ಬಾಗಲಕೋಟೆಯಲ್ಲಿ ನೇಕಾರರೊಂದಿಗೆ ಸಂವಾದ; ಪ್ರಗತಿಪರ ರೈತ ಧನಪಾಲ್ ಯಲ್ಲಟ್ಟಿ ಭೇಟಿ
ಬಾಗಲಕೋಟೆ: ಪರಿಶ್ರಮಿ ನೇಕಾರರು ಕೇವಲ ಸಂಸ್ಕೃತಿ, ವೈವಿಧ್ಯತೆ, ಕಲಾವಂತಿಕೆ ಮತ್ತು ಪರಂಪರೆಗಳ ರಾಯಭಾರಿಗಳಲ್ಲ; ಅವರು ಗ್ರಾಮೀಣ ಆರ್ಥಿಕತೆಯ ಮಹತ್ವದ ಆಧಾರಸ್ತಂಭರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ.
ಬನಹಟ್ಟಿಯಲ್ಲಿ ನೇಕಾರ ಸಮುದಾಯದ ಮುಖಂಡರೊಂದಿಗೆ ಇಂದು ನಡೆದ ಸಂವಾದದಲ್ಲಿ ಅವರು ಮಾತನಾಡಿ, ಪೀಳಿಗೆಯಿಂದ ಪೀಳಿಗೆಗೆ ಕುಲ ಕಸುಬನ್ನು ಉಳಿಸಿಕೊಂಡು ಬರುತ್ತಿರುವ ನೇಕಾರ ಬಂಧುಗಳ ಪರಿಶ್ರಮ, ಸವಾಲುಗಳು ಮತ್ತು ನಿರೀಕ್ಷೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ನೇಕಾರರ ಆಶೋತ್ತರಗಳು ಮತ್ತು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅವರ ಹಿತಾಸಕ್ತಿಗಳ ರಕ್ಷಣೆಗೆ ಅಗತ್ಯ ಬೆಂಬಲ ನೀಡುವುದು ಮತ್ತು ವಿಶ್ವಾಸವನ್ನು ಬಲಪಡಿಸುವುದು ತಮ್ಮ ಜವಾಬ್ದಾರಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಸಿದ್ದು ಸವದಿ, ಜಗದೀಶ್ ಗುಡಗಂಟಿ, ಬಾಗಲಕೋಟೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಸೇರಿದಂತೆ ಹಲವು ಪ್ರಮುಖರು ಮತ್ತು ನೇಕಾರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಪ್ರಗತಿಪರ ರೈತ ಭೇಟಿ
ಅದೇ ದಿನ ಬಾಗಲಕೋಟೆ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಹಳಿಂಗಳಿ ಗ್ರಾಮದ ಪ್ರಗತಿಪರ ಕೃಷಿಕ ಧನಪಾಲ್ ನಾನಪ್ಪಾ ಯಲ್ಲಟ್ಟಿ ಅವರನ್ನು ವಿಜಯೇಂದ್ರ ಭೇಟಿ ಮಾಡಿದರು. ಸಂಘರ್ಷದ ಬದುಕಿನಲ್ಲಿ ಧೃತಿಗೆಡದೆ ಸಾಧನೆ ಮಾಡಿರುವ ಅವರ ಜೀವನ ಹಾದಿ ಸ್ಫೂರ್ತಿದಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಣ್ಣಿನ ಸೊಗಡನ್ನು ಮರೆಯದೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿರುವುದು ಆದರ್ಶಪ್ರಾಯ ಎಂದು ಹೇಳಿದರು. ಕೃಷಿ ಪಂಡಿತ, ಕೃಷಿ ರತ್ನ, ಕಾಯಕಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅವರ ಆಸಕ್ತಿ, ಪರಿಶ್ರಮ ಮತ್ತು ನಾವೀನ್ಯತೆ ಯುವ ರೈತರಿಗೆ ದಾರಿದೀಪವಾಗಿದೆ ಎಂದು ಕೊಂಡಾಡಿದರು. ಅವರ ಸಾಧನೆಗಳು ತಮಗೂ ಹೊಸ ಚೈತನ್ಯ ನೀಡಿವೆ ಎಂದು ತಿಳಿಸಿ, ಕೃಷಿ ಕಾಯಕ ಹೀಗೆಯೇ ಸಮೃದ್ಧವಾಗಿ ಮುಂದುವರಿಯಲಿ ಎಂದು ಹಾರೈಸಿದರು.












