ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ: ವಿಪಕ್ಷ ನಾಯಕರ ಆಗ್ರಹ
ಬೆಂಗಳೂರು, ಮೇ 29: ಗುಲ್ಬರ್ಗದಲ್ಲಿ ಪೊಲೀಸ್ ಅಧಿಕಾರಿಗಳು ತನ್ನನ್ನು ಬಂಧನದಂತಹ ಸ್ಥಿತಿಯಲ್ಲಿ ಇರಿಸಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿರುವ ಅವರು, ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ನಿಯೋಗವು ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿತ್ತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, “ನನಗೆ ನಿಜವಾಗಿಯೂ ಪ್ರಾಣಬೆದರಿಕೆ ಇದೆ. ನನಗೆ ಏನಾದರೂ ಆಗಿ, ಈ ಸರ್ಕಾರ ಮತ್ತು ಖರ್ಗೆಯವರ ಕುಮ್ಮಕ್ಕೇ ಕಾರಣವಾಗಿರುತ್ತದೆ. ಮುಖ್ಯಮಂತ್ರಿಗಳು ಪ್ರಿಯಾಂಕ್ ಖರ್ಗೆಯವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು. ಇಲ್ಲವಾದರೆ, ಮುಂದಿನ ಘಟನೆಗಳಿಗೆ ಮುಖ್ಯಮಂತ್ರಿಗಳೇ ಹೊಣೆಗಾರರು,” ಎಂದು ಎಚ್ಚರಿಕೆ ನೀಡಿದರು.
ಪೊಲೀಸರಿಂದ ತಡೆ, ಅವಮಾನ: ಆರೋಪ
“ನನ್ನ ಭದ್ರತೆಗೆ ಒಬ್ಬ ಗನ್ಮ್ಯಾನ್ ಇದ್ದರೆ, 50 ಜನ ಬಂದರೆ ಏನು ಮಾಡಲು ಸಾಧ್ಯ? ಪೊಲೀಸರು ಕೆಲವೇ ಜನರನ್ನು ತಡೆಯಲಿಲ್ಲ. ಎಐಸಿಸಿ ಅಧ್ಯಕ್ಷರ ಮಗನೆಂದರೆ ಅವರಿಗೆ ಬೇರೆ ನಿಯಮ, ಸಂವಿಧಾನವೇ? ಅವರನ್ನು ಸಚಿವರಾಗಿ ಇಟ್ಟೇ ಇರಬೇಕೇ?” ಎಂದು ಪ್ರಶ್ನಿಸಿದ ಅವರು, “ನಾನು ನೇರವಾಗಿ ಮಾತನಾಡುವುದು ಖರ್ಗೆಯವರಿಗೆ ಇಷ್ಟವಿಲ್ಲ. ಜಮೀನು ವಾಪಸ್ ಕೊಟ್ಟ ದಿನದಿಂದ ಅವರು ನನ್ನ ಹಿಂದೆ ಪಿತೂರಿ ಮಾಡುತ್ತಿದ್ದಾರೆ. ನನ್ನನ್ನು ಮುಗಿಸುವ ತಂತ್ರವನ್ನು ರೂಪಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದಾರೆ. ಪೊಲೀಸರು ‘ದಯವಿಟ್ಟು ಸಹಕರಿಸಿ’ ಎಂದರು. ಬೈಗುಳ, ಇಂಕ್, ಮೊಟ್ಟೆ ದಾಳಿಗೆ ಸಹಕರಿಸಬೇಕಿತ್ತೇ?” ಎಂದು ಕಿಡಿಕಾರಿದರು.
“ಗುಲ್ಬರ್ಗದಲ್ಲಿ 100ಕ್ಕೂ ಹೆಚ್ಚು ಪೊಲೀಸರಿದ್ದರು. ಗೃಹ ಸಚಿವರು, ಎಡಿಜಿಪಿ, ಎಸ್ಪಿ, ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ, ಸರ್ಕಲ್ ಇನ್ಸ್ಪೆಕ್ಟರ್, ಮತ್ತು ಇನ್ಸ್ಪೆಕ್ಟರ್ಗಳಿದ್ದರೂ, 25-30 ಜನರನ್ನು ತಡೆಯಲಿಲ್ಲ. ಬಹುಶಃ ಪೊಲೀಸರೇ ನನ್ನನ್ನು ಬಂಧನದಂತಹ ಸ್ಥಿತಿಯಲ್ಲಿ ಇರಿಸಿದ್ದಾರೆ,” ಎಂದು ಛಲವಾದಿ ಆರೋಪಿಸಿದರು.
ಖರ್ಗೆ ಕುಟುಂಬದ ವಿರುದ್ಧ ಟೀಕೆ
“ಈ ದೇಶದ ಪ್ರಧಾನಿಯನ್ನು ವಿಷ ಸರ್ಪಕ್ಕೆ ಹೋಲಿಸಿದವರು ಮಲ್ಲಿಕಾರ್ಜುನ ಖರ್ಗೆ. ಇದಕ್ಕೆ ದಾಖಲೆ ಇದೆ. ಪ್ರಿಯಾಂಕ್ ಖರ್ಗೆ ಮಾತು ಮಾತಿಗೆ ಆರೆಸ್ಸೆಸ್ ಚಡ್ಡಿಯವರು ಎಂದು ಕರೆಯುತ್ತಾರೆ. ಇದು ನಮಗೆ ಅವಮಾನವಲ್ಲವೇ? ನಮ್ಮನ್ನು ನಾಯಿಗೆ ಹೋಲಿಸಿದ್ದಾರೆ. ನಮ್ಮ ಕ್ಷೇತ್ರದಿಂದ ಹೊರಗಟ್ಟಬೇಕೆಂದರೆ, ಪ್ರಾಣ ತೆಗೆಯುವುದೇನಾ?” ಎಂದು ಕೇಳಿದ ಅವರು, “ನಾನು ಸತ್ಯವನ್ನೇ ಹೇಳುತ್ತೇನೆ. ತಪ್ಪಿದ್ದರೆ, ಅದನ್ನು ಗಮನಕ್ಕೆ ತಂದು ಹೋರಾಟ ಮಾಡುತ್ತೇನೆ. ಪ್ರಿಯಾಂಕ್ ಖರ್ಗೆಗೆ ನಾನು ಕಂಟಕವಾಗಿದ್ದೇನೆ ಎಂದು ಅವರಿಗೆ ಅನಿಸಿರಬಹುದು,” ಎಂದರು.
ಪಕ್ಷದಿಂದ ಸಂಘಟಿತ ಹೋರಾಟ
“ನಮ್ಮ ಪಕ್ಷದ ಮುಖಂಡರನ್ನು ಗೌರವಿಸಿ, ಈ ವಿಷಯವನ್ನು ತಿಳಿಸಿ ಹೋರಾಟ ಮಾಡುತ್ತಿದ್ದೇನೆ. ಇದು ಸಂಘಟಿತ ಹೋರಾಟ. ಡಿಜಿ, ಗೃಹ ಸಚಿವ, ಮುಖ್ಯಮಂತ್ರಿಗಳಿಗೆ ದೂರು ಕೊಡುತ್ತೇವೆ. ಕೇಂದ್ರ ಗೃಹ ಸಚಿವರಿಗೂ ಮನವಿ ಸಲ್ಲಿಸುತ್ತೇವೆ,” ಎಂದು ಛಲವಾದಿ ತಿಳಿಸಿದರು. “5 ಗಂಟೆ ನನ್ನನ್ನು ತಡೆಹಿಡಿದಿದ್ದರು. ಇಲ್ಲಿ ಪ್ರಜಾಪ್ರಭುತ್ವ ಇದೆಯೇ? ನಮ್ಮ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ, ಕೊಡಗಿನಲ್ಲಿ ಒಬ್ಬ ಹುಡುಗ ಕಾರಿಗೆ ಮೊಟ್ಟೆ ಎಸೆದಿದ್ದ. ಆಗ ಅವರು ಎಷ್ಟು ಟೀಕಿಸಿದ್ದರು? ಈಗ ನಾನು ಡಿಫ್ಯಾಕ್ಟೊ ಚೀಫ್ ಮಿನಿಸ್ಟರ್ ಆಗಿದ್ದರೂ ಗೌರವ ಇಲ್ಲವೇ?” ಎಂದು ಪ್ರಶ್ನಿಸಿದರು.
ಪೊಲೀಸರ ಮೌನ ಆಕ್ಷೇಪಾರ್ಹ
“ನನ್ನ ಕಾರಿನ ಮೇಲೆ ಇಂಕ್ ಎಸೆದಾಗ, ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದರು. 400-500 ಜನರಾದ ನಮ್ಮ ಕಾರ್ಯಕರ್ತರನ್ನು ತಡೆದರೂ, ಆಕ್ರಮಣಕಾರರನ್ನು ಕೂಗಾಟಕ್ಕೆ ಬಿಟ್ಟಿದ್ದರು. ಕುಪಿತನಾಗಿ, ‘ರಕ್ಷಣೆ ಕೊಡದಿದ್ದರೆ ನಾನು ಹೊರಗೆ ಹೋಗುತ್ತೇನೆ’ ಎಂದು ಯಾದಗಿರಿಗೆ ತೆರಳಿದೆ. ಕೆಲಸಕ್ಕೆ ಅಡ್ಡಿಪಡಿಸಿ, ಮಾರಣಾಂತಿಕ ದಾಳಿಗೆ ಯತ್ನಿಸಿದ್ದಾರೆ,” ಎಂದು ಆರೋಪಿಸಿದರು.
ಕಾರ್ಯಕರ್ತರ ಮೇಲೆ ದೌರ್ಜನ್ಯ
“ನಮ್ಮ ಪಕ್ಷದ ಎಸ್ಸಿ ಮೋರ್ಚಾದ ಮಾಜಿ ಉಪಾಧ್ಯಕ್ಷ ಮತ್ತು ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ ಅವರನ್ನು ತಳ್ಳಾಡಿ, ಬಟ್ಟೆ ಹರಿದಿದ್ದಾರೆ. ರಾತ್ರಿ 3 ಗಂಟೆವರೆಗೆ ಅವರನ್ನು ಕೂಡಿಹಾಕಿದ್ದಾರೆ. ಒದೆ ತಿಂದವರ ಮೇಲೇ ದೂರು ನೀಡುವುದಾಗಿ ಧಮಕಿ ಹಾಕಿದ್ದಾರೆ,” ಎಂದು ಛಲವಾದಿ ವಿವರಿಸಿದರು.
Discover more from amiroNEWS
Subscribe to get the latest posts sent to your email.