ಬಿಡದಿ ತೋಟದಲ್ಲಿ ನಡೆದ ಮಹತ್ವದ ಸಮಾಲೋಚನೆ; ಸಣ್ಣಪುಟ್ಟ ವೈಮನಸ್ಸು ಮರೆತು ಜನರೊಂದಿಗೆ ಹೆಜ್ಜೆ ಹಾಕಿ ಎಂದ ರಾಜ್ಯಾಧ್ಯಕ್ಷರು
ಬೆಂಗಳೂರು: ಕೇಂದ್ರ ಸಚಿವರೂ ಆಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ಪಕ್ಷದ ಮುಖಂಡರೊಂದಿಗೆ ಶುಕ್ರವಾರ ಬಿಡದಿಯ ತಮ್ಮ ತೋಟದಲ್ಲಿ ಮಹತ್ವದ ಸಭೆ ನಡೆಸಿ, ಪಕ್ಷ ಸಂಘಟನೆಯ ದಿಶೆಯಲ್ಲಿ ಕೂಲಂಕುಷವಾದ ಚರ್ಚೆ ನಡೆಸಿದರು. ಸಂಘಟನೆ ಮತ್ತು ಹೋರಾಟದಲ್ಲಿ ಅವಿರತವಾಗಿ ತೊಡಗಿಸಿಕೊಳ್ಳುವಂತೆ ಮುಖಂಡರಿಗೆ ಕಟ್ಟುನಿಟ್ಟಾದ ಸೂಚನೆ ನೀಡಿದರು.
ಸಭೆಯಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವರಾದ ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ. ಅನ್ನದಾನಿ, ಶಾಸಕ ಮಂಜುನಾಥ್, ಜಿಲ್ಲಾಧ್ಯಕ್ಷ ರಮೇಶ್, ಮುಖಂಡ ರಾಮಚಂದ್ರ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.
ಜಿಲ್ಲೆಯ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿವರವಾಗಿ ಚರ್ಚಿಸಿದ ಕುಮಾರಸ್ವಾಮಿ, ಡಿಸಿಸಿ ಬ್ಯಾಂಕ್ ಚುನಾವಣೆ ಸಂದರ್ಭದಲ್ಲಿ ಪಕ್ಷ ಸಂಘಟನೆಯಲ್ಲಿ ಅಲಕ್ಷ್ಯ ತೋರಬಾರದೆಂದು ಎಚ್ಚರಿಕೆ ನೀಡಿದರು. ‘‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನತೆ ದೊಡ್ಡ ಮಟ್ಟದ ಬಹುಮತದೊಂದಿಗೆ ನಮಗೆ ಆಶೀರ್ವಾದ ನೀಡಿದ್ದಾರೆ. ಅಧಿಕಾರವಿರಲಿ ಅಥವಾ ಇಲ್ಲದಿರಲಿ, ಜನರ ಜತೆ ಸದಾ ಇರಬೇಕು. ಅವರ ನಿರೀಕ್ಷೆಯನ್ನು ಹುಸಿಮಾಡಬಾರದು’’ ಎಂದು ಸ್ಪಷ್ಟಪಡಿಸಿದರು.
ಪ್ರತಿ ಮನೆ, ಗ್ರಾಮದಲ್ಲೂ ಪಕ್ಷದ ಇರವು ಕಟ್ಟಿಕೊಳ್ಳಿ
ನಿಖಿಲ್ ಕುಮಾರಸ್ವಾಮಿ ಅವರ ಸಂಘಟನಾ ಪ್ರವಾಸಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಇದರ ನಂತರ ಸದಸ್ಯತ್ವ ನೋಂದಣಿಯನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು. ‘‘ಗ್ರಾಮ ಗ್ರಾಮದಲ್ಲಿಯೂ, ಮನೆ ಮನೆಯಲ್ಲಿಯೂ ಪಕ್ಷದ ಕಾರ್ಯಕರ್ತರು ಇರಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಬಂದಿಲ್ಲವಾದರೂ ಜನರ ಜತೆ ಇದ್ದೆವು. ಅದೇ ಲೋಕಸಭಾ ಚುನಾವಣೆಯಲ್ಲಿ ಜನ ನಮ್ಮ ಕೈಹಿಡಿದರು. ಆ ಆಶೀರ್ವಾದದಿಂದ ನಾನು ಸಂಸದನಾಗಿ, ಕೇಂದ್ರ ಸಚಿವನಾಗಿದ್ದೇನೆ. ಜಿಲ್ಲೆಯ ಜನರೊಂದಿಗೆ ರಾಜಕಾರಣಕ್ಕೂ ಮೀರಿದ ಭಾವನಾತ್ಮಕ ಸಂಬಂಧವಿದೆ. ಅದಕ್ಕೆ ಚ್ಯುತಿ ಬರಬಾರದು. ಜನರ ಋಣ ತೀರಿಸುವ ಕೆಲಸ ನಾನು ಮಾಡುತ್ತೇನೆ’’ ಎಂದು ಭರವಸೆ ನೀಡಿದರು.
ವೈಮನಸ್ಸು ಬಿಟ್ಟು ಒಗ್ಗಟ್ಟಾಗಿ ಕೆಲಸ ಮಾಡಿ
‘‘ಪಕ್ಷವನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. ಸಂಘಟನೆಯಲ್ಲಿ ಬದ್ಧತೆ, ಗಂಭೀರತೆ ತೋರಿ. ರಾಜ್ಯ ಸರ್ಕಾರದ ದುರಾಡಳಿತದಿಂದ ಜನರು ರೋಸಿ ಹೋಗಿದ್ದಾರೆ. ರೈತರು, ವಿಶೇಷವಾಗಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರಿಯದ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದಾರೆ. ನಿಮ್ಮ ಜವಾಬ್ದಾರಿ ಹೆಚ್ಚಿದೆ. ಜನಪರ ಕಾರ್ಯಕ್ರಮಗಳನ್ನು ರೂಪಿಸಿ, ಜನರ ಜತೆ ನಿಂತು ದುಡಿಯಿರಿ’’ ಎಂದು ಸೂಚಿಸಿದರು.
ಸಣ್ಣಪುಟ್ಟ ವೈಮನಸ್ಸುಗಳನ್ನು ಮರೆತು, ಪಕ್ಷದ ಬೆಳವಣಿಗೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕೆಂದು ತಾಕೀತು ಮಾಡಿದ ಅವರು, ಯಾವುದೇ ಸಮಸ್ಯೆಯನ್ನು ಸೌಹಾರ್ದಯುತವಾಗಿ ಸಭೆಯಲ್ಲಿ ಬಗೆಹರಿಸಿಕೊಳ್ಳಬೇಕೆಂದು ಹೇಳಿದರು. ‘‘ಪಕ್ಷದ ಸಂಘಟನೆ ಹಾಗೂ ಸಾಂಸ್ಥಿಕ ನೇಮಕಗಳಲ್ಲಿ ಗುರುತರ ಬದಲಾವಣೆಗಳು ಬರಲಿವೆ. ಕಾಂಗ್ರೆಸ್ ಸರ್ಕಾರದ ಆಂತರಿಕ ಕಚ್ಚಾಟ ಮತ್ತು ಆಡಳಿತ ವಿರೋಧಿ ಅಲೆಯನ್ನು ಗಮನಿಸಿ, ಎಚ್ಚರಿಕೆಯಿಂದ ಕೆಲಸ ಮಾಡಿ’’ ಎಂದು ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದವರು: ನಿಖಿಲ್ ಕುಮಾರಸ್ವಾಮಿ, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಡಾ.ಕೆ. ಅನ್ನದಾನಿ, ಮಂಜುನಾಥ್, ರಮೇಶ್, ರಾಮಚಂದ್ರ ಇತರರು.












