ಮೈಸೂರಿನ ಬಾಬುನಾಯಕ್ ಅವರ ಮಲೈ ಮಹಾದೇಶ್ವರ ಎಂಟರ್ಪ್ರೈಸಸ್ನಡಿ ನಿರ್ಮಿತವಾಗಿರುವ, ಪ್ರೊ. ಬರಗೂರು ರಾಮಚಂದ್ರಪ್ಪನವರು ನಿರ್ದೇಶಿಸಿರುವ ಕನ್ನಡ ಚಿತ್ರ ‘ಸ್ವಪ್ನಮಂಟಪ’ ಜುಲೈ 25, 2025ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸದಭಿರುಚಿಯ ಚಿತ್ರಗಳಿಗೆ ಹೆಸರಾದ ಮಾರ್ಸ್ ಸುರೇಶ್ ಅವರು ತಮ್ಮ ಸಂಸ್ಥೆಯ ಮೂಲಕ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ.
‘ಸ್ವಪ್ನಮಂಟಪ’ ಚಿತ್ರವು ಬರಗೂರರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಈ ಚಿತ್ರ, ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪ’ವನ್ನು ಕೆಲವರು ಕೆಡವಿ, ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ, ಕಥಾನಾಯಕ ಮತ್ತು ನಾಯಕಿಯು ಜನರಲ್ಲಿ ಜಾಗೃತಿ ಮೂಡಿಸಿ ಆ ಸ್ಥಳವನ್ನು ಉಳಿಸುವ ಕಥಾವಸ್ತುವನ್ನು ಒಳಗೊಂಡಿದೆ. ಈ ಕಥೆಯು ಹಲವು ತಿರುವುಗಳಿಂದ ಕೂಡಿದ್ದು, ಪ್ರೇಕ್ಷಕರನ್ನು ಕಾಡುವಂತಿದೆ.
ಈ ಚಿತ್ರವು ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನದ ಜೊತೆಗೆ ಚಿತ್ರಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.
ನಾಯಕ-ನಾಯಕಿಯಾಗಿ ವಿಜಯರಾಘವೇಂದ್ರ ಮತ್ತು ರಂಜಿನಿ ರಾಘವನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ, ಇದು ಚಿತ್ರದ ವಿಶೇಷತೆಯಾಗಿದೆ. ಇವರೊಂದಿಗೆ ಸುಂದರರಾಜ್, ಶೋಭಾ ರಾಘವೇಂದ್ರ, ರಜನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಮೈಸೂರು ಮಂಜುಳ ಮುಂತಾದವರು ತಾರಾಗಣದಲ್ಲಿ ಇದ್ದಾರೆ.
ಚಿತ್ರದ ತಾಂತ್ರಿಕ ತಂಡದಲ್ಲಿ ಸುರೇಶ್ ಅರಸು (ಸಂಕಲನ), ನಾಗರಾಜ ಆದವಾನಿ (ಛಾಯಾಗ್ರಹಣ), ಶಮಿತಾ ಮಲ್ನಾಡ್ (ಸಂಗೀತ ನಿರ್ದೇಶನ), ತ್ರಿಭುವನ್ (ನೃತ್ಯ ಸಂಯೋಜನೆ), ಹೊಸ್ಮನೆ ಮೂರ್ತಿ (ಕಲಾವಿನ್ಯಾಸ), ನಟರಾಜ್ಶಿವು ಮತ್ತು ಪ್ರವೀಣ್ (ಸಹ ನಿರ್ದೇಶನ) ಕಾರ್ಯ ನಿರ್ವಹಿಸಿದ್ದಾರೆ. ಸಹ ನಿರ್ಮಾಪಕರಾಗಿ ಎಚ್.ಪಿ. ಕವಿತಾ ಕೊಡುಗೆ ನೀಡಿದ್ದಾರೆ.
ಜುಲೈ 25ರಂದು ‘ಸ್ವಪ್ನಮಂಟಪ’ ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಕನ್ನಡ ಚಿತ್ರರಸಿಕರಿಗೆ ಒಂದು ಅರ್ಥಪೂರ್ಣ ಮತ್ತು ಮನರಂಜಕ ಚಿತ್ರವನ್ನು ನೀಡುವ ಭರವಸೆಯನ್ನು ಇಟ್ಟುಕೊಂಡಿದೆ.