ಫ್ರಾಂಕ್ಫರ್ಟ್: ಜರ್ಮನಿಯ ಪ್ರವಾಸದಲ್ಲಿರುವ ಕರ್ನಾಟಕದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ನೇತೃತ್ವದ ನಿಯೋಗವು ಜಿಟಿಟಿಸಿಯ (ಗವರ್ನಮೆಂಟ್ ಟೂಲ್ ರೂಮ್ ಅಂಡ್ ಟ್ರೈನಿಂಗ್ ಸೆಂಟರ್) ಹಳೆಯ ವಿದ್ಯಾರ್ಥಿಗಳ ಜೊತೆ ಫ್ರಾಂಕ್ಫರ್ಟ್ನಲ್ಲಿ ಸಮಾಲೋಚನೆ ನಡೆಸಿತು.
ಜರ್ಮನ್ ಕಾನ್ಸುಲೇಟ್ ಫ್ರಾಂಕ್ಫರ್ಟ್ನಲ್ಲಿ ಆಯೋಜಿತವಾದ ವಿಶೇಷ ಕಾರ್ಯಕ್ರಮದಲ್ಲಿ ಜಿಟಿಟಿಸಿಯ ಹಳೆಯ ವಿದ್ಯಾರ್ಥಿಗಳು ತಮ್ಮ ಸಂಸ್ಥೆಯನ್ನು ಪ್ರತಿನಿಧಿಸಿ, ಸಚಿವರೊಂದಿಗೆ ತಮ್ಮ ವೃತ್ತಿಪರ ಸಾಧನೆಗಳು ಮತ್ತು ಜರ್ಮನಿಯಲ್ಲಿನ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಕರ್ನಾಟಕ ಕಾಂಗ್ರೆಸ್ ಸರ್ಕಾರವು ಜಿಟಿಟಿಸಿಯಲ್ಲಿ ಹಲವು ನವೀನ ಮತ್ತು ಕ್ರಿಯಾಶೀಲ ಯೋಜನೆಗಳನ್ನು ಜಾರಿಗೆ ತಂದಿರುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಸಂಯೋಜಿಸುವುದು, ಉತ್ತಮ ಅಭ್ಯಾಸಗಳಿಗೆ ವೇದಿಕೆ ಸೃಷ್ಟಿಸುವುದು ಸೇರಿದಂತೆ ಜಿಟಿಟಿಸಿಯ ಪ್ರಗತಿಯ ಕುರಿತು ವಿವರಿಸಿದರು.
ಜಿಟಿಟಿಸಿಯಲ್ಲಿ ಜರ್ಮನ್ ಭಾಷಾ ಪ್ರಯೋಗಾಲಯಗಳ ಸ್ಥಾಪನೆ, ಜಾಗತಿಕ ಕಾರ್ಯಪಡೆಯ ಚಲನಶೀಲತೆ, ಕೌಶಲ್ಯಾಭಿವೃದ್ಧಿ, ಉನ್ನತ ಶಿಕ್ಷಣ, ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕುರಿತು ಸಚಿವರು ಹಳೆಯ ವಿದ್ಯಾರ್ಥಿಗಳಿಗೆ ತಿಳಿಸಿದರು. ಕರ್ನಾಟಕ ಮತ್ತು ಜರ್ಮನಿಯ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ರಾಜ್ಯ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಡಾ. ಪಾಟೀಲ್ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕದ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜರ್ಮನ್ ವಾಣಿಜ್ಯ ಮಂಡಳಿಯೊಂದಿಗೆ ಸಮಾಲೋಚನೆ ನಡೆಸಿದರು. ಕಂಪನಿಗಳು, ಕೈಗಾರಿಕೆಗಳು, ಕೌಶಲ್ಯ ಕಾರ್ಯಕ್ರಮಗಳು, ವೃತ್ತಿಪರ ತರಬೇತಿ ಸಂಸ್ಥೆಗಳು, ಶಿಕ್ಷಣ, ಮತ್ತು ಅಂತಾರಾಷ್ಟ್ರೀಯ ಕಾರ್ಯಪಡೆಯೊಂದಿಗೆ ಸಹಯೋಗವನ್ನು ವೃದ್ಧಿಸುವ ಕುರಿತು ಚರ್ಚೆ ನಡೆಸಲಾಯಿತು.
ಈ ಸಂಗಮವು ಕರ್ನಾಟಕ ಮತ್ತು ಜರ್ಮನಿಯ ನಡುವಿನ ಶೈಕ್ಷಣಿಕ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಸಹಕಾರವನ್ನು ಗಾಢವಾಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.