ಬೆಂಗಳೂರು: ರಕ್ಷಣಾ ಲೆಕ್ಕಪತ್ರ ಇಲಾಖೆಯು ರಕ್ಷಣಾ ಲೆಕ್ಕಪತ್ರಗಳ ಮಹಾನಿಯಂತ್ರಕ, ಐಡಿಎಎಸ್ ಅಧಿಕಾರಿ ಡಾ. ಮಾಯಾಂಕ್ ಶರ್ಮಾ ಅವರ ನೇತೃತ್ವದಲ್ಲಿ 2025ರ ಏಪ್ರಿಲ್ 3 ರಿಂದ 4 ರವರೆಗೆ ಹಂಪಿಯಲ್ಲಿ ಎರಡು ದಿನಗಳ ಸಮಗ್ರ ಹಣಕಾಸು ಸಲಹೆಗಾರರ ಸಮ್ಮೇಳನ (ಐಎಫ್ಎ)ಅನ್ನು ಆಯೋಜನೆ ಮಾಡುತ್ತಿದೆ. ಸಮ್ಮೇಳನವನ್ನು ಹಣಕಾಸು ಸಲಹೆಗಾರ (ರಕ್ಷಣಾ ಸೇವೆಗಳು) ಐಡಿಎಎಸ್ ಅಧಿಕಾರಿ ಶ್ರೀ ಎಸ್.ಜಿ. ದಸ್ತಿದಾರ್ ಅವರು ಉದ್ಘಾಟಿಸಲಿದ್ದಾರೆ. ರಕ್ಷಣಾ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಶ್ರೀ ರಾಜೇಶ್ ಕುಮಾರ್ ಸಿಂಗ್ ಅವರು ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
275 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ರಕ್ಷಣಾ ಲೆಕ್ಕಪತ್ರ ಇಲಾಖೆಯು ಭಾರತ ಸರ್ಕಾರದ ಅತ್ಯಂತ ಹಳೆಯ ಇಲಾಖೆಗಳಲ್ಲಿ ಒಂದಾಗಿದೆ. ದೇಶದ ರಕ್ಷಣಾ ಸೇವೆಗಳಿಗೆ ಹಣಕಾಸು ಸಲಹೆ, ಪಾವತಿ ಮತ್ತು ಪಿಂಚಣಿ ವಿತರಣೆ, ಲೆಕ್ಕಪರಿಶೋಧನೆ, ಲೆಕ್ಕಪತ್ರ ನಿರ್ವಹಣೆ ಮತ್ತು ಬಜೆಟ್ ಮೇಲ್ವಿಚಾರಣೆ ಸೇರಿದಂತೆ ವ್ಯಾಪಕ ಶ್ರೇಣಿಯ ಹಣಕಾಸು ಸೇವೆಗಳನ್ನು ಒದಗಿಸುವುದು ಈ ಇಲಾಖೆಯ ಆದ್ಯ ಕರ್ತವ್ಯಗಳಲ್ಲಿ ಸೇರಿವೆ. ಈ ವರ್ಷ ಇಲಾಖೆಯು 6,81,210.27 ಕೋಟಿ ರೂಪಾಯಿಗಳ ರಕ್ಷಣಾ ಬಜೆಟ್ ಅನ್ನು ನಿರ್ವಹಿಸಲಿದೆ, ಇದು ಕೇಂದ್ರ ಬಜೆಟ್ನ ಶೇ.13.45 ರಷ್ಟು ಮತ್ತು ಇತರೆ ಎಲ್ಲಾ ಸಚಿವಾಲಯಗಳಿಗಿಂತ ಅತ್ಯಧಿಕವಾಗಿದೆ. ಅಂತಹ ಸನ್ನಿವೇಶದಲ್ಲಿ ಹಣಕಾಸು ಸಲಹೆಗಾರರ ಪಾತ್ರವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.
ರಕ್ಷಣಾ ಸಚಿವಾಲಯದಲ್ಲಿ 1983ರಲ್ಲಿಯೇ ಸಮಗ್ರ ಹಣಕಾಸು ಸಲಹೆಗಾರ ವ್ಯವಸ್ಥೆಯನ್ನು ಪರಿಚಯಿಸಲಾಗಿತ್ತು ಮತ್ತು 1994 ರಲ್ಲಿ ಆ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲಾಯಿತು. ಆ ವಿಸ್ತರಣೆಯು ಇಂದು ಸಶಸ್ತ್ರ ಪಡೆಗಳ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಹಣಕಾಸು ಸಲಹೆಗಳನ್ನು ಕೈಗೊಳ್ಳುವ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದೆ. ರಾಷ್ಟ್ರದ ಉದ್ದಗಲಕ್ಕೂ 196 ಸಮಗ್ರ ಹಣಕಾಸು ಸಲಹೆಗಾರರಿದ್ದಾರೆ ಮತ್ತು ಹಣಕಾಸಿನ ಅಧಿಕಾರಗಳ ನಿಯೋಗವು ವ್ಯವಸ್ಥೆಯಲ್ಲಿ ಕೆಳ ಹಂತದವರೆಗೆ ವ್ಯಾಪಿಸಿದೆ.
ಪಿಐಎಫ್ ಎಎಸ್ ಎಸ್/ಐಎಫ್ಎ ಗಳ ನಡುವೆ ನಿಗದಿತ ಕ್ರಿಯಾತ್ಮಕ ಸಂವಹನ ಮತ್ತು ಸಮಾಲೋಚನೆಯನ್ನು ಉತ್ತೇಜಿಸಲು ಮತ್ತು ಕಾರ್ಯನಿರ್ವಹಣೆಯ ವಿವಿಧ ಸಾಮಾನ್ಯ ಕ್ಷೇತ್ರಗಳಲ್ಲಿ ಸಮನ್ವಯ ಮತ್ತು ಸ್ಥಿರ ವಿಧಾನವನ್ನು ಸುಗಮಗೊಳಿಸಲು ಪರಿಣಾಮಕಾರಿ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ರಕ್ಷಣಾ ಹಣಕಾಸು ನಿರ್ವಹಣಾ ವ್ಯವಸ್ಥೆಯಲ್ಲಿ ಹಣಕಾಸಿನ ವಿವೇಕ, ದಕ್ಷತೆ ಮತ್ತು ಪಾರದರ್ಶಕತೆ ಖಾತ್ರಿಪಡಿಸಿಕೊಳ್ಳುವಲ್ಲಿ ಐಎಫ್ ಎಗಳ ಪ್ರಮುಖ ಪಾತ್ರದ ಮೇಲೆ ಕೇಂದ್ರೀಕರಿಸುವ ಮುಂಬರುವ ಸಮ್ಮೇಳನವು ಅದರ ಆರು ಉತ್ತಮವಾಗಿ ರೂಪಿಸಲಾದ ವ್ಯವಹಾರ ಗೋಷ್ಠಿಗಳ ಮೂಲಕ ಕಾಳಜಿಯ ಕ್ಷೇತ್ರಗಳು ಮತ್ತು ಅಗತ್ಯವಿರುವ ಮಧ್ಯಸ್ಥಿಕೆಗಳ ಬಗ್ಗೆ ಪರಿಶೀಲನೆ ಮತ್ತು ಚರ್ಚೆ ನಡೆಸಲಾಗುವುದು.
ಆರು ಪ್ರಮುಖ ಕ್ಷೇತ್ರಗಳೆಂದರೆ, ಬಂಡವಾಳ ವೆಚ್ಚದ ಫಲಿತಾಂಶಗಳಲ್ಲಿ ಹಣಕಾಸಿನ ಪಾತ್ರವನ್ನು ಸುವ್ಯವಸ್ಥಿತಗೊಳಿಸುವುದು, ಎಂಇಎಸ್ ನಲ್ಲಿ ಐಎಫ್ ಎ ವ್ಯವಸ್ಥೆ, ಸೇನಾ ಕಮಾಂಡರ್ ವಿಶೇಷ ಹಣಕಾಸು ಅಧಿಕಾರಗಳು (ಎಸಿಎಸ್ ಎಫ್ ಪಿ), ಐಎಫ್ ಎ ಕಚೇರಿಗಳ ಕಾರ್ಯಾಚರಣೆ ಮತ್ತು ಸಾಗಾಣೆ ಅವಶ್ಯಕತೆಗಳು, ಹೊರಗುತ್ತಿಗೆ ಮತ್ತು ಯೋಜನಾ ನಿರ್ವಹಣೆಯಲ್ಲಿ ಐಎಫ್ ಎಪಾತ್ರದ ಬಗ್ಗೆ ಈ ಗೋಷ್ಠಿಗಳಲ್ಲಿ ಸುದೀರ್ಘವಾಗಿ ಚರ್ಚಿಸಲಾಗುವುದು. ಪ್ರತಿಯೊಂದು ವ್ಯವಹಾರ ಗೋಷ್ಠಿಯನ್ನು ಪ್ರಾತ್ಯಕ್ಷಿಕೆ, ಸಂವಾದ ಮತ್ತು ಪ್ರಶ್ನೋತ್ತರ ಗೋಷ್ಠಿಗಳ ಮೂಲಕ ನಡೆಸಲಾಗುವುದು.
ದೇಶಾದ್ಯಂತ ಭೂಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ಕಾವಲು ಪಡೆ, ಗಡಿ ರಸ್ತೆಗಳು, ಸಿಎಸ್ ಡಿ, ಡಿಆರ್ ಡಿಒ ಮತ್ತು ಎಂಇಎಸ್ ಗೆ ಸಮಗ್ರ ಹಣಕಾಸು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಸಮ್ಮೇಳನವು ಎದುರು ನೋಡುತ್ತದೆ. ಇದು ಎಲ್ಲಾ ಐಎಫ್ಎಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲು ಒಂದು ಸಾಮೂಹಿಕ ವೇದಿಕೆಯನ್ನು ಒದಗಿಸುತ್ತದೆ ಮತ್ತು ಇಲಾಖೆಯು ತನ್ನ ಸಾಂಸ್ಥಿಕ ಗುರಿಗಳನ್ನು ಸಾಧಿಸಲು ತನ್ನ ಸಾಮೂಹಿಕ ಪ್ರಯತ್ನಗಳನ್ನು ಮರುಹೊಂದಿಸಲು ಸಹಾಯ ಮಾಡುತ್ತದೆ.
Discover more from amiroNEWS
Subscribe to get the latest posts sent to your email.