ಬೆಂಗಳೂರು: ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮದಿನೋತ್ಸವದ ಸ್ಮರಣಾರ್ಥ ನಡೆಯಲಿರುವ ‘ಸರ್ದಾರ್@150 ಏಕತಾ ಪಾದಯಾತ್ರೆ’ಗೆ ಎಲ್ಲರೂ ಒಗ್ಗೂಡಿ ಭಾಗವಹಿಸಿ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಸುಶ್ರೀ ಶೋಭಾ ಕರಂದ್ಲಾಜೆ ಕರೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯಾತ್ರೆ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿ, ಏಕತೆಯ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ನವೆಂಬರ್ 15ರಂದು ಬೆಳಗ್ಗೆ 9 ಗಂಟೆಗೆ ಮಹಾಲಕ್ಷ್ಮಿ ಲೇಔಟ್ನ ಕುರುಬರ ಹಳ್ಳಿಯಿಂದ ಆರಂಭವಾಗಿ ಶಂಕರಮಠದವರೆಗೆ ನಡೆಯಲಿರುವ ಈ ಏಕತಾ ಪಾದಯಾತ್ರೆಯು ಸ್ವಾತಂತ್ರ್ಯ ಹೋರಾಟಗಾರರ ಕಷ್ಟಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಸ್ವಾತಂತ್ರ್ಯ ಸೇನಾನಿಗಳನ್ನು ನೆನಪಿಸುವ ಪ್ರಯತ್ನವಾಗಿದೆ. “ಇದು ರಾಜಕೀಯ ಯಾತ್ರೆಯಲ್ಲ, ದೇಶದ ಯಾತ್ರೆ, ಜನರ ಯಾತ್ರೆ. ಪ್ರತಿಯೊಬ್ಬರೂ ಭಾಗವಹಿಸಬೇಕು” ಎಂದು ಸಚಿವೆ ಒತ್ತಾಯಿಸಿದರು.
“ಭಾರತ ಒಂದಾಗಿದೆ, ಭಾರತ ಅವಿಭಾಜ್ಯವಾಗಿದೆ” ಎಂಬ ಸರ್ದಾರ್ ಪಟೇಲರ ಅಚಲ ನಂಬಿಕೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ವಿಕಸಿತ ಭಾರತ 2047’ ಮೂಲಕ ಮುಂದುವರಿಸುತ್ತಿದ್ದಾರೆ ಎಂದ ಅವರು, ಈ ಅಭಿಯಾನವನ್ನು ಅಕ್ಟೋಬರ್ 6ರಂದು ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವಿಯಾ ರಾಷ್ಟ್ರಮಟ್ಟದಲ್ಲಿ ಉದ್ಘಾಟಿಸಿದ್ದಾರೆ ಎಂದು ತಿಳಿಸಿದರು. ಯುವಜನರು ಡಿಜಿಟಲ್ ಹಂತದಲ್ಲಿ ರೀಲ್ ಸ್ಪರ್ಧೆಗಳು ಮತ್ತು ಪ್ರಬಂಧ ಬರಹಗಳ ಮೂಲಕ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಎಲ್ಲ ಚಟುವಟಿಕೆಗಳಿಗೆ ‘ಮೈ ಭಾರತ್’ ಪೋರ್ಟಲ್ ಏಕೈಕ ವೇದಿಕೆಯಾಗಿದೆ.

ಅಭಿಯಾನದ ಎರಡನೇ ಹಂತವಾಗಿ ಅಕ್ಟೋಬರ್ 31ರಿಂದ ನವೆಂಬರ್ 25ರವರೆಗೆ ಜಿಲ್ಲಾ ಮಟ್ಟದ ಪಾದಯಾತ್ರೆಗಳು ನಡೆಯಲಿವೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 8-10 ಕಿ.ಮೀ. ದೂರದ ಮೂರು ಯಾತ್ರೆಗಳನ್ನು ಆಯೋಜಿಸಲಾಗುವುದು. ಯಾತ್ರೆಗೂ ಮುನ್ನ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ನಶಾ ಮುಕ್ತ ಭಾರತ ಪ್ರತಿಜ್ಞೆ, ಸ್ವದೇಶಿ ಮೇಳಗಳು, “ತಾಯಿಯ ಹೆಸರಲ್ಲಿ ಒಂದು ಗಿಡ” ಅಭಿಯಾನ ಹಾಗೂ ಸರ್ದಾರ್ ಪಟೇಲರ ಜೀವನದ ಬೀದಿ ನಾಟಕಗಳು ಮಾಲ್ಗಳು, ಉದ್ಯಾನವನಗಳು ಮತ್ತು ಆಹಾರ ಕೇಂದ್ರಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಪ್ರಧಾನಮಂತ್ರಿ ಮೋದಿ ನೇತೃತ್ವದ ಸರ್ಕಾರದ ಕಲ್ಯಾಣ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುವುದು. ಮೈ ಭಾರತ್, ಎನ್ಸಿಎಸ್, ಎನ್ಎಸ್ಎಸ್ ಸ್ವಯಂಸೇವಕರು, ಸಾಮಾಜಿಕ-ಧಾರ್ಮಿಕ ಸಂಘಟನೆಗಳು, ಶಾಲಾ-ಕಾಲೇಜುಗಳು ಇದರಲ್ಲಿ ತೊಡಗಿಕೊಳ್ಳಲಿವೆ. “ಪಟೇಲರು ರಾಜ್ಯಗಳನ್ನು ಒಗ್ಗೂಡಿಸಿದಂತೆ ಈ ಯಾತ್ರೆ ಜನರ ಹೃದಯಗಳನ್ನು ಒಗ್ಗೂಡಿಸಲಿದೆ. ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯನ್ನು ಪ್ರತಿಬಿಂಬಿಸಿ, ಸಂಯುಕ್ತ ಭಾರತವನ್ನು ಆತ್ಮನಿರ್ಭರ ಮತ್ತು ವಿಕಸಿತ ಭಾರತವಾಗಿ ಪರಿವರ್ತಿಸುವುದು ನಮ್ಮ ಕರ್ತವ್ಯ” ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.












