ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ದರ ಏರಿಕೆಗೆ ಸಂಬಂಧಿಸಿದ ತಜ್ಞರ ಸಮಿತಿ ವರದಿಯನ್ನು ಬಹಿರಂಗಪಡಿಸದೆ ಗುಟ್ಟಾಗಿಟ್ಟಿರುವುದು ಸಾರ್ವಜನಿಕರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ದರ ಏರಿಕೆ ಜಾರಿಗೊಳಿಸಿ ಈಗಾಗಲೇ ನಾಲ್ಕ ತಿಂಗಳು ಕಳೆದರೂ, ವರದಿಯನ್ನು ಸಾರ್ವಜನಿಕರಿಗೆ ಲಭ್ಯವಾಗಿಲ್ಲ.
ಕಳೆದ ತಿಂಗಲು ಬಿಜೆಪಿ ಸಂಸದರು ಬಿಎಂಆರ್ಸಿಎಲ್ಗೆ ಪತ್ರ ಬರೆದು, ಪರಿಷ್ಕೃತ ದರ ಏರಿಕೆ ವರದಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ದೆಹಲಿ, ಮುಂಬೈ ಮತ್ತು ಹೈದರಾಬಾದ್ ಮೆಟ್ರೋಗಳು ತಮ್ಮ ದರ ಏರಿಕೆ ವರದಿಗಳನ್ನು ಬಹಿರಂಗಪಡಿಸಿದ್ದರೆ, ಬಿಎಂಆರ್ಸಿಎಲ್ ಈ ವಿಷಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಯಾಣಿಕರ ಸಂಘಗಳು ಪ್ರಶ್ನಿಸಿವೆ.
71% ದರ ಏರಿಕೆ, ಆದರೆ ವರದಿ ಗುಟ್ಟು
ನಮ್ಮ ಮೆಟ್ರೋ ದರ ಪರಿಷ್ಕರಣೆಗೆ ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಆರ್. ತಾರಣಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ತಮಣ ರೆಡ್ಡಿ, ಕೇಂದ್ರ ಸರ್ಕಾರದ ಸತೀಂದ್ರಪಾಲ್ ಸಿಂಗ್ ಮತ್ತು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸದಸ್ಯರಾಗಿದ್ದರು. ಈ ಸಮಿತಿಯ ಶಿಫಾರಸಿನ ಆಧಾರದಲ್ಲಿ ಬಿಎಂಆರ್ಸಿಎಲ್ ಶೇ.71ರಷ್ಟು ದರ ಏರಿಕೆ ಮಾಡಿತ್ತು. ಆದರೆ, ಈ ಶಿಫಾರಸುಗಳ ವಿವರಗಳನ್ನು ಇದುವರೆಗೆ ಬಹಿರಂಗಗೊಳಿಸಿಲ್ಲ.
“ತಪ್ಪು ಮುಚ್ಚಿಕೊಳ್ಳುವ ಯತ್ನವಾ?”
ಬಿಎಂಆರ್ಸಿಎಲ್ನ ಈ ನಡೆಯನ್ನು ಪ್ರಯಾಣಿಕರ ಸಂಘಗಳು ತೀವ್ರವಾಗಿ ಖಂಡಿಸಿವೆ. “ದರ ಏರಿಕೆಯ ವರದಿಯನ್ನು ಗುಟ್ಟಾಗಿಟ್ಟು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಬಿಎಂಆರ್ಸಿಎಲ್ ಯತ್ನಿಸುತ್ತಿದೆಯೇ?” ಎಂದು ಪ್ರಯಾಣಿಕರ ಸಂಘದ ಮುಖಂಡರು ಪ್ರಶ್ನಿಸಿದ್ದಾರೆ. ಪಾರದರ್ಶಕತೆಯ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗುತ್ತಿದೆ.
ಸಾರ್ವಜನಿಕರ ಆಗ್ರಹ
ದರ ಏರಿಕೆಯಿಂದ ದಿನನಿತ್ಯದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. “ವರದಿಯನ್ನು ಏಕೆ ಬಹಿರಂಗಪಡಿಸಲಾಗುತ್ತಿಲ್ಲ? ಸಾರ್ವಜನಿಕರಿಗೆ ತಿಳಿಯುವ ಹಕ್ಕಿಲ್ಲವೇ?” ಎಂದು ನಗರದ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಎಂಆರ್ಸಿಎಲ್ ಶೀಘ್ರವೇ ವರದಿಯನ್ನು ಪ್ರಕಟಿಸಿ, ಪಾರದರ್ಶಕತೆಯನ್ನು ಕಾಪಾಡಿಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.