ಬೆಂಗಳೂರು: “ಟನಲ್ ರಸ್ತೆ ಯೋಜನೆ ಅತ್ಯುತ್ತಮ ಆಲೋಚನೆ, ನಾವು ನಿಮ್ಮೊಂದಿಗಿದ್ದೇವೆ, ಯೋಜನೆಯನ್ನು ಮುಂದುವರೆಸಿ,” “ಡಿ.ಕೆ. ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿಯ ಹೊಣೆಯನ್ನು ವಹಿಸಿಕೊಂಡಿರುವುದು ನಮ್ಮ ಪುಣ್ಯ” – ಇದು ಬೆಂಗಳೂರಿನ ನಾಗರಿಕರ ಮುಕ್ತಕಂಠದಿಂದ ಕೊಂಡಾಡಿದ ರೀತಿ.
ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ಉಪಮುಖ್ಯಮಂತ್ರಿ (ಡಿಸಿಎಂ) ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿ ಮತ್ತು ದೂರದೃಷ್ಟಿಯ ಯೋಜನೆಗಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಬ್ಬನ್ ಪಾರ್ಕ್ನಲ್ಲಿ ಭಾನುವಾರ ನಡೆದ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದಲ್ಲಿ ನಾಗರಿಕರೊಂದಿಗಿನ ಸಂವಾದದ ವೇಳೆ ಶಿವಕುಮಾರ್ ಅವರ ಕಾರ್ಯತಂತ್ರವನ್ನು ಹಲವರು ಶ್ಲಾಘಿಸಿದರು.
ನಾಗರಿಕರೊಬ್ಬರು, “ಸಾರ್, ಟನಲ್ ರಸ್ತೆ ಯೋಜನೆ ತುಂಬಾ ಚೆನ್ನಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೊಸ ರಸ್ತೆಗಳು ಅಗತ್ಯ. ಈ ಯೋಜನೆಯನ್ನು ಸಾಕಾರಗೊಳಿಸಿ, ಇದು ಒಂದು ಉತ್ತಮ ಕಲ್ಪನೆ,” ಎಂದು ಬೆಂಬಲ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಶಿವಕುಮಾರ್, “ರಸ್ತೆ ಅಗಲೀಕರಣಕ್ಕಾಗಿ ಮನೆಗಳನ್ನು ಒಡೆಯಲು ಸಾಧ್ಯವಿಲ್ಲ. ಇದಕ್ಕೆ ದುಪ್ಪಟ್ಟು ಪರಿಹಾರ ನೀಡಬೇಕಾಗುತ್ತದೆ. ಆದ್ದರಿಂದ, ಸುರಂಗ ಮಾರ್ಗ ರಸ್ತೆಯೇ ಸೂಕ್ತ ಎಂದು ಈ ಯೋಜನೆಗೆ ಮುಂದಾಗಿದ್ದೇನೆ,” ಎಂದು ವಿವರಿಸಿದರು.
ಮತ್ತೊಬ್ಬ ನಾಗರಿಕ, “ಕಳೆದ 30 ವರ್ಷಗಳಿಂದ ಬೆಂಗಳೂರಿನಲ್ಲಿ ಹೊಸ ರಸ್ತೆಗಳು ನಿರ್ಮಾಣವಾಗಿಲ್ಲ. ಮುಂಬೈನಲ್ಲಿ ಟನಲ್ ರಸ್ತೆಗಳನ್ನು ನಿರ್ಮಿಸುತ್ತಿದ್ದಾರೆ, ಯಾರೂ ವಿರೋಧಿಸುತ್ತಿಲ್ಲ. ಆದರೆ ಇಲ್ಲಿ ವಿರೋಧ ಎದುರಾಗುತ್ತಿದೆ. ನಿಮ್ಮ ಆಲೋಚನೆ ಉತ್ತಮವಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರೊಬ್ಬರು, “ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವುದು ನಗರಕ್ಕೆ ವರದಾನ. ಈ ನಗರದ ಬಗ್ಗೆ ಅವರಿಗೆ ಅಪಾರ ಕಾಳಜಿ ಇದೆ. ವಿದೇಶಿಯರು ಬೆಂಗಳೂರಿಗೆ ಬಂದಾಗ ಇಲ್ಲಿನ ಸ್ವಚ್ಛತೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕೆಂದು ಅವರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬಂದವರಾದರೂ ಬೆಂಗಳೂರಿನ ಬಗ್ಗೆ ಅವರಿಗೆ ಅಪಾರ ಪ್ರೀತಿ ಇದೆ,” ಎಂದು ಪ್ರೀತಿಯಿಂದ ಹೇಳಿದರು.
ರಸ್ತೆ ವಿನ್ಯಾಸ ಸ್ಪರ್ಧೆಗೆ ಸಲಹೆ
ಬೆಂಗಳೂರಿನ ರಸ್ತೆಗಳ ವಿನ್ಯಾಸಕ್ಕಾಗಿ ‘ವಿನ್ಯಾಸ ಸ್ಪರ್ಧೆ’ ಏರ್ಪಡಿಸಿದರೆ ಜನರಿಗೆ ಬೇಕಾದ ರಸ್ತೆಗಳು ಜನರಿಂದಲೇ ರೂಪುಗೊಳ್ಳಲಿವೆ ಎಂದು ನೆಹೇಶ್ ಎಂಬುವವರು ತಮ್ಮ ಆಲೋಚನೆಯನ್ನು ಹಂಚಿಕೊಂಡರು. ಈ ಸಲಹೆಯನ್ನು ಶ್ಲಾಘಿಸಿದ ಡಿಸಿಎಂ, “ಇದು ತುಂಬಾ ಒಳ್ಳೆಯ ಕಲ್ಪನೆ. ಇವರ ದೂರವಾಣಿ ಸಂಖ್ಯೆಯನ್ನು ಪಡೆಯಿರಿ, ಈ ಬಗ್ಗೆ ಚರ್ಚಿಸೋಣ,” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ಯೋಜನೆಗಳು ಮತ್ತು ನಾಗರಿಕರ ಬೆಂಬಲದೊಂದಿಗೆ ಬೆಂಗಳೂರು ನಗರದ ಸಂಚಾರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿರೀಕ್ಷೆಯಿದೆ.











