ಬೆಂಗಳೂರು: ಪ್ರವಾಸೋದ್ಯಮವು ಸಮಾಜದ ಅಡೆತಡೆಗಳನ್ನು ನಿವಾರಿಸುವ ಶಕ್ತಿಯಾಗಿದೆ ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅನುಭವದ ಗುಣಮಟ್ಟ ಮತ್ತು ಸುಸ್ಥಿರತೆಯ ಮೇಲೆ ಎಲ್ಲಾ ಪಾಲುದಾರರು ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದರು.
ರೆಸಿಡೆನ್ಸಿ ರಸ್ತೆಯ ಮೈಸೂರು ಹಾಲ್ನಲ್ಲಿ ಆಯೋಜಿಸಲಾಗಿದ್ದ ‘ಕನೆಕ್ಟ್-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪ್ರವಾಸೋದ್ಯಮದ ಬೆಳವಣಿಗೆಯ ಪ್ರಯೋಜನಗಳು ಬೆಂಗಳೂರಿನ ಜನನಿಬಿಡ ಬೀದಿಗಳಿಂದ ಹಿಡಿದು ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಶಾಂತ ಹಳ್ಳಿಗಳವರೆಗೆ ರಾಜ್ಯದ ಕೊನೆಯ ವ್ಯಕ್ತಿಗೂ ತಲುಪಬೇಕು ಎಂದರು. ಕರ್ನಾಟಕವನ್ನು ಶಾಂತಿ, ಕಲಿಕೆ ಮತ್ತು ಸಮೃದ್ಧಿಯ ದಾರಿದೀಪವನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಇಂದು ಪ್ರವಾಸಿಗರು ಕೇವಲ ದೊಡ್ಡ ರೆಸಾರ್ಟ್ಗಳಿಗೆ ಮಾತ್ರ ಹೋಗುವವರಲ್ಲ ಎಂದು ಹೇಳಿದ ಅವರು, ಅಂಕಿಅಂಶಗಳ ಪ್ರಕಾರ 80 ರಿಂದ 85% ಪ್ರವಾಸಿಗರು ಧಾರ್ಮಿಕ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಂತಹ ಪ್ರವಾಸಿಗರಿಗೆ ಉತ್ತಮ ಗುಣಮಟ್ಟದ ಹೋಟೆಲ್ಗಳು, ಹೋಂ ಸ್ಟೇ, ಕಮ್ಯೂನಿಟಿ ಸ್ಟೇ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಸೂಚಿಸಿದರು.

ಒಬ್ಬ ದೇಶೀಯ ಪ್ರವಾಸಿಗ ರೂ.6,178 ಮತ್ತು ವಿದೇಶಿ ಪ್ರವಾಸಿಗ ರೂ.2,87,261 ವೆಚ್ಚ ಮಾಡುತ್ತಿದ್ದು, ಈ ವೆಚ್ಚವನ್ನು ದುಪ್ಪಟ್ಟುಗೊಳಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದರು.
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಂಡು ಮಹಿಳೆಯರಿಗೆ (ಶೇ.50) ಪ್ರವಾಸೋದ್ಯಮ ಸೇವೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿ ಸಾಮಾಜಿಕ ಬದ್ಧತೆಯನ್ನು ತೋರಬೇಕು ಎಂದು ಸಚಿವರು ಸಲಹೆ ನೀಡಿದರು.
ಕರ್ನಾಟಕವನ್ನು “ಒಂದು ರಾಜ್ಯ, ಹಲವು ಜಗತ್ತು” ಎಂದು ಬಣ್ಣಿಸಲಾಗುತ್ತದೆ ಎಂದು ಹೇಳಿದ ಅವರು, ಬೇಲೂರು-ಹಳೇಬೀಡು, ಹಂಪಿ, ಲಕ್ಕುಂಡಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಮಂಜಿನ ಬೆಟ್ಟಗಳು ಮತ್ತು 343 ಕಿ.ಮೀ. ಉದ್ದದ ಸುಂದರ ಕರಾವಳಿಯಂತಹ ವಾಸ್ತುಶಿಲ್ಪದ ಅದ್ಭುತಗಳು ರಾಜ್ಯದ ಆತ್ಮವನ್ನು ಪ್ರತಿಬಿಂಬಿಸುತ್ತವೆ ಎಂದರು.

ಕರ್ನಾಟಕ ಪ್ರವಾಸೋದ್ಯಮ ನೀತಿ 2024-25 ಅನ್ನು ಜಾರಿಗೆ ತಂದಿದ್ದು, ಇದು ಕೇವಲ ಒಂದು ವಲಯವನ್ನಲ್ಲ, ಅಂತರ್ಗತ ಬೆಳವಣಿಗೆ, ಶಾಂತಿ ಮತ್ತು ಜ್ಞಾನೋದಯದ ಇಂಜಿನ್ನ್ನು ನಿರ್ಮಿಸುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯವನ್ನು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಗೆ ಪ್ರವಾಸೋದ್ಯಮ ಗಣನೀಯ ಕೊಡುಗೆ ನೀಡಬೇಕು ಮತ್ತು ಕರ್ನಾಟಕವನ್ನು ಜಾಗತಿಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸುವುದು ಗುರಿಯಾಗಿದೆ ಎಂದರು.
ಎಐ ಸಮ್ಮಿಟ್ ಮಾದರಿಯಲ್ಲಿ ಹಲವು ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಬೆಂಗಳೂರು ಟೆಕ್ ಸಮ್ಮಿಟ್, ಇನ್ವೆಸ್ಟರ್ಸ್ ಮೀಟ್ ಮುಂತಾದ ಯಶಸ್ವಿ ಕಾರ್ಯಕ್ರಮಗಳ ನಂತರ ಇತರ ಕಾರ್ಯಕ್ರಮಗಳು ಕಡಿಮೆಯಾಗಿರುವುದು ವಿಷಾದನೀಯ ಎಂದು ಹೇಳಿದ ಅವರು, ಹೆಚ್ಚಿನ ಇವೆಂಟ್ಗಳನ್ನು ಆಯೋಜಿಸಬೇಕು ಮತ್ತು ಬ್ರಾಂಡ್ ಬೆಂಗಳೂರು ಜೊತೆಗೆ ಬಿಯಾಂಡ್ ಬೆಂಗಳೂರಿಗೆ ಒತ್ತು ನೀಡಬೇಕು ಎಂದು ಸೂಚಿಸಿದರು.
ಕನ್ವೆನ್ಷನಲ್ ಟೂರಿಸ್ಟ್ ಪ್ರಾಜೆಕ್ಟ್ಗಳ ಜೊತೆಗೆ PPP ಮಾದರಿಯಲ್ಲಿ MICE ಟೂರಿಸಂ, ಇವೆಂಟ್ ಟೂರಿಸಂ, ಮೆಡಿಕಲ್ ಟೂರಿಸಂ, ಗಾಲ್ಫ್ ಟೂರಿಸಂ ಮುಂತಾದ ನೂತನ ಉತ್ಪನ್ನಗಳನ್ನು ಬೆಳೆಸಬೇಕು ಎಂದು ಅವರು ಹೇಳಿದರು.
ಪ್ರವಾಸೋದ್ಯಮ ನಿರ್ವಾಹಕರು, ಹೋಟೆಲ್ ಮಾಲೀಕರು ಮತ್ತು ಹೋಂ ಸ್ಟೇ ಮಾಲೀಕರು ಈ ಉದ್ಯಮದ ಜೀವಾಳ ಎಂದು ಹೇಳಿದ ಸಚಿವರು, ಎಲ್ಲರ ಸಹಕಾರವಿಲ್ಲದಿದ್ದರೆ ವಲಯ ಸ್ಥಬ್ದವಾಗುತ್ತದೆ. ಕಠಿಣ ಸಮಯದಲ್ಲೂ ಸರ್ಕಾರ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು.

ಎಐ ಯುಗದಲ್ಲಿ ವರ್ತನೆ ಮತ್ತು ಆಟಿಟ್ಯೂಡ್ ಬದಲಾವಣೆ ಅಗತ್ಯ ಎಂದು ಹೇಳಿದ ಅವರು, ರಾಜ್ಯದ ಪ್ರವಾಸೋದ್ಯಮ ಭವಿಷ್ಯವನ್ನು ಎಲ್ಲರೂ ಸೇರಿ ಬದಲಾಯಿಸುವ ಸಮಯ ಬಂದಿದೆ ಎಂದರು.
ಸರ್ಕಾರ ಬಂದ ನಂತರ ರೂ.2,091.46 ಕೋಟಿ ಮೊತ್ತದ 122 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ 11,200 ನೇರ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಅವರು ತಿಳಿಸಿದರು. ಕರಾವಳಿ ಭಾಗದ ಅಭಿವೃದ್ಧಿಗೆ ಮಂಗಳೂರಿನಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಕಳೆದ ವರ್ಷ ದಕ್ಷಿಣ ಭಾರತ ರಾಜ್ಯಗಳ ಹೂಡಿಕೆ ಸಮಾವೇಶದಲ್ಲಿ ರೂ.3,000 ಕೋಟಿ ಬಂಡವಾಳ ಹೂಡಿಕೆ ಒಪ್ಪಂದಗಳಾದರೂ ಒಂದು ಯೋಜನೆಯೂ ಸಾಕಾರಗೊಳ್ಳದಿರುವುದು ಬೇಸರದ ಸಂಗತಿ ಎಂದು ವಿಷಾದಿಸಿದ ಅವರು, ಹೂಡಿಕೆದಾರರು ಮುಂದೆ ಬಂದು ಉದ್ಯೋಗ ಸೃಷ್ಟಿಸಬೇಕು ಮತ್ತು ಇತರರನ್ನು ಆಕರ್ಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಎಸ್ ಅಧ್ಯಕ್ಷ ಶಾಮರಾಜು, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕ್ ಚಂದ್ರ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಜೆಎಲ್ಆರ್ ವ್ಯವಸ್ಥಾಪಕ ನಿರ್ದೇಶಕ ಮನು ಸೇರಿದಂತೆ ಅಧಿಕಾರಿಗಳು, ಹೂಡಿಕೆದಾರರು, ಹೋಂ ಸ್ಟೇ ಮತ್ತು ರೆಸಾರ್ಟ್ ಉದ್ಯಮಿಗಳು, ಪ್ರವಾಸಿಗರು ಭಾಗವಹಿಸಿದ್ದರು.












