“ಎರಡು-ಮೂರು ದಿನಗಳಲ್ಲಿ ಅಂತಿಮ ತೀರ್ಮಾನ”
ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಘೋಷಿಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,
“ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಈ ಕುರಿತು ಮನವಿ ಮಾಡಿದ್ದೇನೆ. ಶೀಘ್ರದಲ್ಲೇ ಸಭೆ ಕರೆಯುವ ಭರವಸೆ ನೀಡಿದ್ದಾರೆ. ನಮ್ಮ ಸರ್ಕಾರ ರೈತರ ಹಿತವನ್ನು ಕಾಯ್ದುಕೊಂಡೇ ಯೋಜನೆ ಸಾಕಾರಗೊಳಿಸಲು ಮುಂದಾಗಿದೆ. ಇನ್ನೆರಡು-ಮೂರು ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.
ಭೂಸ್ವಾಧೀನ – ಪರಿಹಾರದ ಗೊಂದಲ
ಭೂಸ್ವಾಧೀನ, ಪುನರ್ವಸತಿ ಮತ್ತು ಭೂಪರಿಹಾರದ ವಿಷಯದಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದಿರುವುದನ್ನು ಸ್ಮರಿಸಿದ ಶಿವಕುಮಾರ್,
“ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಪ್ರತಿ ಎಕರೆ ನೀರಾವರಿ ಜಮೀನಿಗೆ ₹24 ಲಕ್ಷ, ಒಣಭೂಮಿಗೆ ₹20 ಲಕ್ಷ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದ್ದರು. ಆದರೆ ರೈತರು ಇದನ್ನು ತಿರಸ್ಕರಿಸಿ ಧರಣಿಗೆ ಕುಳಿತಿದ್ದರು. ಈ ಕುರಿತು ನಾವು ಬೆಳಗಾವಿಯಲ್ಲಿಯೂ ಸಭೆ ನಡೆಸಿದ್ದೆವು” ಎಂದರು.
ಅವರು ಮುಂದುವರಿದು,
“ಪರಿಹಾರ ಮೊತ್ತದ ವಿಚಾರವಾಗಿ ನ್ಯಾಯಾಲಯ ಹೆಚ್ಚು ಮೊತ್ತ ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ ಸರ್ಕಾರಕ್ಕೆ ಅದನ್ನು ಪೂರೈಸುವುದು ಅಸಾಧ್ಯ. ಈ ಕುರಿತು ಸಂಪುಟಸಭೆಯಲ್ಲೂ ಚರ್ಚಿಸಲಾಗಿದೆ. ರೈತರು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು, ಶಾಸಕರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ವಿಜಯಪುರ ಭಾಗದ ರೈತರು ನ್ಯಾಯಸಮ್ಮತ ಪರಿಹಾರ ನೀಡಿದರೆ ಒಪ್ಪುತ್ತೇವೆ ಎಂದು ಹೇಳಿದ್ದಾರೆ” ಎಂದರು.
ಮುಂದಿನ ಹಂತ
“ಈ ವಿಷಯವನ್ನು ನಾಳೆ ನಡೆಯುವ ಸಂಪುಟ ಸಭೆಯಲ್ಲಿಯೂ ಚರ್ಚಿಸಲಾಗುವುದು. ಕಳೆದ ವಾರ ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ ಅವರೊಂದಿಗೆ ಸಭೆ ನಡೆಸಿದ್ದೇವೆ” ಎಂದು ಡಿಸಿಎಂ ಮಾಹಿತಿ ನೀಡಿದರು.
ಧಾರ್ಮಿಕ ಸಮಾರಂಭ ಕುರಿತು ಸ್ಪಷ್ಟನೆ
ಅರಮನೆ ಮೈದಾನದಲ್ಲಿ ನಡೆಯಲಿರುವ ಈದ್ ಮಿಲಾದ್ ಸಮಾರಂಭದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,
“ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಅನೇಕ ಧಾರ್ಮಿಕ ಸಭೆಗಳು ದೇಶದ ಹಿತಕ್ಕಾಗಿ ನಡೆಯುತ್ತವೆ. ಇಂತಹ ಕಾರ್ಯಗಳಲ್ಲಿ ಸರ್ಕಾರ ತಲೆ ಹಾಕುವುದಿಲ್ಲ. ಹಿಂದೆ ಅಂತರರಾಷ್ಟ್ರೀಯ ಮಟ್ಟದ ಧರ್ಮ ಪ್ರಚಾರಕರು ಬೆಂಗಳೂರಿಗೆ ಬಂದು ಭಾಷಣ ಮಾಡಿದ ಉದಾಹರಣೆಗಳಿವೆ” ಎಂದರು.