ಬೆಂಗಳೂರು: ಕರ್ನಾಟಕದ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಐಜಿಪಿ) ಓಂಪ್ರಕಾಶ್ ಅವರ ಬರ್ಬರ ಕೊಲೆ ಪ್ರಕರಣದ ತನಿಖೆಯಲ್ಲಿ ಹೊಸ ತಿರುವುಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದ ಈ ಘಟನೆಯಲ್ಲಿ ಓಂಪ್ರಕಾಶ್ ಅವರ ಪತ್ನಿ ಪಲ್ಲವಿ ಮತ್ತು ಮಗಳು ಕೃತಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ತನಿಖೆಯಲ್ಲಿ ಪಲ್ಲವಿಯಿಂದ ಕೊಲೆಗೆ ಸಂಬಂಧಿಸಿದ ಗೂಗಲ್ ಸರ್ಚ್ಗಳು ಮತ್ತು ಕೃತಿಯ ಆತ್ಮಹತ್ಯೆ ಯತ್ನದ ಸ್ಫೋಟಕ ವಿವರಗಳು ಬಯಲಾಗಿವೆ.
ಕೊಲೆಗೂ ಮುನ್ನ ಪಲ್ಲವಿಯಿಂದ ಗೂಗಲ್ನಲ್ಲಿ ಸರ್ಚ್
ತನಿಖೆ ವೇಳೆ ಪೊಲೀಸರು ಪಲ್ಲವಿಯ ಫೋನ್ನ ಡೇಟಾವನ್ನು ಪರಿಶೀಲಿಸಿದಾಗ ಆಘಾತಕಾರಿ ಮಾಹಿತಿ ಲಭಿಸಿದೆ. ಕೊಲೆಗೂ ಮುನ್ನ ಕಳೆದ ಐದು ದಿನಗಳಿಂದ ಪಲ್ಲವಿ, “ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿದರೆ ಯಾವ ರೀತಿ ಸಾಯುತ್ತಾರೆ?”, “ಚಾಕುವಿನಿಂದ ಕೊಲೆ ಮಾಡುವುದು ಹೇಗೆ?”, “ಚಾಕುವಿನಿಂದ ಕುತ್ತಿಗೆ ಸೀಳುವುದು ಹೇಗೆ?” ಎಂಬಂತಹ ಪ್ರಶ್ನೆಗಳನ್ನು ಗೂಗಲ್ನಲ್ಲಿ ಸರ್ಚ್ ಮಾಡಿದ್ದಾರೆ. ಈ ಸರ್ಚ್ಗಳು ಕೊಲೆಗೆ ಪೂರ್ವಯೋಜಿತ ತಯಾರಿಯನ್ನು ಸೂಚಿಸುತ್ತವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಲ್ಲವಿ ತನ್ನ ಹೇಳಿಕೆಯಲ್ಲಿ ಈ ಸರ್ಚ್ಗಳ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಓಂಪ್ರಕಾಶ್ ಅವರನ್ನು ಚಾಕುವಿನಿಂದ ಎದೆ, ಹೊಟ್ಟೆ ಮತ್ತು ಕೈ ಭಾಗಕ್ಕೆ 8-10 ಬಾರಿ ಇರಿದು ಕೊಲೆ ಮಾಡಲಾಗಿದೆ. ಕೊಲೆಯ ನಂತರ ಪಲ್ಲವಿಯೇ ಪೊಲೀಸರಿಗೆ ಕರೆ ಮಾಡಿ, “ನಾನು ರಾಕ್ಷಸನನ್ನು ಮುಗಿಸಿದ್ದೇನೆ” ಎಂದು ಮತ್ತೊಬ್ಬ ಡಿಜಿಪಿಯ ಪತ್ನಿಗೆ ವಿಡಿಯೋ ಕಾಲ್ ಮೂಲಕ ತಿಳಿಸಿದ್ದಾರೆ.
ಕೃತಿಯಿಂದ ಆತ್ಮಹತ್ಯೆ ಯತ್ನ
ಕೊಲೆಯ ನಂತರ ಕೃತಿ, ಮನೆಯ ಮೇಲಿನ ಕೋಣೆಯಲ್ಲಿ ಬಾಗಿಲು ಲಾಕ್ ಮಾಡಿಕೊಂಡು ಒಳಗಿದ್ದಳು. ಪೊಲೀಸರು ಎಷ್ಟೇ ಕೂಗಿದರೂ ಹೊರಬರಲು ನಿರಾಕರಿಸಿದ ಕೃತಿ, ಎರಡನೇ ಮಹಡಿಯಿಂದ ಕೆಳಗೆ ಜಿಗಿಯಲು ಯತ್ನಿಸಿದ್ದಾಳೆ. ಎಚ್ಎಸ್ಆರ್ ಲೇಔಟ್ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡ ಕೂಡಲೇ ಬಾಗಿಲು ಮುರಿದು ಒಳಗೆ ಪ್ರವೇಶಿಸಿ, ಮಹಿಳಾ ಸಿಬ್ಬಂದಿಯ ಸಹಾಯದಿಂದ ಕೃತಿಯನ್ನು ರಕ್ಷಿಸಿತು.
ಕೃತಿಯನ್ನು ಪೊಲೀಸರು ಅರೆಸ್ಟ್ ಮಾಡಿಲ್ಲ ಅಥವಾ ಕೋರ್ಟ್ಗೆ ಹಾಜರುಪಡಿಸಿಲ್ಲ. ಬದಲಿಗೆ, ಆಕೆಯ ಮಾನಸಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಲಾಗಿದೆ. ತನಿಖೆಗೆ ಸಹಕರಿಸದ ಕೃತಿ, ಪೊಲೀಸರಿಗೆ ವಿರೋಧ ವ್ಯಕ್ತಪಡಿಸಿದ್ದಾಳೆ ಮತ್ತು ಹತ್ತಿರ ಹೋದವರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದಾಳೆ. ಓಂಪ್ರಕಾಶ್ ಕೊಲೆಯಿಂದ ಮಾನಸಿಕವಾಗಿ ಕುಗ್ಗಿರುವ ಕೃತಿ, ಮಾನಸಿಕ ಖಾಯಿಲೆಯಿಂದ ಬಳಲುತ್ತಿರುವ ಶಂಕೆಯಿದೆ. ಮನೆಗೆ ಕಳುಹಿಸಿದರೆ ಮತ್ತೊಂದು ಅನಾಹುತ ಸಂಭವಿಸುವ ಸಾಧ್ಯತೆ ಇದ್ದ ಕಾರಣ, ಪೊಲೀಸರು ಆಕೆಯನ್ನು ಸಾಂತ್ವಾನ ಕೇಂದ್ರಕ್ಕೆ ಒಪ್ಪಿಸಿದ್ದಾರೆ.
ಕೊಲೆಯ ಹಿನ್ನೆಲೆ
ಓಂಪ್ರಕಾಶ್ ಮತ್ತು ಪಲ್ಲವಿ ನಡುವೆ ಆಸ್ತಿ ವಿವಾದದಿಂದಾಗಿ ಕೆಲವು ತಿಂಗಳುಗಳಿಂದ ಗಂಭೀರ ಕಲಹ ನಡೆಯುತ್ತಿತ್ತು. ಓಂಪ್ರಕಾಶ್ ತಮ್ಮ ಆಸ್ತಿಯನ್ನು ತಂಗಿಯರ ಹೆಸರಿಗೆ ವರ್ಗಾಯಿಸಿದ್ದು, ಪಲ್ಲವಿಯ ಕೋಪಕ್ಕೆ ಕಾರಣವಾಗಿತ್ತು. ಇದಲ್ಲದೇ, ಪಲ್ಲವಿ ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ ಖಿನ್ನತೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಕೊಲೆಗೂ ಮುನ್ನ ಓಂಪ್ರಕಾಶ್ ತನ್ನ ಗನ್ನಿಂದ ಪಲ್ಲವಿ ಮತ್ತು ಕೃತಿಗೆ ಬೆದರಿಕೆ ಹಾಕಿದ್ದ ಆರೋಪವೂ ಇದೆ.
ಪೊಲೀಸ್ ತನಿಖೆ
ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿದೆ. ಕೊಲೆಯ ಸ್ಥಳದಲ್ಲಿ ಕಾರದ ಪುಡಿ ಚೆಲ್ಲಾಪಿಲ್ಲಿಯಾಗಿದ್ದು, ಎರಡು ಚಾಕುಗಳು ಮತ್ತು ಒಂದು ಬಾಟಲ್ ಪತ್ತೆಯಾಗಿವೆ. ಪಲ್ಲವಿಯಿಂದ ಬಳಸಲಾದ ಚಾಕುವನ್ನು ಬೆಡ್ಶೀಟ್ನಲ್ಲಿ ಸುತ್ತಿಟ್ಟಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಗೃಹ ಸಚಿವರು ಈ ಪ್ರಕರಣದಲ್ಲಿ ಸಂಪೂರ್ಣ ತನಿಖೆಯ ಭರವಸೆ ನೀಡಿದ್ದಾರೆ.
ಈ ಘಟನೆಯಿಂದ ಬೆಂಗಳೂರು ನಗರವೇ ಆಘಾತಕ್ಕೆ ಒಳಗಾಗಿದ್ದು, ಹಿರಿಯ ಐಪಿಎಸ್ ಅಧಿಕಾರಿಯ ಕೊಲೆಯ ಹಿಂದಿನ ಸತ್ಯ ತನಿಖೆಯಿಂದ ಬಯಲಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.