ನವದೆಹಲಿ: ಜಾತಿಗಣತಿ ವರದಿಯನ್ನು ವಿರೋಧಿಸಿದ ಬಿಜೆಪಿಯವರು ಈಗ ಸರ್ಕಾರದ ಮರು ಸಮೀಕ್ಷೆ ತೀರ್ಮಾನಕ್ಕೂ ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವಿಚಾರದಲ್ಲಿ ಬಿಜೆಪಿಯ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದರು. “ಜಾತಿಗಣತಿ ವರದಿಯನ್ನು ತಿರಸ್ಕರಿಸಿದವರು ಬಿಜೆಪಿಯವರೇ ಅಲ್ಲವೇ? ಈಗ ನಾವು ಆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಕೆಲವರ ಮಾಹಿತಿ ಬಿಟ್ಟುಹೋಗಿದ್ದರೆ, ಅದನ್ನು ಸೇರಿಸಲು ಅವಕಾಶ ಕಲ್ಪಿಸುತ್ತೇವೆ. ಈಗಿರುವ ವರದಿಯನ್ನೇ ಬಳಸಿಕೊಂಡು, ಗೊಂದಲಗಳನ್ನು ಬಗೆಹರಿಸಿ ಸಮಾಜಕ್ಕೆ ನ್ಯಾಯ ಒದಗಿಸುವ ಗುರಿಯಿದೆ” ಎಂದರು.
ವೈಜ್ಞಾನಿಕ ಸಮೀಕ್ಷೆಗೆ ಒತ್ತು
ಮರು ಸಮೀಕ್ಷೆ ವೈಜ್ಞಾನಿಕವಾಗಿರುತ್ತದೆಯೇ ಎಂಬ ಪ್ರಶ್ನೆಗೆ, “ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಜೈನ, ಲಂಬಾಣಿ, ಬೆಸ್ತ ಸೇರಿದಂತೆ ಹಲವು ಸಮುದಾಯಗಳ ಜನರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದಿನ ಸಮೀಕ್ಷೆಯೂ ವೈಜ್ಞಾನಿಕವಾಗಿತ್ತು. ಅಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. ಆದರೆ, ಕೆಲವರು ತಮ್ಮ ಸಮುದಾಯದ ವಿವರಗಳನ್ನು ನೀಡಲು ಹಿಂಜರಿದಿದ್ದರು. ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಜಾಹೀರಾತು, ಸಾಮಾಜಿಕ ಜಾಲತಾಣ ಪ್ರಚಾರ, ಆನ್ಲೈನ್ ನೋಂದಣಿ ಸೌಲಭ್ಯ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯದಲ್ಲಿರುವವರಿಗೂ ಮಾಹಿತಿ ನೀಡಲು ಅವಕಾಶ ಕಲ್ಪಿಸಲಾಗಿದೆ” ಎಂದು ಶಿವಕುಮಾರ್ ವಿವರಿಸಿದರು.
ಪ್ರಬಲ ಜಾತಿಗಳ ಒತ್ತಡದ ಆರೋಪಕ್ಕೆ ತಿರುಗೇಟು
ಪ್ರಬಲ ಜಾತಿಗಳ ಒತ್ತಡಕ್ಕೆ ಮಣಿದಿರಾ ಎಂಬ ಪ್ರಶ್ನೆಗೆ, “ನಾವು ಎಲ್ಲರ ಒತ್ತಡಕ್ಕೂ ಮಣಿಯುತ್ತೇವೆ, ಮಾಧ್ಯಮಗಳ ಒತ್ತಡಕ್ಕೂ ಮಣಿಯುತ್ತೇವೆ” ಎಂದು ಹಾಸ್ಯಚಟಾಕಿಯಿಂದ ಉತ್ತರಿಸಿದರು.
ಸ್ವಾಮೀಜಿಗಳಿಗೆ ಕರೆ
ವೀರಶೈವ ಸಮಾಜ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿದೆ ಎಂಬ ವಿಷಯಕ್ಕೆ, “ವೀರಶೈವ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳ ಸ್ವಾಮೀಜಿಗಳು ಈ ತೀರ್ಮಾನವನ್ನು ಬೆಂಬಲಿಸಿದ್ದಾರೆ. ಎಲ್ಲಾ ಸಮುದಾಯಗಳ ಸ್ವಾಮೀಜಿಗಳು ತಮ್ಮ ಜನರಿಗೆ ತಿಳುವಳಿಕೆ ನೀಡಿ, ಸಮೀಕ್ಷೆಯಲ್ಲಿ ಸರಿಯಾಗಿ ಭಾಗವಹಿಸುವಂತೆ ಪ್ರೇರೇಪಿಸಬೇಕು” ಎಂದು ಕರೆ ನೀಡಿದರು.
ಹೈಕಮಾಂಡ್ನಲ್ಲಿ ಮೇಲುಗೈ ಇಲ್ಲ
ಜಾತಿಗಣತಿ ವಿಚಾರದಲ್ಲಿ ಹೈಕಮಾಂಡ್ನಲ್ಲಿ ಮೇಲುಗೈ ಸಾಧಿಸಿದ್ದೀರಾ ಎಂಬ ಪ್ರಶ್ನೆಗೆ, “ಇದರಲ್ಲಿ ಯಾರ ಕೈ ಮೇಲಾಗುವ ವಿಷಯವೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ನ ರಾಜಕೀಯ ಅಜೆಂಡಾ
ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿ ಮಾಡುತ್ತಿರುವಾಗ ರಾಜ್ಯದ ಸಮೀಕ್ಷೆಯ ಅಗತ್ಯವಿತ್ತೇ ಎಂದು ಕೇಳಿದಾಗ, “ಇದು ಕಾಂಗ್ರೆಸ್ನ ರಾಜಕೀಯ ಅಜೆಂಡಾ. ರಾಹುಲ್ ಗಾಂಧಿ ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಲು ಜಾತಿಗಣತಿಯನ್ನು ಪ್ರತಿಪಾದಿಸಿದ್ದಾರೆ. ಬಿಜೆಪಿಯವರು ಇದನ್ನು ಕಾಪಿ ಮಾಡಿದ್ದಾರೆ” ಎಂದರು.
ವಾಲ್ಮೀಕಿ ನಿಗಮ ಹಗರಣಕ್ಕೆ ಕಾಂಗ್ರೆಸ್ಗೆ ಸಂಬಂಧವಿಲ್ಲ
ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕರು ಮತ್ತು ಸಂಸದರ ಮನೆಯ ಮೇಲೆ ಇಡಿ ದಾಳಿ ವಿಚಾರಕ್ಕೆ, “ಈ ಹಗರಣಕ್ಕೂ ನಮ್ಮ ಶಾಸಕರು, ಸಂಸದರಿಗೂ ಯಾವುದೇ ಸಂಬಂಧವಿಲ್ಲ. ಚುನಾವಣೆಯಲ್ಲಿ ಯಾವುದೇ ಹಣ ಹಂಚಿಕೆಯಾಗಿಲ್ಲ. ದುರ್ಬಳಕೆಯಾದ ಶೇ.90ರಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ” ಎಂದು ಶಿವಕುಮಾರ್ ತಿಳಿಸಿದರು.
Discover more from amiroNEWS
Subscribe to get the latest posts sent to your email.