ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಕೆಪೆಕ್ ಎಂಡಿ ಸಿ.ಎನ್. ಶಿವಪ್ರಕಾಶ್ಗೆ ಮೆಚ್ಚುಗೆ
ಬೆಂಗಳೂರು: ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯು ಕರ್ನಾಟಕದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದ ಈ ಯೋಜನೆಯಡಿ, ರಾಜ್ಯ ಸರ್ಕಾರವು ಹೆಚ್ಚುವರಿ 15% ಸಹಾಯಧನ ನೀಡುತ್ತಿದ್ದು, ಕಿರು ಉದ್ದಿಮೆದಾರರಿಗೆ ಗರಿಷ್ಠ 50% ಅಥವಾ ರೂ.15 ಲಕ್ಷದವರೆಗೆ ಸಾಲ ಸಂಪರ್ಕಿತ ಸಹಾಯಧನ ಒದಗಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ರೂ.6 ಲಕ್ಷ ಮತ್ತು ರಾಜ್ಯ ಸರ್ಕಾರದ ರೂ.9 ಲಕ್ಷ ಸಹಾಯಧನ ಸೇರಿದೆ.
ಈ ಯೋಜನೆಯ ಯಶಸ್ಸಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ (ಕೆಪೆಕ್) ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ಅವಿರತ ಶ್ರಮ ಕಾರಣವಾಗಿದೆ. ಇವರ ಪ್ರಯತ್ನಗಳನ್ನು ರೈತರು ಮತ್ತು ಉದ್ದಿಮೆದಾರರು ವ್ಯಾಪಕವಾಗಿ ಶ್ಲಾಘಿಸಿದ್ದಾರೆ.
ವಾರ್ಷಿಕ ಸಾಲ ಮಂಜೂರಾತಿಯಲ್ಲಿ ಗಮನಾರ್ಹ ಏರಿಕೆ
ಪಿಎಂಎಫ್ಎಂಇ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ಸಾಲ ಮಂಜೂರಾತಿಯಲ್ಲಿ ಗಣನೀಯ ಪ್ರಗತಿಯಾಗಿದೆ.
- 2021-22: 259 ಸಾಲಗಳು
- 2022-23: 1,813 ಸಾಲಗಳು
- 2023-24: 1,997 ಸಾಲಗಳು
- 2024-25: 2,321 ಸಾಲಗಳು
- 2025-26 (ಆಗಸ್ಟ್ವರೆಗೆ): 704 ಸಾಲಗಳು (ಮೊದಲ ತ್ರೈಮಾಸಿಕದಲ್ಲಿ 314, ಎರಡನೇ ತ್ರೈಮಾಸಿಕದಲ್ಲಿ 390)
ಈ ಸಾಧನೆಯು ಗ್ರಾಮೀಣ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸಿ, ವಲಸೆಯನ್ನು ತಡೆಗಟ್ಟಿ, ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಮುಖ್ಯಮಂತ್ರಿಗಳ ಗುರಿ ಮತ್ತು ಕೆಪೆಕ್ನ ಕೊಡುಗೆ
ಮಾನ್ಯ ಮುಖ್ಯಮಂತ್ರಿಗಳು 2025-26ನೇ ಸಾಲಿನ ಆಯವ್ಯಯದಲ್ಲಿ 5,000 ಹೊಸ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ರೂ.206 ಕೋಟಿ ಅನುದಾನ ಘೋಷಿಸಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೆಪೆಕ್ ಸಂಸ್ಥೆಯು ಈ ಗುರಿಯತ್ತ ಭರವಸೆಯಿಂದ ಸಾಗುತ್ತಿದೆ. ಕೆಪೆಕ್ನ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರ ನೇತೃತ್ವದಲ್ಲಿ ಯೋಜನೆಯ ರಾಜ್ಯ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತಿರುವ ಕೆಪೆಕ್, ಹಲವು ನವೀನ ಕ್ರಮಗಳನ್ನು ಕೈಗೊಂಡಿದೆ.

ಜಿಲ್ಲಾವಾರು ಕಾರ್ಯಕ್ರಮಗಳು ಮತ್ತು ಸಂಪನ್ಮೂಲ ವ್ಯಕ್ತಿಗಳ ನೇಮಕ
2025-26ರ ಆರ್ಥಿಕ ವರ್ಷದಿಂದ ಯೋಜನೆಯ ಅನುಷ್ಠಾನವನ್ನು ಚುರುಕುಗೊಳಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮುಂದಾಳತ್ವದಲ್ಲಿ 19 ಜಿಲ್ಲೆಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರತಿ ಕಾರ್ಯಕ್ರಮದಲ್ಲಿ 300-400 ಸಂಭಾವ್ಯ ಉದ್ದಿಮೆದಾರರು ಮತ್ತು ರೈತರು ಭಾಗವಹಿಸಿ ಅರ್ಜಿ ಸಲ್ಲಿಸಿದ್ದಾರೆ.
ಕೆಪೆಕ್ ಸಂಸ್ಥೆಯು 89 ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಿದ್ದು, ಇನ್ನೂ 100 ಜನರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಹಾಯವಾಣಿ ಕೇಂದ್ರ, ಬ್ಯಾಂಕಿಂಗ್ ಸಲಹಾ ಕೋಶ, ಪರಿಶಿಷ್ಠ ಜಾತಿ/ಪಂಗಡದ ಉದ್ದಿಮೆದಾರರಿಗೆ ವಿಶೇಷ ಅಭಿಯಾನ ಮತ್ತು ಪ್ರತ್ಯೇಕ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಬ್ಯಾಂಕುಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿ, ಬಾಕಿ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ.
2025-26ರ ಆರ್ಥಿಕ ವರ್ಷದ ಪ್ರಗತಿ
ಪ್ರಸ್ತುತ ಆರ್ಥಿಕ ವರ್ಷದಲ್ಲಿ (2025-26) ಆಗಸ್ಟ್ ಅಂತ್ಯದವರೆಗೆ 2,937 ಅರ್ಜಿಗಳು ಸಲ್ಲಿಕೆಯಾಗಿದ್ದು, 704 ಸಾಲಗಳು ಮಂಜೂರಾಗಿವೆ. ಇದರ ಮೂಲಕ ರೂ.109.24 ಕೋಟಿ ಹೂಡಿಕೆಯಾಗಿದೆ. ಮಾಸಿಕ ವಿವರಗಳು ಈ ಕೆಳಗಿನಂತಿವೆ:
ಮಾಹೆ | ಸಲ್ಲಿಕೆಯಾದ ಅರ್ಜಿಗಳು | ಸಾಲ ಮಂಜೂರಾತಿ | ಹೂಡಿಕೆ (ರೂ. ಕೋಟಿಗಳಲ್ಲಿ) |
---|---|---|---|
ಏಪ್ರಿಲ್ 2025 | 328 | 73 | 10.19 |
ಮೇ 2025 | 398 | 126 | 19.00 |
ಜೂನ್ 2025 | 502 | 115 | 22.76 |
ಜುಲೈ 2025 | 796 | 168 | 26.58 |
ಆಗಸ್ಟ್ 2025 | 913 | 221 | 30.71 |
ಒಟ್ಟು | 2,937 | 704 | 109.24 |
ಸ್ಥಾಪನೆಯಾಗುತ್ತಿರುವ ಘಟಕಗಳು
ಯೋಜನೆಯಡಿ ಸ್ಥಾಪನೆಯಾಗುತ್ತಿರುವ ಘಟಕಗಳು ಸಿರಿಧಾನ್ಯ, ಆರೋಗ್ಯಯುಕ್ತ ಗಾಣದ ಎಣ್ಣೆ, ಬೆಲ್ಲ ಉತ್ಪಾದನೆ ಮತ್ತು ಪರಿಶುದ್ಧ ಮಸಾಲೆ ಪದಾರ್ಥಗಳ ಘಟಕಗಳಾಗಿವೆ. ಇವು ನಾರು, ಪ್ರೋಟೀನ್, ವಿಟಮಿನ್ ಮತ್ತು ಖನಿಜಯುಕ್ತ ಉತ್ಪನ್ನಗಳನ್ನು ಉತ್ಪಾದಿಸಿ, ಆರೋಗ್ಯವೃದ್ಧಿಗೆ ಸಹಕಾರಿಯಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೃಷ್ಟಿಸಿ, ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ.
ದೇಶದಲ್ಲಿ ಕರ್ನಾಟಕದ ಮುಂಚೂಣಿ ಸ್ಥಾನ
ಪಿಎಂಎಫ್ಎಂಇ ಯೋಜನೆಯಡಿ ಸಾಲ ವಿತರಣೆಯಲ್ಲಿ ಕರ್ನಾಟಕವು 2025-26ರಲ್ಲಿ ದೇಶದಲ್ಲಿ ಅಗ್ರಸ್ಥಾನ ಗಳಿಸಿದೆ. ಒಟ್ಟು 7,092 ಸಾಲಗಳಲ್ಲಿ 6,562 ಸಾಲಗಳನ್ನು ಯಶಸ್ವಿಯಾಗಿ ವಿತರಿಸಿ 93% ಸಾಧನೆ ದಾಖಲಿಸಿದೆ. ಇದು ತಮಿಳುನಾಡು (90%), ಉತ್ತರ ಪ್ರದೇಶ (86%) ಮತ್ತು ಮಹಾರಾಷ್ಟ್ರ (85%) ರಾಜ್ಯಗಳನ್ನು ಹಿಂದಿಕ್ಕಿದೆ.
ಕ್ರ.ಸಂ. | ರಾಜ್ಯ | ಸಾಲ ಮಂಜೂರಾತಿ | ಸಾಲ ಇತ್ಯರ್ಥ | ಶೇಕಡ |
---|---|---|---|---|
1 | ಕರ್ನಾಟಕ | 7,092 | 6,562 | 93% |
2 | ತಮಿಳುನಾಡು | 16,493 | 14,910 | 90% |
3 | ಉತ್ತರ ಪ್ರದೇಶ | 19,237 | 16,452 | 86% |
4 | ಮಹಾರಾಷ್ಟ್ರ | 25,218 | 21,413 | 85% |
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮತ್ತು ಕೆಪೆಕ್ ಎಂಡಿ ಸಿ.ಎನ್. ಶಿವಪ್ರಕಾಶ್ ಅವರ ದಕ್ಷತೆಯಿಂದ ಈ ಯೋಜನೆಯು ಕರ್ನಾಟಕದ ಗ್ರಾಮೀಣ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುತ್ತಿದೆ. 5,000 ಉದ್ದಿಮೆಗಳ ಗುರಿಯತ್ತ ರಾಜ್ಯವು ಭರವಸೆಯಿಂದ ಮುನ್ನಡೆಯುತ್ತಿದೆ.