ಬೆಂಗಳೂರು: ಜೈಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ‘ತೀರ್ಥರೂಪ ತಂದೆಯವರಿಗೆ’ ಕನ್ನಡ ಚಿತ್ರವು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (BIFFes) ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ನೋಡುಗರ ಮನಸ್ಸು ಗೆದ್ದಿದೆ.
ಜನವರಿ 29ರಿಂದ ಫೆಬ್ರವರಿ 6ರವರೆಗೆ ನಡೆಯುತ್ತಿರುವ ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಈ ಚಿತ್ರವು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿ ಜನರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದಿತ್ತು. ಚಿತ್ರದ ಪ್ರದರ್ಶನದ ನಂತರ ಚಿತ್ರತಂಡದ ಸದಸ್ಯರು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು.
ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಮಾತನಾಡಿ, “ಹೊಸವರ್ಷದ ಮೊದಲ ದಿನ ಬಿಡುಗಡೆಯಾದ ನಮ್ಮ ಚಿತ್ರ ಜನರಿಂದ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ನಿಹಾರ್ ಮುಕೇಶ್ ನಾಯಕನಾಗಿ, ರಚನಾ ಇಂದರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಹಿರಿಯ ನಟಿ ಸಿತಾರಾ ಅವರು ಅಭಿನಯಿಸಿದ್ದಾರೆ. ಅಜಿತ್ ಹಂದೆ, ರಾಜೇಶ್ ನಟರಂಗ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ. ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವುದು ನಮಗೆ ಬಹಳ ಸಂತೋಷದ ಸಂಗತಿ. ನೋಡಿದವರು ‘ಬಹಳ ದಿನಗಳ ನಂತರ ಉತ್ತಮ ಕೌಟುಂಬಿಕ ಚಿತ್ರ ನೋಡಿದ್ದೇವೆ’ ಎಂದು ಹೇಳಿದ್ದು ಕೇಳಿ ಮನ ತುಂಬಿ ಬಂದಿದೆ” ಎಂದರು.
ನಾಯಕ ನಿಹಾರ್ ಮುಕೇಶ್ ಹೇಳಿದರು, “ನನ್ನ ಮೊದಲ ಕನ್ನಡ ಚಿತ್ರವೇ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವುದು ಬಹಳ ಸಂತೋಷವಾಗಿದೆ.”
ನಾಯಕಿ ರಚನಾ ಇಂದರ್ ಮಾತನಾಡಿ, “ಈ ಬಾರಿ ನನ್ನ ಎರಡು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿವೆ. ‘ತೀರ್ಥರೂಪ ತಂದೆಯವರಿಗೆ’ಗೆ ಎಲ್ಲಾ ಕಡೆಯಿಂದಲೂ ಉತ್ತಮ ಪ್ರಶಂಸೆ ಸಿಗುತ್ತಿರುವುದಕ್ಕೆ ಖುಷಿಯಾಗುತ್ತಿದೆ” ಎಂದರು.
ನಟ ಅಜಿತ್ ಹಂದೆ ಅವರು, “ಚಿತ್ರೋತ್ಸವಗಳು ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡುತ್ತವೆ. ನಮ್ಮ ಚಿತ್ರವೂ ಅದರಲ್ಲಿ ಒಂದು. ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥೆಯಲ್ಲಿ ನಾನು ಅಭಿನಯಿಸಿರುವುದು ಸಂತೋಷದ ವಿಷಯ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಚಿತ್ರವು ಕೌಟುಂಬಿಕ ಭಾವನೆಗಳು ಮತ್ತು ಮೌಲ್ಯಗಳನ್ನು ಕೇಂದ್ರೀಕರಿಸಿದ್ದು, ನೋಡುಗರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಚಿತ್ರೋತ್ಸವದಲ್ಲಿ ಸಿಕ್ಕ ಪ್ರಶಂಸೆಯೇ ಸಾಕ್ಷಿ.












