ಬೆಂಗಳೂರು: ವಿಶೇಷ ಚೇತನ ಮಕ್ಕಳು ಹುಟ್ಟುವಾಗಲೇ ಮನುಷ್ಯ ಜಗತ್ತಿನ ಸಣ್ಣತನಗಳಿಂದ ಮುಕ್ತರಾದವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು. ಬಾಲಭವನದಲ್ಲಿ ಆಯೋಜಿತವಾದ “ವಿಶೇಷ ಚೇತನ ಮಕ್ಕಳ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಂಸ್ಕೃತಿಕ ಕಲರವ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಕ್ಕಳನ್ನು ಸಮಾಜದ ರೂಢಿಗತ ದೃಷ್ಟಿಕೋನದಿಂದಲೇ ನೋಡದೇ, ಮಾನವೀಯ ಒಳಗಣ್ಣಿನಿಂದ ಗಮನಿಸಬೇಕೆಂದು ಒತ್ತಿ ಹೇಳಿದರು.
“ಈ ಮಕ್ಕಳು ಜೀವನವಿಡೀ ಮಗುವಿನ ಸಹಜ, ನಿಷ್ಕಲ್ಮಷ ಸ್ವಭಾವವನ್ನು ಉಳಿಸಿಕೊಂಡಿರುತ್ತಾರೆ. ಅವರು ಸುಳ್ಳು ಹೇಳುವುದಿಲ್ಲ, ವಂಚಕರಾಗುವುದಿಲ್ಲ, ಕಳ್ಳತನ, ಕೊಲೆಗಾರಿಕೆ, ದುರಾಸೆ, ಜಾತಿವಾದ, ಕೋಮುವಾದದಂತಹ ಕೀಳುಮನೋಭಾವದಿಂದ ದೂರವಿರುತ್ತಾರೆ. ಹೀಗಾಗಿ, ಇವರೆಲ್ಲರೂ ಬುದ್ಧನ ಮಕ್ಕಳಂತೆ, ಸಣ್ಣತನಗಳಿಂದ ಮುಕ್ತರಾಗಿ ಶುದ್ಧ ವ್ಯಕ್ತಿತ್ವದವರಾಗಿದ್ದಾರೆ,” ಎಂದು ಪ್ರಭಾಕರ್ ವಿವರಿಸಿದರು.
ಬುದ್ಧ ತಮ್ಮ ಜೀವನವಿಡೀ ಮನುಷ್ಯ ಜಗತ್ತನ್ನು ಸಣ್ಣತನಗಳಿಂದ ಮುಕ್ತಗೊಳಿಸಲು ಶ್ರಮಿಸಿದ್ದರು. “ಈ ಮಕ್ಕಳ ಬಗ್ಗೆ ಮಾತನಾಡುವುದಕ್ಕಿಂತ, ಪೋಷಕರಿಗೆ ಕೆಲವು ಸಲಹೆಗಳನ್ನು ನೀಡಲು ಬಯಸುತ್ತೇನೆ,” ಎಂದ ಅವರು, “ಮಕ್ಕಳು ತಮ್ಮ ಪಾಡಿಗೆ ಖುಷಿಯಾಗಿದ್ದಾರೆ. ಆದರೆ, ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದರಿಂದ ದುಃಖಪಡುತ್ತಾರೆ. ಈ ಹೋಲಿಕೆಯೇ ಸಂಕಟಕ್ಕೆ ಮೂಲ ಕಾರಣ. ಹೋಲಿಕೆಯನ್ನು ನಿಲ್ಲಿಸಿದರೆ, ದುಃಖಕ್ಕೂ ಅಂತ್ಯವಾಗುತ್ತದೆ,” ಎಂದರು.
ಹೋಲಿಕೆಯಿಂದ ಪೋಷಕರು ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಲ್ಲದೇ, ಮಕ್ಕಳ ಸಂತೋಷದ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳುತ್ತಾರೆ ಎಂದು ಅವರು ಎಚ್ಚರಿಸಿದರು. “ವಿಶೇಷ ಚೇತನ ಮಕ್ಕಳಿಗೆ ವಿಶೇಷ ತರಬೇತಿ ಮತ್ತು ಅರ್ಹ ಶಿಕ್ಷಕರು ಬೇಕಾದರೂ, ಸ್ವಾತಂತ್ರ್ಯ ದಿನಾಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಂತಹ ಆಚರಣೆಗಳನ್ನು ಪ್ರತ್ಯೇಕವಾಗಿ ನಡೆಸುವ ಅಗತ್ಯವಿಲ್ಲ. ಇವರನ್ನು ಉಳಿದ ಮಕ್ಕಳ ಜೊತೆಗೇ ಸೇರಿಸಿಕೊಂಡು ಆಚರಿಸುವುದು ಹೆಚ್ಚು ಅರ್ಥಪೂರ್ಣ,” ಎಂದು ಅವರು ಅಭಿಪ್ರಾಯಪಟ್ಟರು.
“ಆಗಸ್ಟ್ 15ರಂದು ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ ಕವಾಯತಿನಲ್ಲಿ ದೃಷ್ಟಿಹೀನ ಮಕ್ಕಳ ತಂಡವೂ ಉಳಿದ ಮಕ್ಕಳಂತೆ ಯಶಸ್ವಿಯಾಗಿ ಭಾಗವಹಿಸಿತ್ತು. ಒಲಿಂಪಿಕ್ನಂತಹ ಕ್ರೀಡೆಗಳಲ್ಲಿ ದೇಶಕ್ಕೆ ಅತಿ ಹೆಚ್ಚು ಪದಕಗಳನ್ನು ತಂದಿರುವುದು ಭಿನ್ನ ಚೇತನರೇ ಎನ್ನುವುದನ್ನು ಮರೆಯಬಾರದು,” ಎಂದು ಪ್ರಭಾಕರ್ ಒತ್ತಿ ಹೇಳಿದರು.
ಮುಂದಿನ ಜನವರಿ 26 ಮತ್ತು ಆಗಸ್ಟ್ 15ರಂದು ವಿಶೇಷ ಚೇತನ ಮಕ್ಕಳ ತಂಡವೂ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಉಳಿದ ಮಕ್ಕಳ ಜೊತೆಗೆ ಪ್ರದರ್ಶನ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಾಲಭವನ ಅಧ್ಯಕ್ಷ ಬಿ.ಆರ್. ನಾಯ್ಡು, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಟರಾಜ್, 18 not out ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ಬಸವರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 300ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.