ಪ್ರೇಯಸಿ ಮನೆಯಿಂದ ಮರಳಿ ಬರುತ್ತಿದ್ದ ಯುವಕನನ್ನು ನಡು ರಸ್ತೆಯಲ್ಲೇ ಮಾರಕಾಸ್ರ್ತಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಕೋಲಾರದ ನೂರ್ ನಗರದಲ್ಲಿ ರಾತ್ರಿ ನಡೆದಿದೆ.
ಮಿಲ್ಲತ್ ನಗರದ ನಿವಾಸಿ 28 ವರ್ಷದ ಉಸ್ಮಾನ್ ಕೊಲೆಯಾದ ಯುವಕನಾಗಿದ್ದು, ಈತ ಕಳೆದ 5 ವರ್ಷಗಳ ಹಿಂದೆ ಜಬಿನಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ಹೆಂಡತಿ ಜಬಿನಾ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದರು, ಆಕೆಯನ್ನು ನೋಡಲು ಬರುತ್ತಿದ್ದ ಸಂಬಂಧಿ ಯುವತಿಯನ್ನು ಉಸ್ಮಾನ್ ಪ್ರೀತಿಸಲು ಆರಂಭಿಸಿದ್ದ. ಈ ಬಗ್ಗೆ ಪ್ರೇಯಸಿ ಮನೆಯವರು ಸಾಕಷ್ಟು ಬಾರಿ ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದರೆನ್ನಲಾಗಿದೆ. ಕಳೆದ ರಾತ್ರಿ ಉಸ್ಮಾನ್ ನೂರ್ ನಗರದ ಪ್ರೇಯಸಿ ಮನೆಗೆ ಹೋಗಿ ವಾಪಸ್ ಮರಳುತ್ತಿದ್ದಾಗ ಉಸ್ಮಾನ್ ನನ್ನು ಅಡ್ಡಗಟ್ಟಿದ್ದು ಆತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಅಟ್ಟಾಡಿಸಿ ಮಾರಕಾಸ್ರ್ತಗಳಿಂದ ಭೀಕರವಾಗಿ ಹಲ್ಲೆ ನಡೆಸಿದಾಗ, ತಪ್ಪಿಸಿಕೊಂಡು ಹೋಗಿ ಕುಸಿದು ಬಿದ್ದಿದ್ದಾನೆ, ಕುಸಿದು ಬಿದ್ದ ಯುವಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಉಸ್ಮಾನ್ ತಂದೆ ಹಾಗೂ ಸಹೋದರಿ ದೂರು ಸಲ್ಲಿಸಿದ್ದಾರೆ, ಕೊಲೆ ಆರೋಪಿಗಳು ಹಲ್ಲೆ ಮಾಡುವ ಬದಲು ಪೊಲೀಸರಿಗೆ ದೂರು ನೀಡಿ ಕ್ರಮ ಜರುಗಿಸಬಹುದಿತ್ತು, ಅದು ಬಿಟ್ಟು ಗುಂಪು ಗೂಡಿ ಈ ರೀತಿ ಭೀಕರವಾಗಿ ಕೊಚ್ಚಿಕೊಲೆ ಮಾಡಿದ್ದಾರೆಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.