದ್ಧ ದತ್ತಾತ್ರೇಯ ಶಾಂತಪ್ಪ ಇಕ್ಕಲಗಿ ಎಂಬವರು ದೂರು ನೀಡಿರುವುದನ್ನು ಉಲ್ಲೇಖಿಸಿದ ನಾರಾಯಣಸ್ವಾಮಿ, “ದತ್ತಾತ್ರೇಯ ಎಂಬ ಸಮಾಜಸೇವಕರಿಗೆ ಕಾಂಗ್ರೆಸ್ ಸರಕಾರ ಇತ್ತೀಚೆಗೆ ಅಂಬೇಡ್ಕರ್ ಪ್ರಶಸ್ತಿ ನೀಡಿದೆ. ಈ ಪ್ರಶಸ್ತಿಯ ಋಣ ತೀರಿಸಲು ಅವರು ದೂರು ಕೊಟ್ಟಿದ್ದಾರೆ. ರವಿಕುಮಾರ್ ಯಾರನ್ನಾದರೂ ಬೈದರೆ, ತಕ್ಷಣ ಪೊಲೀಸ್ ನೋಟಿಸ್ ಕೊಡುತ್ತಾರೆಯೇ? ಈ ಸರಕಾರದಲ್ಲಿ ಏನು ನಡೆಯುತ್ತಿದೆ?” ಎಂದು ಪ್ರಶ್ನಿಸಿದರು.
“ರವಿಕುಮಾರ್ ಅವರು ಡಿ.ಸಿ. ಖರ್ಗೆಯವರನ್ನು ಬೈದಿದ್ದಾರೆಂದು, ದೌರ್ಜನ್ಯ ಕಾಯ್ದೆಯಡಿ ‘ಹೊಲೆಯ’ ಎಂಬ ಪದ ಬಳಸಿದ್ದಕ್ಕೆ ದೂರು ಕೊಡಲಾಗಿದೆ. ನಾನೂ ಎಸ್.ಸಿ. ಸಮುದಾಯಕ್ಕೆ ಸೇರಿದವನೇ. ಡಿ.ಸಿ.ಯವರನ್ನು ‘ಪಾಕಿಸ್ತಾನದವರು’ ಎಂದರೆ ಅದು ಅಟ್ರಾಸಿಟಿ ಆಗುತ್ತದೆಯೇ? ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರೆಂದರೆ ಅದು ಅಟ್ರಾಸಿಟಿಯೇ?” ಎಂದು ಕಿಡಿಕಾರಿದರು.
ರವಿಕುಮಾರ್ಗೆ ಸವಾಲು
“ರವಿಕುಮಾರ್ ಅವರು ‘ಹೊಲೆಯ’ ಅಥವಾ ‘ದಲಿತ’ ಎಂಬ ಪದಗಳನ್ನು ತಮ್ಮ ಭಾಷಣದಲ್ಲಿ ಬಳಸಿದ್ದರೆ, ನಾನೇ ಅವರ ವಿರುದ್ಧ ದೂರು ನೀಡುತ್ತೇನೆ,” ಎಂದು ನಾರಾಯಣಸ್ವಾಮಿ ಸವಾಲೆಸೆದರು. “ಈ ಸರಕಾರದ ದೌರ್ಜನ್ಯದ ವಿರುದ್ಧ ನಾವು ಹೋರಾಟ ಮುಂದುವರಿಸುತ್ತೇವೆ,” ಎಂದು ಅವರು ಒತ್ತಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಎಸ್. ಕೇಶವಪ್ರಸಾದ್, ಡಿ.ಎಸ್. ಅರುಣ್, ಕೆ.ಎಸ್. ನವೀನ್, ಮತ್ತು ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಉಪಸ್ಥಿತರಿದ್ದರು.