ಬೆಂಗಳೂರು, ಏಪ್ರಿಲ್ 26: ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಎ.ಕೆ. ಮತ್ತು ವಿದ್ಯಾ ನಿರ್ಮಿಸಿರುವ, ಕೆ. ರಾಮನಾರಾಯಣ್ ನಿರ್ದೇಶನದ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಶೀರ್ಷಿಕೆ ಗೀತೆಯನ್ನು ಶತಾಯುಷಿ ಸಾಲುಮರದ ತಿಮ್ಮಕ್ಕ ಅವರು ಡಾ. ರಾಜಕುಮಾರ್ ಅವರ ಜನ್ಮದಿನದಂದು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಚಿತ್ರವು ಮೇ 23, 2025ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಯಿತು.
“ಕಾಮಿಡಿ ಕಿಲಾಡಿಗಳು” ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ಈ ಚಿತ್ರದ ಶೀರ್ಷಿಕೆ ಗೀತೆಯನ್ನು ನಿರ್ದೇಶಕ ರಾಮನಾರಾಯಣ್ ಸ್ವತಃ ರಚಿಸಿದ್ದಾರೆ. ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜನೆಗೊಳಿಸಿದ್ದು, ಚೇತನ್ ಈ ಹಾಡನ್ನು ಹಾಡಿದ್ದಾರೆ. ವಿಶೇಷವಾಗಿ, ಯೋಗರಾಜ್ ಭಟ್ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಎರಡು ಹಾಡುಗಳು ಜನಪ್ರಿಯಗೊಂಡಿವೆ.
ನಿರ್ದೇಶಕ ರಾಮನಾರಾಯಣ್ ಮಾತನಾಡಿ, “ಡಾ. ರಾಜಕುಮಾರ್ರ ‘ಕುಲದಲ್ಲಿ ಕೀಳ್ಯಾವುದೋ’ ಜನಪ್ರಿಯ ಗೀತೆಯ ಸಾಲನ್ನು ಶೀರ್ಷಿಕೆಯಾಗಿಟ್ಟುಕೊಂಡು ಹಾಡು ರಚಿಸುವುದು ಸವಾಲಿನ ಕೆಲಸವಾಗಿತ್ತು. ಯೋಗರಾಜ್ ಭಟ್ ಅವರಿಂದ ಬರೆಯಿಸಲು ಯೋಜಿಸಿದ್ದೆವು, ಆದರೆ ಅವರ ಬಿಡುವಿಲ್ಲದ ಕಾರಣ ನಾನೇ ಈ ಹಾಡನ್ನು ಬರೆದೆ. ಚಿತ್ರತಂಡದ ಸಹಕಾರದಿಂದ ಒಂದು ಗುಣಮಟ್ಟದ ಚಿತ್ರವನ್ನು ಮೇ 23ಕ್ಕೆ ಪ್ರೇಕ್ಷಕರ ಮುಂದಿಡಲಿದ್ದೇವೆ,” ಎಂದರು.
ಯೋಗರಾಜ್ ಭಟ್ ಮಾತನಾಡಿ, “ಡಾ. ರಾಜಕುಮಾರ್ರ ಜನ್ಮದಿನದಂದು ಸಾಲುಮರದ ತಿಮ್ಮಕ್ಕ ಅವರು ಈ ಗೀತೆಯನ್ನು ಬಿಡುಗಡೆ ಮಾಡಿರುವುದು ವಿಶೇಷ. ಈ ಹಾಡಿನಲ್ಲಿ ನಾನು ಅಭಿನಯಿಸಿದ್ದೇನೆ. ಚಿತ್ರವನ್ನು ವೀಕ್ಷಿಸಿದಾಗ ಕಲಾವಿದರ ನಟನೆ, ತಂತ್ರಜ್ಞರ ಕೆಲಸ ಮತ್ತು ರಾಮನಾರಾಯಣ್ ಅವರ ನಿರ್ದೇಶನ ಮೆಚ್ಚುಗೆಗೆ ಪಾತ್ರವಾಯಿತು. ಮಡೆನೂರ್ ಮನುವನ್ನು ನಾಯಕನಾಗಿ ಪರಿಚಯಿಸಿರುವ ನಿರ್ಮಾಪಕರಿಗೆ ಧನ್ಯವಾದಗಳು,” ಎಂದರು.
ನಿರ್ಮಾಪಕ ಸಂತೋಷ್ ಕುಮಾರ್, “ಚಿತ್ರ ಆರಂಭದಿಂದಲೂ ಪ್ರೇಕ್ಷಕರಿಂದ ಉತ್ತಮ ಪ್ರೋತ್ಸಾಹ ಸಿಕ್ಕಿದೆ. ಶೀರ್ಷಿಕೆ ಗೀತೆ ಇಂದು ಬಿಡುಗಡೆಯಾಗಿದ್ದು, ಮೇ 23ಕ್ಕೆ ಚಿತ್ರ ತೆರೆಗೆ ಬರಲಿದೆ. ಎಲ್ಲರ ಸಹಕಾರವಿರಲಿ,” ಎಂದರು.
ನಾಯಕ ಮಡೆನೂರ್ ಮನು, “ನಿರ್ದೇಶಕ ರಾಮನಾರಾಯಣ್ ಮತ್ತು ನಿರ್ಮಾಪಕರಿಗೆ ಧನ್ಯವಾದ. ಈ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ,” ಎಂದರು. ನಾಯಕಿ ಮೌನ ಗುಡ್ಡಮನೆ, “ಒಳ್ಳೆಯ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ. ಶೀರ್ಷಿಕೆ ಗೀತೆ ಚೆನ್ನಾಗಿದೆ,” ಎಂದರು.
ಚಿತ್ರದ ಕಥೆಯನ್ನು ಯೋಗರಾಜ್ ಭಟ್ ಮತ್ತು ಇಸ್ಲಾಮುದ್ದೀನ್ ರಚಿಸಿದ್ದು, ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯ ಒದಗಿಸಿದ್ದಾರೆ. ಶರತ್ ಲೋಹಿತಾಶ್ವ, ತಬಲನಾಣಿ, ಸೋನಾಲ್ ಮೊಂತೆರೊ, ಉಮೇಶ್, ಕರಿಸುಬ್ಬು, ಡ್ರ್ಯಾಗನ್ ಮಂಜು, ಯಶಸ್ವಿನಿ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.