ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂಬ ತನ್ನ ಆರೋಪವನ್ನು ಪುನರುಚ್ಚರಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, “ಮುಖ್ಯಮಂತ್ರಿ ಸಿದ್ದರಾಮಯ್ಯನ ಆಪ್ತ ಸಂಬಂಧಿಕನೊಬ್ಬರು 15 ಸೈಟ್ಗಳ ಡಿ-ನೋಟಿಫಿಕೇಶನ್ಗಾಗಿ ಅರ್ಜಿ ಸಲ್ಲಿಸಿದ್ದರು,” ಎಂದು ಹೇಳಿದ್ದಾರೆ. ಆ ಅರ್ಜಿಯಲ್ಲಿ ಸಹಿಯನ್ನು ನಕಲು ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಅವರು ಮಾಡಿದ್ದಾರೆ.
ಸಿದ್ದರಾಮಯ್ಯನವರು ತಮ್ಮನ್ನು ನಿಷ್ಠಾವಂತರಾದ ಹರ್ಷಚಂದ್ರನಂತೆ ಚಿತ್ರಿಸಿಕೊಂಡು, ‘ಸತ್ಯಮೇವ ಜಯತೆ’ ಎಂಬ ಘೋಷಣೆಯ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ ಎಂದು ಟೀಕಿಸಿದ ಕುಮಾರಸ್ವಾಮಿ, “ಲೋಕಾಯುಕ್ತ ವರದಿಯಲ್ಲಿ ಅವರ ನಿಜಮುಖವಿದೆ. ಯಾರು ಆಸಕ್ತರಾಗಿದ್ದಾರೋ, ಈ ಮಹಾಕಾವ್ಯವನ್ನು ಓದಿ ಸತ್ಯವನ್ನು ತಿಳಿಯಬಹುದು,” ಎಂದು ವ್ಯಂಗ್ಯವಾಡಿದರು.
“ಅದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಬಚ್ಚೇಗೌಡ ನಗರಾಭಿವೃದ್ಧಿ ಸಚಿವರಾಗಿದ್ದರು. ಸಿದ್ದರಾಮಯ್ಯನವರ ಸಂಬಂಧಿಕರು ಬಚ್ಚೇಗೌಡ ಅವರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಸಂಬಂಧಿಕನೇ ಸಹಿಯನ್ನು ನಕಲು ಮಾಡಿದವರಾಗಿದ್ದಾರೆ ಎಂಬುದಾಗಿ ಲೋಕಾಯುಕ್ತ ವರದಿ ತಿಳಿಸುತ್ತದೆ,” ಎಂದರು.
ಅಷ್ಟೇ ಅಲ್ಲದೆ, “ಅರ್ಜಿಯಲ್ಲಿ ‘DCM’ ಎಂಬ ಪದವನ್ನು ಇಂಗ್ಲಿಷ್ನಲ್ಲಿ ಬಳಸಲಾಗಿದೆ. ಈ ಕುರಿತ ಎಫ್ಎಸ್ಎಲ್ (ಫಾರೆನ್ಸಿಕ್) ವರದಿಯೂ ಲೋಕಾಯುಕ್ತ ವರದಿಯಲ್ಲಿ ಇದೆ,” ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ವರದಿಯನ್ನು ಪ್ರಸ್ತುತಪಡಿಸಿದ ಅವರು, ತಮ್ಮ ಆರೋಪಗಳಿಗೆ ಸಾಕ್ಷ್ಯವಿದೆ ಎಂದು ನುಡಿದರು.
“ಜನರನ್ನು ನಂಬಿಸುವ ನಾಟಕ ಮಾಡುತ್ತಿರುವ ಸಿಎಂನವರ ನಿಜ ಮುಖ ಲೋಕಾಯುಕ್ತ ವರದಿಯಲ್ಲಿ ಪತ್ತೆಯಾಗಿದ್ದು, ಈ ಹಗರಣದಿಂದ ತಪ್ಪಿಸಿಕೊಳ್ಳಲು ಅವರು ತೆಗೆದುಕೊಳ್ಳಲಿರುವ ದಾರಿ ನನಗೆ ಚೆನ್ನಾಗಿ ತಿಳಿದಿದೆ,” ಎಂದು ಕುಮಾರಸ್ವಾಮಿ ಕಿಡಿಕಾರಿದರು.
Discover more from amiroNEWS
Subscribe to get the latest posts sent to your email.