ನವದೆಹಲಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅನುದಾನ ಒದಗಿಸಬೇಕೆಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪತ್ತಿನ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ದೆಹಲಿ ಭೇಟಿ ಸಂದರ್ಭದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿಸಿಎಂ, ತುಂಗಭದ್ರಾ ಎಡದಂಡೆ ಕಾಲುವೆ, ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ, ಮಲಪ್ರಭಾ ಕಾಲುವೆ ವಿಸ್ತರಣೆ ಮತ್ತು ಸೋಂತಿ ಏತ ನೀರಾವರಿ ಯೋಜನೆಗಳಿಗೆ ತುರ್ತು ಅನುಮತಿ ಹಾಗೂ ಅನುದಾನ ಅಗತ್ಯವಿದೆ ಎಂದು ತಿಳಿಸಿದರು. ಈ ವೇಳೆ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ, ಸಣ್ಣ ನೀರಾವರಿ ಸಚಿವ ಬೋಸರಾಜ್, ದೆಹಲಿಯ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಲಸಂಪತ್ತು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಮುಖ ಯೋಜನೆಗಳ ಬಗ್ಗೆ ಮನವಿ
1. ತುಂಗಭದ್ರಾ ಎಡದಂಡೆ ಕಾಲುವೆ ವಿಸ್ತರಣೆ (TLBC)
226 ಕಿ.ಮೀ ಉದ್ದದ ಈ ಕಾಲುವೆಯ ವಿಸ್ತರಣೆ ಮತ್ತು ಆಧುನೀಕರಣದಿಂದ ಉತ್ತರ ಕರ್ನಾಟಕದ 2,44,103 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಲಭ್ಯವಾಗಲಿದೆ. ಈ ಯೋಜನೆಗೆ ₹1,444.42 ಕೋಟಿ ಅನುದಾನ ಅಗತ್ಯವಿದ್ದು, ಅದನ್ನು ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ (PMKSY-AIBP) ಅಡಿಯಲ್ಲಿ ಒದಗಿಸಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
2. ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ
ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ (0.00-199.09 ಕಿ.ಮೀ.) ಮತ್ತು ಚಿಕ್ಕೋಡಿ ಭಾಗದ ಕಾಲುವೆ (30.00-88.25 ಕಿ.ಮೀ.) ನವೀಕರಣಕ್ಕೆ ₹1,596.98 ಕೋಟಿ ಅನುದಾನ ಅಗತ್ಯವಿದೆ. ಈ ಯೋಜನೆಗೆ ಡಿಪಿಆರ್ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಹಾಗೂ ಅನುದಾನ ಒದಗಿಸಬೇಕೆಂದು ಮನವಿ ಮಾಡಲಾಗಿದೆ.
3. ಮಲಪ್ರಭಾ ಕಾಲುವೆ ಪ್ರವಾಹ ನಿರ್ವಹಣೆ ಯೋಜನೆ
ಬೆಣ್ಣಿಹಳ್ಳದಿಂದ ಮಲಪ್ರಭಾ ಸಂಗಮದವರೆಗೆ ಪ್ರವಾಹ ನಿಯಂತ್ರಣ ಕಾರ್ಯಗಳಿಗೆ Flood Management and Border Area Programme (FMBAP) ಅಡಿಯಲ್ಲಿ ₹1,610 ಕೋಟಿ ಅನುದಾನ ಅಗತ್ಯವಿದೆ. ಎಪ್ರಿಲ್-ಮೇ ತಿಂಗಳಲ್ಲಿ ಈ ಭಾಗದಲ್ಲಿ ಆಗುವ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಹೀಗಾಗಿ ಈ ಯೋಜನೆಯನ್ನು ತುರ್ತಾಗಿ ಅನುಮೋದಿಸಬೇಕು ಎಂದು ರಾಜ್ಯ ಸರ್ಕಾರ ಒತ್ತಾಯಿಸಿದೆ.
4. ಸೋಂತಿ ಏತ ನೀರಾವರಿ ಯೋಜನೆ
ಸೋಂತಿ ಬ್ಯಾರೇಜ್ನಿಂದ ಚಿತ್ತಾಪುರ ಮತ್ತು ಯಾದಗಿರಿ ತಾಲೂಕಿನ 16,000 ಹೆಕ್ಟೇರ್ ಕೃಷಿ ಭೂಮಿಗೆ 4 ಟಿಎಂಸಿ ನೀರು ಒದಗಿಸುವ ಈ ಯೋಜನೆಗೆ ₹804.66 ಕೋಟಿ ಅನುದಾನ ಅಗತ್ಯವಿದೆ. 2015ರಲ್ಲಿ ತಾಂತ್ರಿಕ ಅನುಮೋದನೆ ಪಡೆದ ಈ ಯೋಜನೆಗೆ ಈಗ ಹೆಚ್ಚಿದ ವೆಚ್ಚವನ್ನು ಪಿಎಂಕೆಎಸ್ ವೈ-ಎಐಬಿಪಿ ಅಡಿಯಲ್ಲಿ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
5. ಕೃಷ್ಣಾ ಮೇಲ್ದಂಡೆ ಇಂಡಿ ಕಾಲುವೆ ಯೋಜನೆ
172 ಕಿ.ಮೀ ಉದ್ದದ ಇಂಡಿ ಕಾಲುವೆ ಕಲಬುರ್ಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ 1.31 ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲಿದೆ. 64.00-172.00 ಕಿ.ಮೀ ವಿಸ್ತರಣೆಗೆ ₹2,666.70 ಕೋಟಿ ಅನುದಾನ ಅಗತ್ಯವಿದ್ದು, ಈ ಯೋಜನೆಗೆ ಕೇಂದ್ರ ಸರ್ಕಾರ ಶೀಘ್ರ ಅನುಮೋದನೆ ನೀಡಬೇಕು ಎಂದು ಕೋರಲಾಗಿದೆ.
6. ಮಲಪ್ರಭಾ ಕಾಲುವೆ ಮೂರನೇ ಹಂತದ ವಿಸ್ತರಣೆ
ಕಾಲುವೆಗಳ ವಿಸ್ತರಣೆ, ನವೀಕರಣ ಮತ್ತು ಆಧುನೀಕರಣಕ್ಕೆ ₹3,000 ಕೋಟಿ ಅನುದಾನ ಅಗತ್ಯವಿದ್ದು, ಈ ಯೋಜನೆಯ ಡಿಪಿಆರ್ ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಲಾಗಿದೆ. ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸಲು ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈ ಎಲ್ಲಾ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮತ್ತು ಕೇಂದ್ರದಿಂದ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಸಚಿವ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.
Discover more from amiroNEWS
Subscribe to get the latest posts sent to your email.