ಬೆಂಗಳೂರು : ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ಕರ್ನಾಟಕ ಸರ್ಕಾರದ ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಕರ್ಯ ಸಚಿವ ಶ್ರೀ ಎಂ.ಬಿ. ಪಾಟೀಲ್ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ಉದ್ಯಮ ಮುಖಂಡರು, ನವೋದ್ಯಮಿಗಳು ಮತ್ತು ಡೀಪ್ ಟೆಕ್ ನಾವೀನ್ಯಕಾರರೊಂದಿಗೆ ಫಲಪ್ರದ ಸಂವಾದ ನಡೆಸಿದರು. ಈ ಅಧಿವೇಶನದಲ್ಲಿ ಭಾರತದ ನಾವೀನ್ಯತೆ, ಉದ್ಯಮಶೀಲತೆ ಮತ್ತು ದೃಢವಾದ ನೀತಿ ಚೌಕಟ್ಟನ್ನು ಒತ್ತಿ ಹೇಳಿದ ಸಚಿವರು, ಆರಂಭಿಕ ಮತ್ತು ಬೆಳವಣಿಗೆಯ ಹಂತದ ಡೀಪ್ ಟೆಕ್ ಸ್ಟಾರ್ಟ್ಅಪ್ಗಳಿಗೆ ಬೆಂಬಲ ನೀಡಲು 10,000 ಕೋಟಿ ರೂ.ಗಳ ‘ನವೋದ್ಯಮಗಳಿಗಾಗಿ ಫಂಡ್ ಆಫ್ ಫಂಡ್ಸ್’ (ಎಫ್ಎಫ್ಎಸ್) ಯೋಜನೆಯನ್ನು ಘೋಷಿಸಿದರು.
ಜೊತೆಗೆ, ಖಾಸಗಿ ವಲಯದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ದೀರ್ಘಾವಧಿಯ, ಕಡಿಮೆ ವೆಚ್ಚದ ಬಂಡವಾಳವನ್ನು ಒದಗಿಸುವ 1 ಲಕ್ಷ ಕೋಟಿ ರೂ.ಗಳ ‘ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆ’ (ಆರ್ಡಿಐ) ಯೋಜನೆಯ ಬಗ್ಗೆಯೂ ಸಚಿವರು ವಿವರಿಸಿದರು. ಕೋವಿಡ್ ನಂತರದ ಭಾರತದ ಆರ್ಥಿಕ ಸದೃಢತೆಯನ್ನು ಎತ್ತಿ ತೋರಿಸಿದ ಅವರು, ಎಲೆಕ್ಟ್ರಾನಿಕ್ಸ್, ಉತ್ಪಾದನೆ, ಔಷಧ ಮತ್ತು ಜವಳಿ ಕ್ಷೇತ್ರಗಳಲ್ಲಿ ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳ ಗುಣಮಟ್ಟ, ವಿನ್ಯಾಸ ಮತ್ತು ಸ್ಪರ್ಧಾತ್ಮಕತೆಯ ಸುಧಾರಣೆಯಿಂದ ಜಾಗತಿಕ ಖ್ಯಾತಿಯನ್ನು ಗಳಿಸುತ್ತಿರುವುದನ್ನು ಹೊಗಳಿದರು.
ವ್ಯಾಪಾರ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಿಯಂತ್ರಕ ಚೌಕಟ್ಟುಗಳನ್ನು ಸರಳಗೊಳಿಸುವುದು, ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವ ಪ್ರಾಮುಖ್ಯತೆಯನ್ನು ಶ್ರೀ ಗೋಯಲ್ ಒತ್ತಿ ಹೇಳಿದರು. ಈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಹಾಗೂ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಪ್ರಮುಖ ಉದ್ಯಮಿಗಳ ಸಂವಾದ
100ಕ್ಕೂ ಹೆಚ್ಚು ಪ್ರಮುಖ ಪಾಲುದಾರರು, ಉದ್ಯಮ ದಿಗ್ಗಜರು, ನವೋದ್ಯಮ ಸಂಸ್ಥಾಪಕರು, ಸಾಹಸೋದ್ಯಮ ಬಂಡವಾಳಶಾಹಿಗಳು ಮತ್ತು ಶೈಕ್ಷಣಿಕ ಪ್ರತಿನಿಧಿಗಳು ಈ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶ್ರೀ ಕ್ರಿಸ್ ಗೋಪಾಲಕೃಷ್ಣನ್, ಶ್ರೀಮತಿ ಕಿರಣ್ ಮಜುಂದಾರ್-ಶಾ, ಶ್ರೀಮತಿ ಗೀತಾಂಜಲಿ ಕಿರ್ಲೋಸ್ಕರ್ ಮತ್ತು ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಸಿಐಐ ದಕ್ಷಿಣ ವಲಯದ ಅಧ್ಯಕ್ಷ ಶ್ರೀ ಕಮಲ್ ಬಾಲಿ ಅವರ ನೇತೃತ್ವದಲ್ಲಿ ಒಳನೋಟದ ಚರ್ಚೆಯಲ್ಲಿ ತೊಡಗಿದರು.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮದ (ಎನ್ಐಸಿಡಿಸಿ) ಸಿಇಒ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಭಾರತದ ಕೈಗಾರಿಕಾ ಕ್ಷೇತ್ರವನ್ನು ಬಲಪಡಿಸುವ ಕುರಿತು ಪ್ರಸ್ತುತಿಗೊಳಿಸಿದರು. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಸಾಬೀತಾದಂತೆ, ಉತ್ಪನ್ನ ಅಭಿವೃದ್ಧಿ ಮತ್ತು ನಾವೀನ್ಯತೆಯಲ್ಲಿ ಭಾರತದ ಸಾಮರ್ಥ್ಯವನ್ನು ಚರ್ಚೆಯು ಎತ್ತಿ ತೋರಿತು.
ವಿಕಸಿತ ಭಾರತದ ದೃಷ್ಟಿಕೋನ
ವಿಶ್ವದ ಮೂರನೇ ಅತಿದೊಡ್ಡ ನವೋದ್ಯಮ ಪರಿಸರ ವ್ಯವಸ್ಥೆಯಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲು ವೇಗವಾಗಿ ಸಾಗಬೇಕಾದ ಅಗತ್ಯವನ್ನು ಈ ಸಂವಾದವು ಒತ್ತಿತು. ಎಲ್ಲರನ್ನೂ ಒಳಗೊಂಡ, ನಾವೀನ್ಯತೆ ಆಧಾರಿತ ಬೆಳವಣಿಗೆಯನ್ನು ಸಕ್ರಿಯಗೊಳಿಸುವ ಮತ್ತು ‘ವಿಕಸಿತ ಭಾರತ @2047’ ದೃಷ್ಟಿಕೋನಕ್ಕೆ ಅನುಗುಣವಾಗಿ ಜಾಗತಿಕವಾಗಿ ಸ್ಪರ್ಧಾತ್ಮಕ ಉದ್ಯಮ ಪರಿಸರವನ್ನು ನಿರ್ಮಿಸುವ ಭಾರತ ಸರ್ಕಾರದ ಬದ್ಧತೆಯನ್ನು ಈ ಕಾರ್ಯಕ್ರಮವು ಪುನರುಚ್ಚರಿಸಿತು.