ಜೋಕರ್’ಗಳಿಗೆಲ್ಲ ಉತ್ತರ ಕೊಡಲ್ಲ; ಕೃಷಿ ಸಚಿವರಿಗೆ ಟಾಂಗ್ ಕೊಟ್ಟ ಕೇಂದ್ರ ಸಚಿವರು
ನಾನು ಬಂದೂಕು, ಗನ್ ಸಂಸ್ಕೃತಿಯಿಂದ ಬಂದವನಲ್ಲ; ರಾಜ್ಯ ಗೃಹ ಸಚಿವರಿಗೆ ಕುಟುಕಿದ ಕೇಂದ್ರ ಸಚಿವರು
ಕಾಂಗ್ರೆಸ್ ದ್ವೇಷದ ರಾಜಕಾರಣಕ್ಕೆ ನಾನೇ ಟಾರ್ಗೆಟ್ ಎಂದ HDK
ಹನಿಟ್ರ್ಯಾಪ್ ಎಪಿಸೋಡನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು
ಮಂಡ್ಯ: ನಾನು ಜೋಕರ್ ಗಳಿಗೆಲ್ಲಾ ಉತ್ತರ ಕೊಡಲ್ಲ. ವಿಷಯವೇ ಗೊತ್ತಿಲ್ಲದವರ ಬಗ್ಗೆ ಮಾತನಾಡಿ ಅರ್ಥವಿಲ್ಲ ಎಂದು ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿಗೆ ತಿರುಗೇಟು ಕೊಟ್ಟರು.
ಮಂಡ್ಯದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಆ ವ್ಯಕ್ತಿ ಒಬ್ಬ ಜೋಕರ್. ಐಐಟಿ ಅಂದರೆ ಏನು ಎಂದು ಅವರಿಗೆ ಗೊತ್ತಾ? ಇಂತಹ ಜೋಕರ್ ಗಳಿಗೆ ನಾನು ಉತ್ತರ ಕೊಡಲ್ಲ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಐಐಟಿ ತಪ್ಪಿದ್ದು ದೇವೇಗೌಡರಿಂದ ಎಂದು ಅವರು ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ ಕೆಂಡಾಮಂಡಲರಾದ ಸಚಿವರು; ಅವರಿಗೆ ಮೊದಲು ವಿಷಯ ತಿಳಿದುಕೊಂಡು ಮಾತನಾಡಲು ಹೇಳಿ. ರಾಜ್ಯದಲ್ಲಿ ಈಗ ಐಐಟಿ ಇಲ್ಲಿದೆ, ಯಾವ ಊರಿನಲ್ಲಿದೆ ಎಂದು ತಿಳಿದುಕೊಂಡು ಮಾತನಾಡಲು ಹೇಳಿ ಎಂದು ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.
ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಬಗ್ಗೆ ಆಕ್ಷೇಪ ಯಾಕೆ? ನಾನು ಈ ಕ್ಷೇತ್ರದ ಸಂಸದ. ನನ್ನದೂ ಸ್ವಾಗತವಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ರಾಜಕೀಯ ಜಾಡ್ಯಕ್ಕೆ ನಾನೇನು ಮಾಡಲಿ. ಕೃಷಿ ವಿವಿ ಇರಲಿ, ಮೊದಲು ವಿಸಿ ಫಾರಂ ಏನಾಗಿದೆ ಅಂತ ನೋಡಲಿ. ಕೃಷಿ ಸಚಿವರು ಅಲ್ಲವೇ? ಕೃಷಿ ಫಾರಂ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಅಲ್ಲಿ ಏನೇನು ಆಗುತ್ತಿದೆ? ಸಿಬ್ಬಂದಿ ಕಥೆ ಏನು? ಇದೆಲ್ಲಾ ಗೊತ್ತಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.
ಇಂತವರ ಸಹವಾಸದಿಂದ ನನ್ನ ಅರೋಗ್ಯ ಹಾಳಾಯಿತು
ಮಂಡ್ಯಕ್ಕೆ ಮೆಡಿಕಲ್ ಕಾಲೇಜ್, ಕೆಎಸ್ಆರ್ಟಿಸಿ ವಿಭಾಗ ತಂದೆ ಎಂಬ ಕೃಷಿ ಸಚಿವರು ಹೇಳಿದ್ದಾರೆ. 2004ರಲ್ಲಿ ಚಲುವರಾಯಸ್ವಾಮಿ ಆರು ತಿಂಗಳು ಮಂತ್ರಿ ಆಗಿರಲಿಲ್ಲ. ಆಗ ರಾತ್ರಿ ಮೂರು ಗಂಟೆಯಾದರೂ ನನ್ನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಬಳಿಕ ಮಂತ್ರಿಯಾದರಲ್ಲ, ಯಾರಿಂದ ಮಂತ್ರಿಯಾದರು ಎಂದು ನೆನಪು ಮಾಡಿಕೊಳ್ಳಲಿ ಎಂದರು ಕುಮಾರಸ್ವಾಮಿ ಅವರು.
ಪಾಪ ನನ್ನ ಮುಖ್ಯಮಂತ್ರಿ ಮಾಡಿದವರು ಅವರಲ್ಲವೇ!? ಮಂತ್ರಿ ಆಗುವಾಗ ಏನೇನೂ ಆಯಿತು ನೆನಸ್ಕೊಳ್ಳಪ್ಪ. ನಾನು ಇಂತಹ ಆರೋಗ್ಯ ನಿಮ್ಮ ರೀತಿಯ ಜನರ ಸಹವಾಸ ಮಾಡಿ ಎಂದು ಅವರು ಹೇಳಿದರು.
ನಾನು ಸರ್ವ ಜನಾಂಗದ ಶಾಂತಿಯ ತೋಟದ ಸಂಸ್ಕೃತಿಯಿಂದ ಬಂದವನು: ಪರಮೇಶ್ವರ್ ಗೆ ತರಾಟೆ
ನಾನು ಸರ್ಕಾರದ ವಿರುದ್ಧ ಸಮರ ಸಾರಿದ್ದೇನೆ. ದಾಖಲೆಗಳ ಮೂಲಕ ಈ ಸರ್ಕಾರ ಭ್ರಷ್ಟ ಹಗರಣಗಳನ್ನು ಬಯಲಿಗೆ ತೆಗೆಯುತ್ತೇನೆ ಎಂದು ಹೇಳಿದ್ದೇನೆ. ನನ್ನದು ದಾಖಲೆ ಇಟ್ಟು ಮಾತನಾಂದ್ಯವ ಸಂಸ್ಕೃತಿ. ಗನ್, ಬಂದೂಕು ಸಂಸ್ಕೃತಿ ಅಲ್ಲ ಎಂದು ಕೇಂದ್ರ ಸಚಿವರು ಪರಮೇಶ್ವರ್ ಗೆ ತಿರುಗೇಟು ಕೊಟ್ಟರು.
ಕರ್ನಾಟಕ ರಾಜ್ಯ ಸಿಡಿ , ಪೆನ್ ಡ್ರೈವ್ ತಯಾರಿಸುವ ಫ್ಯಾಕ್ಟರಿ ಎಂದು ಅವರ ಸಹೋದ್ಯೋಗಿ ಮಂತ್ರಿ ಸದನದಲಿಯೇ ಹೇಳಿದಾರೆ. ನನ್ನ ಬಳಿ ಎಲ್ಲಾ ದಾಖಲೆಗಳು ಇವೆ. ನನ್ನನ್ನು ಅಷ್ಟೇ ನಂಜವತ್ತರಿಂದ ಐವತ್ತು ಜನರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಾಕ್ಷಾತ್ ಸದನದಲ್ಲಿಯೇ ಹೇಳಿದಾರೆ. ಅದು ಕಲಾಪದ ದಾಖಲೆಗಳಲ್ಲಿ ಇದೆ. ನೀವು ಯಾವ ತನಿಖೆ ಮಾಡಿಸಿದಿರಿ ಪರಮೇಶ್ವರ್ ಅವರೇ? ಎಲ್ಲವನ್ನೂ ಹಳ್ಳ ಹಿಡಿಸಿದ್ದಿರಿ. ಆ ನೀಚ ಕೆಲಸ ಮಾಡುವವರು, ಮಾಡಿದವರು ಯಾರು ಎಂದು ನಿಮಗೆ ಗೊತ್ತಿದೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವರು ಒಬ್ಬರ ಮನೆ ಮೇಲೆ ರೈಡ್ ಮಾಡಿಸಿದರು? ಆಗ aa ಮನೆಯಲ್ಲಿ ಏನೇನು ಸಿಕ್ಕಿತು? ಅಲ್ಲಿ ಸಿಕ್ಕಿದ್ದೆಲ್ಲವನ್ನೂ ಇಟ್ಟುಕೊಂಡು ಏನೆಲ್ಲಾ ಮಾಡಿದ್ದೀರಿ? ನನಗೆ ಮಾಹಿತಿ ಇಲ್ಲ ಎಂದುಕೊಂಡಿದ್ದೀರಾ? ಇಂತವರು ನನ್ನ ಬಗ್ಗೆ ಲಘುವಾಗಿ ಮಾತನಾಡ್ತಾರೆ. ನನ್ನ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಐದು ವರ್ಷ ಸರ್ಕಾರ ಕೊಡಿ; ಲೂಟಿಕೋರರಿಂದ ಬಡ್ಡಿ ಸಮೇತ ವಸೂಲಿ ಮಾಡಿ ಖಜಾನೆಗೆ ಭರ್ತಿ ಮಾಡುತ್ತೇನೆ
ನಾನು ಮಾಜಿ ಸಿಎಂ, ಮಾಜಿ ಪ್ರಧಾನಿಯ ಮಗ. 4 ಎಕರೆ ಜಮೀನು ಒತ್ತುವರಿ ಮಾಡ್ಬೇಕಾ? ಯಾವ ತನಿಖೆ ಬೇಕಾದರು ಮಾಡಲಿ. ಬೇಕಾದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಕೈಯಲ್ಲೇ ತನಿಖೆ ಮಾಡಿಸಿ, ನಾನು ತಯಾರಿದ್ದೇನೆ. ನನಗೆ ಈ ಪರಿಸ್ಥಿತಿ ತಂದಿದ್ದಿರಿ, ನೀವು ಎಷ್ಟು ಕುಟುಂಬ ಹಾಳು ಮಾಡಿದ್ದಿರಿ ಎನ್ನುವುದು ಗೊತ್ತಿದೆ. ಜನರೇನು ನನಗೆ ಅಷ್ಟು ಬೇಗ ರಾಜಕೀಯ ನಿವೃತ್ತಿ ನೀಡಲ್ಲ. ಜನತೆ ನನಗೆ ಐದು ವರ್ಷದ ಸರ್ಕಾರ ಕೊಟ್ಟರೆ ನೀವು ಲೂಟಿ ಮಾಡಿರುವುದನ್ನು ಬಡ್ಡಿ ಸಮೇತ ವಸೂಲಿ ಮಾಡಿ ಖಜಾನೆಗೆ ಭರ್ತಿ ಮಾಡುತ್ತೇನೆ ಎಂದು ಅವರು ಕಿಡಿಕಾರಿದರು.
ಎಲ್ಲಾ ದಾಖಲೆಗಳನ್ನು ಭದ್ರವಾಗಿ ಇಟ್ಟಿದ್ದೇನೆ
ಕುಮಾರಸ್ವಾಮಿಗೆ ಹೆದರುವ ಮಗ ನಾನಲ್ಲ ಎಂದು ಒಬ್ಬರು ಹೇಳಿಕೆ ನೀಡಿದ್ದಾರೆ. ಆದರೆ, ಹೆದರಿಕೆ ಮಾತಿರಲಿ, ಹೇಗಾದರೂ ಪಾರಾದರೆ ಸಾಕು ಎಂದು ಯಾರು ಯಾರ ಬಾಗಿಲು ಕಾಯುತ್ತಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಎಲ್ಲಾ ದಾಖಲೆಗಳನ್ನು ಭದ್ರವಾಗಿ ಇಟ್ಟಿದ್ದೇನೆ. ಈಗಷ್ಟೇ ಯುದ್ಧ ಆರಂಭ ಮಾಡಿದ್ದೇನೆ. ಎಲ್ಲವನ್ನೂ ಹೊರಗೆ ಇಡುವ ಕಾಲ ಸನಿಹವಾಗಿದೆ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಲ್ಲಿ ಇರುವವರು ಅಧಿಕಾರ ದುರುಪಯೋಗ ಮಾಡುತ್ತಿರುವ ದಾಖಲೆಗಳು ನನ್ನಲ್ಲಿ ಇವೆ. ನನ್ನ ವಿರುದ್ಧ ಯುದ್ದ ಇಡೀ ಸರ್ಕಾರವೇ ಸೇಡು ಸಾಧಿಸುತ್ತಿದೆ. ಒಬ್ಬ ಕುಮಾರಸ್ವಾಮಿಯನ್ನು ಸುಮ್ಮನಾಗಿಸೋಕೆ ಇಷ್ಟೆಲ್ಲಾ ಮಾಡುತ್ತಿದ್ದಾರೆ. ನಾನೇನು ಸುಮ್ಮನೆ ಕೂರುವ ಆಸಾಮಿ ಅಲ್ಲ. ಸರ್ಕಾರದ ಅಕ್ರಮಗಳ ಟನ್ ಗಟ್ಟಲೆ ದಾಖಲೆಗಳು ಎಂದು ಅವರು ತಿಳಿಸಿದರು.
ಗಿಫ್ಟ್ ಡೀಡ್ ಮಾಡಿಸಿಕೊಂಡು ಕೆರೆಯನ್ನೇ ನುಂಗಿದ!
ನಾನು ದಾಖಲೆ ಕೊಟ್ಟರೂ ನ್ಯಾಯ ದೊರಕಲ್ಲ.
ಹೀಗಾಗಿ ದಾಖಲೆಗಳನ್ನು ಭದ್ರವಾಗಿಟ್ಟಿದ್ದೇನೆ. ಕೆರೆಯನ್ನೇ ನುಂಗಿ ಅಣ್ಣನ ಹೆಸರಿಗೆ ರಿಜಿಸ್ಟರ್ ಮಾಡಿಸಿ ಮತ್ತೆ ಗಿಫ್ಟ್ ಡೀಡ್ ಮಾಡಿಸಿಕೊಂಡ ಗಿರಾಕಿಗಳು ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತಿದ್ದಾರೆ. ಅಂತಹವರಿಗೆಲ್ಲ ಅವರದೇ ಭಾಷೆಯಲ್ಲಿ ಉತ್ತರ ಕೊಡುವ ಕಾಲ ಬಂದಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ವಿರುದ್ಧ ಗೌಪ್ಯವಾಗಿ ವಿಚಾರಣೆ ಮಾಡಬೇಕಂತೆ!!?
ನಲವತ್ತು ವರ್ಷಗಳ ಹಿಂದೆ ಭೂಮಿ ಖರೀದಿ ಮಾಡಿ ಅಲ್ಲಿ ನಾನು ಬೇಸಾಯ ಮಾಡುತ್ತಿದ್ದೇನೆ. ಆದರೆ, ಅದರ ಮೇಲೆಯೂ ಇವರ ಕಣ್ಣು ಬಿದ್ದಿದೆ. ದೇಶದ ಇತಿಹಾಸದಲ್ಲಿಯೇ ಐವರ ಸಮಿತಿ ಮಾಡಿದ್ದಾರೆ. ರೆವಿನ್ಯೂ ಇಲಾಖೆಯಲ್ಲಿ ತನಿಖೆಗೆ ಆದೇಶ ಇಲ್ಲ. ಗೌಪ್ಯವಾಗಿ ಅವರ ಹೇಳಿಕೆಯನ್ನು ತೆಗೆದುಕೊಳ್ಳುತ್ತಾರೆ. ಕುಮಾರಸ್ವಾಮಿ ವಿರುದ್ಧ ಗೌಪ್ಯವಾಗಿ ತನಿಖೆ ಮಾಡಿ, ಮಾಹಿತಿದಾರರ ವಿಚಾರಣೆ ಅಧಿಕೃತವಾಗಿ ಮಾಡಬೇಡಿ. ಹೀಗೆಂದು ಆದೇಶ ಕೊಡಲಾಗಿದೆ. ಇದನ್ನೂ ಒಂದು ತನಿಖೆ ಎನ್ನಬೇಕೆ? ಇಷ್ಟು ಬೇಗ ನಮ್ಮ ಜನ ನನ್ನನ್ನು ರಾಜಕೀಯ ನಿವೃತ್ತಿ ಮಾಡಿಸ್ತಾರಾ? ಇವರೆಲ್ಲ ನನಗೆ ಸಿಗೋದಿಲ್ಲವೇ? ಎಂದು ಅವರು ಕಿಡಿ ಕಾರಿದರು.
ಶಾಸಕ ಮಂಜುನಾಥ್, ಮಾಜಿ ಶಾಸಕರಾದ ಸುರೇಶ್ ಗೌಡ, ಡಾ. ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್, ವಿಜಯಾನಂದ ಮುಂತಾದವರು ಉಪಸ್ಥಿತರಿದ್ದರು.
Discover more from amiroNEWS
Subscribe to get the latest posts sent to your email.