ಬೆಂಗಳೂರು: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜನ್ಮದಿನಾಚರಣೆಯ ಸುಸಂದರ್ಭದಲ್ಲಿ ಕರ್ನಾಟಕ ಸರ್ಕಾರವು 2026ನೇ ಸಾಲಿನ ರಾಜ್ಯ ಮಟ್ಟದ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿಯನ್ನು ಘೋಷಿಸಿದೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹೋರಾಡಿ, ಕಲೆ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಅನನ್ಯ ಕೊಡುಗೆ ನೀಡಿದ ಐವರು ಗಣ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಉನ್ನತ ಮಟ್ಟದ ಆಯ್ಕೆ ಸಮಿತಿಯ ಶಿಫಾರಸು ಮೇರೆಗೆ ಸರ್ಕಾರವು ಮಾರ್ಚ್ 31, 2026ರಂದು ಆದೇಶ ಹೊರಡಿಸಿ ಅನುಮೋದನೆ ನೀಡಿದೆ.

ಪ್ರಶಸ್ತಿ ಪುರಸ್ಕೃತರಿಗೆ ಪ್ರತಿಯೊಬ್ಬರಿಗೂ ತಲಾ ರೂ. 5 ಲಕ್ಷ ನಗದು ಬಹುಮಾನ ಮತ್ತು 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪುರಸ್ಕೃತರ ವಿವರ:
- ಶ್ರೀಮತಿ ಚಂದ್ರಮ್ಮ (ಬೆಂಗಳೂರು ಕೇಂದ್ರ): ಬೆಂಗಳೂರಿನ ಭುವನೇಶ್ವರಿ ನಗರದ ನಿವಾಸಿ. ಸಂಘಟನೆ, ಸಾಮಾಜಿಕ ಹೋರಾಟ ಮತ್ತು ಭೂ ಆಂದೋಲನ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದಕ್ಕಾಗಿ ಆಯ್ಕೆಯಾಗಿದ್ದಾರೆ.
- ಶ್ರೀ ಡಿಂಗ್ರಿ ನರಸಪ್ಪ (ಕಲಬುರಗಿ ವಿಭಾಗ): ರಾಯಚೂರು ಜಿಲ್ಲೆಯ ಆಶಾಪುರ ನಿವಾಸಿ. ಜಾನಪದ ಕಲಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಕ್ಕಾಗಿ ಪ್ರಶಸ್ತಿ ಪಡೆಯುತ್ತಿದ್ದಾರೆ.
- ಶ್ರೀ ಸರಜೂ ಕಾಟ್ಕರ್ (ಬೆಳಗಾವಿ ವಿಭಾಗ): ಬೆಳಗಾವಿಯ ಮಹಾಂತೇಶನಗರದ ನಿವಾಸಿ. ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಸಾಧಕರು.
- ಶ್ರೀ ನಾರಾಯಣ (ಮೈಸೂರು ವಿಭಾಗ): ಮೈಸೂರಿನ ಮಾಜಿ ಮೇಯರ್. ಆಡಳಿತ ಮತ್ತು ಸಮಾಜ ಸೇವೆಯಲ್ಲಿ ದಕ್ಷತೆ ಹಾಗೂ ಜನಪರ ಕಾರ್ಯಗಳಿಗಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ.
- ಶ್ರೀ ನರಸೀಯಪ್ಪ (ಬೆಂಗಳೂರು ವಿಭಾಗ): ತುಮಕೂರಿನ ಮಾಜಿ ನಗರಸಭೆ ಸದಸ್ಯ. ಜನಸಾಮಾನ್ಯರ ಪರ ಹೋರಾಟ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಕ್ಕಾಗಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ:
ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಾದ ಏಪ್ರಿಲ್ 5, 2026ರಂದು ಬೆಂಗಳೂರಿನ ವಿಧಾನಸೌಧದ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ವಿಶೇಷ ಕಾರ್ಯಕ್ರಮ ಆಯೋಜಿಸಿ, ಎಲ್ಲಾ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರಶಸ್ತಿಯು ಸಮಾಜದ ಹಿಂದುಳಿದ ವರ್ಗಗಳ ಉನ್ನತಿ ಮತ್ತು ಸಮಾಜ ಸೇವೆಯಲ್ಲಿ ಸಾಧನೆ ಮಾಡುವವರನ್ನು ಪ್ರೋತ್ಸಾಹಿಸುವ ಗುರಿ ಹೊಂದಿದೆ.












