ಬೆಂಗಳೂರು: ಕರ್ನಾಟಕ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಏಟ್ರಿಯಾ ವಿಶ್ವವಿದ್ಯಾಲಯದಲ್ಲಿ ಸ್ಥಾಪಿತವಾದ ಏಟ್ರಿಯಾ ಬಿಯಾಂಡರ್ ಲ್ಯಾಬ್ಗಳನ್ನು (Atria Beyonder Labs) ಉದ್ಘಾಟಿಸಿದರು.
ಈ ಹೊಸ ಆವಿಷ್ಕಾರ ಹಾಗೂ ಉದ್ಯಮ ವೇದಿಕೆಯು ಸಂಶೋಧಕರು, ಸಂಸ್ಥಾಪಕರು ಮತ್ತು ಉದ್ಯಮ ವಲಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ವಿಜ್ಞಾನ ಮತ್ತು ಮುಂಚೂಣಿಯ ತಂತ್ರಜ್ಞಾನಗಳ ಮೂಲಕ ನೈಜ-ಜಗತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಚುರುಕುಗೊಳಿಸುವ ಗುರಿಯನ್ನು ಹೊಂದಿದೆ. ಲ್ಯಾಬ್ಗಳು ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದು, ಸ್ವಯಂಚಾಲಿತ ಲಾಜಿಸ್ಟಿಕ್ಸ್ ವಿಮಾನಗಳು, ಗ್ರೀನ್ ಹೈಡ್ರೋಜನ್ ಹಾಗೂ ಬಯೋಮೆಡಿಕಲ್ ಸುರಕ್ಷತೆಯಂತಹ ಕ್ಷೇತ್ರಗಳಲ್ಲಿ 9 ಆರಂಭಿಕ ಹಂತದ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುತ್ತಿವೆ.

ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕರ್ನಾಟಕವು ಸೇವಾ ಮತ್ತು ಸ್ಕೇಲ್ನಿಂದ ಮುಂದೆ ಸಾಗಿ ಡೀಪ್ಟೆಕ್, ವಿಜ್ಞಾನ ಆಧಾರಿತ ಆವಿಷ್ಕಾರ ಹಾಗೂ ಬೌದ್ಧಿಕ ಆಸ್ತಿ ಸೃಷ್ಟಿಯ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ಹೇಳಿದರು. ಎಐ ಮತ್ತು ಜೈವಿಕ ತಂತ್ರಜ್ಞಾನದ ಸಮ್ಮಿಲನ, ಸಾಗರ ಮತ್ತು ನೀಲಿ ಆರ್ಥಿಕತೆಯ ಉದಯೋನ್ಮುಖ ಅವಕಾಶಗಳು, ಪ್ರಬಲ ಸಂಶೋಧನೆ ಹಾಗೂ ಅಭಿವೃದ್ಧಿ ಇಕೋಸಿಸ್ಟಮ್ ನಿರ್ಮಾಣದ ಮಹತ್ವವನ್ನು ಅವರು ಒತ್ತಿ ಹೇಳಿದರು.

ಏಟ್ರಿಯಾ ಬಿಯಾಂಡರ್ ಲ್ಯಾಬ್ಗಳಂತಹ ಯೋಜನೆಗಳು ಯುವ ಉದ್ಯಮಿಗಳಿಗೆ ಪ್ರಬಲ ವೇಗವರ್ಧಕವಾಗಿ ಕಾರ್ಯನಿರ್ವಹಿಸಬಹುದು ಎಂದು ಸಚಿವರು ತಿಳಿಸಿದರು. ಇವು ಅತ್ಯಾಧುನಿಕ ಸಂಶೋಧನೆಗಳನ್ನು ಅರ್ಥಪೂರ್ಣ ಉತ್ಪನ್ನಗಳು, ಉದ್ಯೋಗಾವಕಾಶಗಳು ಹಾಗೂ ಕರ್ನಾಟಕಕ್ಕೆ ದೀರ್ಘಕಾಲೀನ ಕೊಡುಗೆಯಾಗಿ ಪರಿವರ್ತಿಸುವಲ್ಲಿ ಸಹಕಾರಿಯಾಗಲಿವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಏಟ್ರಿಯಾ ವಿಶ್ವವಿದ್ಯಾಲಯದ ಪ್ರೋ-ಚಾನ್ಸಲರ್ ಶ್ರೀ ಕೆ. ನಾಗರಾಜು, ಫೌಂಡರ್ ಮತ್ತು ಚಾನ್ಸಲರ್ ಡಾ. ಸುಂದರ್ ರಾಜು, ವೈಸ್ ಚಾನ್ಸಲರ್ ಡಾ. ರಾಜೀವನ್ ನಾಯರ್ ಮಾಧವನ್, ರಜಿಸ್ಟ್ರಾರ್ ಡಾ. ನಾರಾಯಣಸ್ವಾಮಿ, ಕ್ರಿಸ್ಪ್ಬಿಟ್ಸ್ ಸಂಸ್ಥಾಪಕ ಡಾ. ವಿಜಯ್ ಚಂದ್ರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

(ಚಿತ್ರ ವಿವರಣೆ: ಎಡದಿಂದ ಬಲಕ್ಕೆ – ಶ್ರೀ ಕೆ. ನಾಗರಾಜು (ಪ್ರೋ-ಚಾನ್ಸಲರ್), ಡಾ. ಸುಂದರ್ ರಾಜು (ಫೌಂಡರ್ & ಚಾನ್ಸಲರ್), ಶ್ರೀ ಪ್ರಿಯಾಂಕ್ ಖರ್ಗೆ (ಸಚಿವರು), ಡಾ. ರಾಜೀವನ್ ನಾಯರ್ ಮಾಧವನ್ (ವೈಸ್ ಚಾನ್ಸಲರ್), ಡಾ. ವಿಜಯ್ ಚಂದ್ರು (ಕ್ರಿಸ್ಪ್ಬಿಟ್ಸ್ ಫೌಂಡರ್), ಡಾ. ನಾರಾಯಣಸ್ವಾಮಿ (ರಜಿಸ್ಟ್ರಾರ್).)
ಈ ಉದ್ಘಾಟನೆಯು ಕರ್ನಾಟಕದ ಡೀಪ್ಟೆಕ್ ಮತ್ತು ವಿಜ್ಞಾನ ಆಧಾರಿತ ನವೋದ್ಯಮ ಪರಿಸರವನ್ನು ಬಲಪಡಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.












