ಬೆಂಗಳೂರು ನಗರದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯದ ಹಿನ್ನಲೆಯಲ್ಲಿ ಸಿಸಿಬಿ ಪೊಲೀಸರು ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದ್ದು, ಬೆಟ್ಟಿಂಗ್ ಮತ್ತು ಬ್ಲಾಕ್ ಟಿಕೆಟ್ ಮಾರಾಟ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಟ್ಟಿಂಗ್ ಪ್ರಕರಣದಲ್ಲಿ ಮೂರು ಮಂದಿ ಬಂಧನ:
ಜೀವನಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಜಸ್ಥಾನ ಮೂಲದ ಸಂತೋಷ್, ಯಶ್ ಮತ್ತು ರಾಜೇಶ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳು ದುಬೈ ಎಕ್ಸ್ಚೇಂಜ್ ಹೆಸರಿನಲ್ಲಿ ಆನ್ಲೈನ್ ಮೂಲಕ ಬೆಟ್ಟಿಂಗ್ ನಡೆಸುತ್ತಿದ್ದಂತೆ ಆರೋಪಿಸಲಾಗಿದೆ. ಬಂಧಿತರಿಂದ ರೂ.5 ಲಕ್ಷ ನಗದು, ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ರಾಜಸ್ಥಾನದಲ್ಲಿ ಇತರ ವ್ಯಕ್ತಿಗಳಿಂದ ಹಣ ಪಡೆದು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಜೀವನಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಟಿಕೆಟ್ ಮಾರಾಟದಲ್ಲಿ ಎಂಟು ಮಂದಿ ಬಂಧನ:
ಇಂದು ನಡೆಯುತ್ತಿರುವ ಆರ್ಸಿಬಿ ವಿರುದ್ಧದ ದೆಹಲಿ ತಂಡದ ಐಪಿಎಲ್ ಪಂದ್ಯಾವಳಿಯ ಹಿನ್ನಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಬ್ಲಾಕ್ ಟಿಕೆಟ್ ಮಾರಾಟ ಮಾಡುತ್ತಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ಅಕ್ಷಯ್ ಮಚಿಂದ್ರ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಬಂಧಿತರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿದೆ ಹಾಗೂ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಬಂಧಿತರಿಂದ ವಿಚಾರಣೆ ಮುಂದುವರಿದಿದ್ದು, ಬ್ಲಾಕ್ ಟಿಕೆಟ್ ಬೆನ್ನಿಗಿರುವ ಪ್ರಬಂಧಕರ ಕುರಿತು ತನಿಖೆ ಮುಂದುವರೆದಿದೆ.