ವಿಜಯಪುರ (ಕೊಲ್ಹಾರ): ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸುಳ್ಳಿಗೆ ಮತ್ತೊಂದು ಹೆಸರು ಕುಮಾರಸ್ವಾಮಿ” ಎಂದು ಕಿಡಿಕಾರಿರುವ ಅವರು, ಕುಮಾರಸ್ವಾಮಿ ಅವರ ಮಾನಸಿಕ ಆರೋಗ್ಯದ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ವಿಜಯಪುರ ಜಿಲ್ಲೆಯ ಕೊಲ್ಹಾರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಚಿನ್ನ ಕಳ್ಳಸಾಗಣೆಯ ರನ್ಯಾ ರಾವ್ ಪ್ರಕರಣದ ಬಗ್ಗೆ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದರು. “ಕುಮಾರಸ್ವಾಮಿ ಮೆಂಟಲ್. ಅವರ ತಲೆ ಕೆಟ್ಟು ಹೋಗಿದೆ” ಎಂದು ತೀಕ್ಷ್ಣವಾಗಿ ಟೀಕಿಸಿದರು.
ರಾಮನಗರದ ಹೆಸರು ಬದಲಾವಣೆ ವಿವಾದ
ರಾಮನಗರದ ನಾಮಫಲಕಕ್ಕೆ ಚಿನ್ನದ ತಗಡು ಹೊಡೆಯಲಾಗುತ್ತದೆ ಎಂಬ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ಕುಮಾರಸ್ವಾಮಿ ರಾಜಕೀಯಕ್ಕಾಗಿ ರಾಮನಗರಕ್ಕೆ ಏಕೆ ಬಂದರು? ಹಾಸನದಲ್ಲಿಯೇ ರಾಜಕೀಯ ಮಾಡಬಹುದಿತ್ತು. ಅವರು ತಮ್ಮ ಹೆಸರಿನಲ್ಲಿರುವ ಊರಿನ ಹೆಸರು ಮತ್ತು ತಂದೆಯ ಹೆಸರನ್ನು ಏಕೆ ಬದಲಾಯಿಸಿಕೊಳ್ಳಲಿಲ್ಲ?” ಎಂದು ಪ್ರಶ್ನಿಸಿದರು.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯ ಕುರಿತು ಮಾತನಾಡಿದ ಅವರು, “ಒಂದೊಂದು ಊರಿನ ಹೆಸರಿಗೆ ತನ್ನದೇ ಆದ ಇತಿಹಾಸವಿರುತ್ತದೆ. ಮದ್ರಾಸ್ನಿಂದ ಚೆನ್ನೈ, ಗುಲ್ಬರ್ಗಾದಿಂದ ಕಲಬುರ್ಗಿಯಾಯಿತು. ನಮ್ಮ ಜಿಲ್ಲೆಯ ಹೆಸರನ್ನು ಬದಲಾಯಿಸುವುದರಿಂದ ಯಾರಿಗೆ ತೊಂದರೆ?” ಎಂದು ಕೇಳಿದರು.
ರಿಯಲ್ ಎಸ್ಟೇಟ್ ಉದ್ದೇಶಕ್ಕಾಗಿ ಹೆಸರು ಬದಲಾವಣೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ, “ನಮ್ಮ ಜನರ ಆಸ್ತಿ ಮೌಲ್ಯ ಹೆಚ್ಚಬೇಕು, ರೈತರಿಗೆ ಒಳಿತಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು, ಬಂಡವಾಳ ಹೂಡಿಕೆಯಾಗಿ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಆಸೆ” ಎಂದು ಸ್ಪಷ್ಟಪಡಿಸಿದರು. ಜತೆಗೆ, “ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಉಳಿಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಬದಲಾಯಿಸುತ್ತಿದ್ದೇವೆ” ಎಂದು ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ಗೆ ₹25 ಲಕ್ಷ ದೇಣಿಗೆ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಹೆಸರು ಕೇಳಿಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, “ನಮ್ಮ ಪಕ್ಷದ ಪತ್ರಿಕೆಗೆ ನಾನು ಮತ್ತು ಸುರೇಶ್ ₹25 ಲಕ್ಷ ದೇಣಿಗೆ ನೀಡಿದ್ದೇವೆ. ನಮ್ಮ ಟ್ರಸ್ಟ್ನಿಂದಲೂ ದೇಣಿಗೆ ಕೊಟ್ಟಿದ್ದೇವೆ. ಇದನ್ನು ರಾಜಾರೋಷವಾಗಿ ಮಾಡಿದ್ದೇವೆ, ಕದ್ದುಮುಚ್ಚಿ ಅಲ್ಲ” ಎಂದು ಸ್ಪಷ್ಟಪಡಿಸಿದರು.
“ನಾವು ದುಡಿದ ಆಸ್ತಿಯಿಂದ ದೇಣಿಗೆ ನೀಡಿದ್ದೇವೆ. ಇದರಿಂದ ಯಾವುದೇ ತೊಂದರೆಯಿಲ್ಲ” ಎಂದು ಅವರು ತಿಳಿಸಿದರು.
Discover more from amiroNEWS
Subscribe to get the latest posts sent to your email.