ಬೆಂಗಳೂರು: ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಲು ಹಾಗೂ ಚುನಾವಣಾ ಸಂಬಂಧಿತ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಸಂಬಂಧಿತ ಚುನಾವಣಾಧಿಕಾರಿಗಳು ನಿಯಮಿತವಾಗಿ ರಾಜಕೀಯ ಪಕ್ಷಗಳ ಸಭೆಗಳನ್ನು ಆಯೋಜಿಸಬೇಕು ಎಂದು ಭಾರತ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕರೆ ನೀಡಿದರು.
ನವದೆಹಲಿಯ ಭಾರತೀಯ ಪ್ರಜಾಪ್ರಭುತ್ವ ನಿರ್ವಹಣಾ ಸಂಸ್ಥೆ (IIIDEM) ಯಲ್ಲಿ ಇಂದು ಆರಂಭವಾದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಪಾರದರ್ಶಕ ಮತ್ತು ಶಾಸನಬದ್ಧ ಚುನಾವಣಾ ನಿರ್ವಹಣೆ
ಎಲ್ಲಾ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಧಿಕಾರಿಗಳು (ಡಿಇಒಗಳು), ಚುನಾವಣಾ ನೋಂದಣಿ ಅಧಿಕಾರಿಗಳು (ಇಆರ್ಒಗಳು) ಮತ್ತು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒಗಳು) ಪಾರದರ್ಶಕವಾಗಿ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ (1950 ಮತ್ತು 1951), ಮತದಾರರ ನೋಂದಣಿ ನಿಯಮಗಳು (1960) ಹಾಗೂ ಚುನಾವಣಾ ನಿಯಮಗಳು (1961) ಅನುಸಾರ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.
ರಾಜಕೀಯ ಪಕ್ಷಗಳ ಮನವಿಗಳಿಗೆ ಕಾನೂನು ಚೌಕಟ್ಟಿನೊಳಗೆ ತ್ವರಿತವಾಗಿ ಸ್ಪಂದಿಸಬೇಕು. ಎಲ್ಲಾ ಹಂತಗಳಲ್ಲಿ ರಾಜಕೀಯ ಪಕ್ಷಗಳ ಸಭೆಗಳನ್ನು ನಿಯಮಿತವಾಗಿ ನಡೆಸಿ, ಅವರ ಸಮಸ್ಯೆಗಳಿಗೆ ಸಂಬಂಧಿತ ಪ್ರಾಧಿಕಾರಗಳ ಮೂಲಕ ಪರಿಹಾರ ಒದಗಿಸಬೇಕು. ಎಲ್ಲಾ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ಮಾರ್ಚ್ 31ರೊಳಗೆ ಈ ಸಂಬಂಧ ಜಿಲ್ಲಾ ಚುನಾವಣಾಧಿಕಾರಿಗಳ ವರದಿಗಳನ್ನು ಆಯೋಗಕ್ಕೆ ಸಲ್ಲಿಸಬೇಕು ಎಂದು ಅವರು ಹೇಳಿದರು.
ಮತದಾರ ಸ್ನೇಹಿ ಮತ್ತು ಭಯಮುಕ್ತ ಚುನಾವಣಾ ಪರಿಸರ
ಚುನಾವಣಾ ಕಾನೂನುಗಳ ಬಗ್ಗೆ ಸ್ಪಷ್ಟತೆ ಇರುವಂತೆ ಎಲ್ಲಾ ಮುಖ್ಯ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಜಾಗೃತರಾಗಬೇಕು. ಮತದಾರರೊಂದಿಗೆ ಸ್ನೇಹಪೂರ್ಣವಾಗಿ ವರ್ತಿಸಲು ಬಿಎಲ್ಒಗಳಿಗೆ ತರಬೇತಿ ನೀಡಬೇಕು. ಯಾವುದೇ ಚುನಾವಣಾ ಸಿಬ್ಬಂದಿ ಅಥವಾ ಅಧಿಕಾರಿಗಳು ಭಯಮುಕ್ತ ವಾತಾವರಣದಲ್ಲಿ ನಿರ್ಭೀತಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಆಯೋಗ ಆದೇಶಿಸಿದೆ.
ಪ್ರತಿ ಮತಗಟ್ಟೆಯಲ್ಲಿ 800-1200 ಮತದಾರರು ಇರಬೇಕು. ಮತದಾರರ ನಿವಾಸದಿಂದ 2 ಕಿ.ಮೀ. ಅಂತರದೊಳಗೆ ಮತಗಟ್ಟೆ ಇರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ಗ್ರಾಮೀಣ ಹಾಗೂ ಕೊಳಚೆ ನಿರ್ಮೂಲನಾ ಪ್ರದೇಶಗಳಲ್ಲಿ ಉತ್ತಮ ಕನಿಷ್ಠ ಮೂಲಭೂತ ಸೌಕರ್ಯಗಳಿರುವ ಮತಗಟ್ಟೆಗಳನ್ನು ಸ್ಥಾಪಿಸುವುದರಿಂದ ಮತದಾನ ಪ್ರಮಾಣ ಹೆಚ್ಚಳವಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಚುನಾವಣೆ ಪ್ರಕ್ರಿಯೆಯ ಸುಧಾರಣೆ
ಭಾರತ ಚುನಾವಣಾ ಆಯೋಗವು ಚುನಾವಣಾ ಪ್ರಕ್ರಿಯೆಯಲ್ಲಿ 28 ವಿಭಿನ್ನ ಪಾಲುದಾರರನ್ನು ಗುರುತಿಸಿದೆ. ಇದರಲ್ಲಿ ಮುಖ್ಯ ಚುನಾವಣಾಧಿಕಾರಿಗಳು (ಸಿಇಒಗಳು), ಜಿಲ್ಲಾಧಿಕಾರಿಗಳು (ಡಿಇಒಗಳು), ಚುನಾವಣಾ ಅಧಿಕಾರಿಗಳು (ಇಆರ್ಒಗಳು), ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಮತಗಟ್ಟೆ ಏಜೆಂಟ್ರು ಸೇರಿದ್ದಾರೆ. ಆಯೋಗವು ಈ ಪಾಲುದಾರರ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಇದರಡಿ ಚುನಾವಣಾ ಪಟ್ಟಿ, ಚುನಾವಣಾ ನಡವಳಿಕೆ, ಮೇಲ್ವಿಚಾರಣೆ/ಜಾರಿ ಮತ್ತು ರಾಜಕೀಯ ಪಕ್ಷಗಳು/ಅಭ್ಯರ್ಥಿಗಳು ಎಂಬ ನಾಲ್ಕು ವಿಭಾಗಗಳ ಮೂಲಕ ಕಾರ್ಯ ನಿರ್ವಹಿಸುತ್ತಿದೆ.
ಈ ಸಂದರ್ಭ, ಚುನಾವಣಾ ಆಯೋಗದ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ, ದೇಶದ ಚುನಾವಣಾ ನಿರ್ವಹಣೆಯಲ್ಲಿ ಸುಧಾರಣೆಗಳನ್ನು ತರುವ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳೊಂದಿಗೆ ಚರ್ಚಿಸಿದರು.












