ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೇ 27, 2025 ರಂದು ನಡೆದ ಅಬ್ದುಲ್ ರೆಹಮಾನ್ ಹತ್ಯೆಯನ್ನು ನೆಪವಾಗಿಟ್ಟುಕೊಂಡು, ರಾಜ್ಯದಾದ್ಯಂತ ಹಿಂದೂ ನಾಯಕರ ಮತ್ತು ಕಾರ್ಯಕರ್ತರ ಧ್ವನಿಯನ್ನು ಅಡಗಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ ಆರೋಪಿಸಿದೆ. ಈ ಸಂಬಂಧ ಜೂನ್ 2, 2025 ರಂದು ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಮ್ ಎ ಸಲೀಮ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪೊಲೀಸ್ ಕಾರ್ಯಾಚರಣೆಯಲ್ಲಿ ಕಾನೂನು ಉಲ್ಲಂಘನೆ
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸರು ಕಾನೂನು ನಿಯಮಗಳನ್ನು ಉಲ್ಲಂಘಿಸಿ, ರಾತ್ರಿಯ ವೇಳೆಯಲ್ಲಿ ಹಿಂದೂ ಕಾರ್ಯಕರ್ತರ ಮನೆಗೆ ಭೇಟಿ ನೀಡಿ, ಜಿಪಿಎಸ್ ಅಳವಡಿಕೆ, ಫೋಟೋ ತೆಗೆಯುವುದು, ನೋಟೀಸ್ ಇಲ್ಲದೆ ಠಾಣೆಗೆ ಕರೆಯುವುದು ಮುಂತಾದ ಕಾನೂನುಬಾಹಿರ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದರಿಂದ ಹಿಂದೂ ಕಾರ್ಯಕರ್ತರ ಮನೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ” ಎಂದು ಆರೋಪಿಸಿದರು.
ಕಳೆದ ರಾತ್ರಿ 15 ಹಿಂದೂ ನಾಯಕರು ಮತ್ತು ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದ್ದು, ಹಲವರಿಗೆ ಗಡಿಪಾರು ಆದೇಶ ನೀಡಲಾಗಿದೆ. ಆದರೆ, ಧ್ವೇಷ ಭಾಷಣ ಮಾಡುವ ಎಸ್ಡಿಪಿಐ ಮುಖಂಡರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕೋಮು ಹಿಂಸಾಚಾರ ತಡೆ ದಳವನ್ನು ಕೇವಲ ಹಿಂದೂ ಸಂಘಟನೆಗಳ ವಿರುದ್ಧವೇ ಬಳಸಲಾಗುತ್ತಿದೆ ಎಂದು ಶ್ರೀ. ಗೌಡ ಟೀಕಿಸಿದರು.
ಏಕಪಕ್ಷೀಯ ಕ್ರಮಗಳ ಆರೋಪ
ಶ್ರೀ. ಗೌಡ ಮಾತನಾಡಿ, “ಅನ್ಯ ಸಮುದಾಯದ ಮುಖಂಡರ ಧ್ವೇಷ ಭಾಷಣದ ದೂರುಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ, ಹಿಂದೂಗಳು ಸಾಮಾಜಿಕ ಜಾಲತಾಣದಲ್ಲಿ ಏನೇ ಬರೆದರೂ, ಅವರ ವಿರುದ್ಧ ತಕ್ಷಣ ಪ್ರಕರಣ ದಾಖಲಾಗುತ್ತದೆ. ಇದರಿಂದ ಹಿಂದೂಗಳ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ” ಎಂದು ಹೇಳಿದರು.
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಪಿಎಫ್ಐ ಸಂಘಟನೆಯ ಸದಸ್ಯರ ಭಾಗಿತ್ವದ ಶಂಕೆ ಇದ್ದರೂ, ಪೊಲೀಸರು ಸರಿಯಾದ ತನಿಖೆ ನಡೆಸದೆ, ಮುಸಲ್ಮಾನ್ ಧಾರ್ಮಿಕ ಮತ್ತು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿದು ಹಿಂದೂ ನಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಟ್ವಾಳ ಘಟನೆಯ ನಂತರದ ಬೆಳವಣಿಗೆ
ಮೇ 28, 2025 ರಂದು ಬಂಟ್ವಾಳದಲ್ಲಿ ಅಬ್ದುಲ್ ರೆಹಮಾನ್ ಅವರ ಅಂತಿಮ ಯಾತ್ರೆ ವೇಳೆ, ದುಷ್ಕರ್ಮಿಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮತ್ತು ಕಲ್ಲು ತೂರಾಟ ನಡೆದಿದೆ. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಭಯೋತ್ಪಾದಕ ಬೆದರಿಕೆಗಳ ಆತಂಕ
ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್ ಮಾತನಾಡಿ, “ದಕ್ಷಿಣ ಕನ್ನಡದ ಹಿಂದೂ ನಾಯಕರಿಗೆ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮತ್ತು ಸೌದಿ ಅರೇಬಿಯಾದಿಂದ ವಾಟ್ಸ್ಆಪ್ ಆಡಿಯೋ ಸಂದೇಶಗಳ ಮೂಲಕ ಬೆದರಿಕೆಗಳು ಬರುತ್ತಿವೆ. ಇಂತಹ ಬೆದರಿಕೆಗಳು ಸುಹಾಸ್ ಶೆಟ್ಟಿಯವರಿಗೂ ಹತ್ಯೆಗೆ ಮುನ್ನ ಬಂದಿದ್ದವು. ಇದು ಗಂಭೀರ ವಿಷಯವಾಗಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಅವರು ಮುಂದುವರೆಸಿ, “ಕೇರಳದಿಂದ ಸಾವಿರಾರು ಮುಸಲ್ಮಾನರು ಮಂಗಳೂರಿಗೆ ಪ್ರತಿಭಟನೆಗೆ ಬರುತ್ತಿರುವುದು ಗಂಭೀರ ಸಂಗತಿಯಾಗಿದೆ. ಪಿಎಫ್ಐ ಸದಸ್ಯರು ಎಸ್ಡಿಪಿಐ ಮೂಲಕ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರವು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಉಪಸ್ಥಿತ ಗಣ್ಯರು
ಮನವಿ ಸಲ್ಲಿಕೆ ವೇಳೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್, ವಕೀಲರಾದ ಶ್ರೀ. ಅಮೃತೇಶ್ ಎನ್. ಪಿ., ಶ್ರೀ. ಪುನೀತ್ ಕೆರೆಹಳ್ಳಿ, ಶ್ರೀ. ಸಂತೋಷ್ ಕೆಂಚಾಂಬ, ಭಜರಂಗದಳದ ಪ್ರಾಂತ ಸಹ ಸಂಯೋಜಕ ಶ್ರೀ. ಗೋವರ್ಧನ್ ಸಿಂಗ್, ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸಹ ಕಾರ್ಯದರ್ಶಿ ಶ್ರೀ. ಸುರೇಶ್ ಕುಮಾರ್ ಬಿ., ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಸಹ ಸಂಯೋಜಕ ಶ್ರೀ. ರಾಜಣ್ಣ, ಶ್ರೀ. ಎಮ್ ಎಲ್ ಶಿವಕುಮಾರ್, ಶ್ರೀ. ಮಲ್ಲಿಕಾರ್ಜುನ್ ರಾಜು, ಶ್ರೀ. ಸುರೇಶ್, ಶ್ರೀ. ಸುಂದ್ರೇಶ್ ನರಗಲ್, ಶ್ರೀ. ಪ್ರಸನ್ನ ಡಿ. ಪಿ., ಶ್ರೀ. ಜಿ ಎಂ ನಟರಾಜ್, ಮತ್ತು ಶ್ರೀ. ದೀಪಕ್ ಪವಾರ್ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಮತ್ತು ವಕೀಲರು ಉಪಸ್ಥಿತರಿದ್ದರು.
Discover more from amiroNEWS
Subscribe to get the latest posts sent to your email.