ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ 371(ಜೆ) ಅಡಿ ನೇಮಕಾತಿ, ಮುಂಬಡ್ತಿ ಮತ್ತು ಜೇಷ್ಠತಾ ಕ್ರಮಗಳು ವಿಳಂಬವಾಗುತ್ತಿರುವುದನ್ನು ಸಚಿವ ಸಂಪುಟ ಉಪ ಸಮಿತಿಯು ತೀವ್ರವಾಗಿ ಆಕ್ಷೇಪಿಸಿದೆ. ಈ ಕುರಿತು ಸರ್ಕಾರದ ಐದು ಪ್ರಮುಖ ಇಲಾಖೆಗಳ ವರದಿಯನ್ನು ಪ್ರತಿಹದಿನೈದು ದಿನಗಳಿಗೊಮ್ಮೆ ಪರಿಶೀಲಿಸಲು ನಿರ್ಧರಿಸಲಾಗಿದೆ. ಈ ತೀರ್ಮಾನವನ್ನು ಸಂಪುಟ ಉಪ ಸಮಿತಿಯ ಅಧ್ಯಕ್ಷ, ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಯಿತು.
ಉಪ ಸಮಿತಿಯ ತೀರ್ಮಾನಗಳು:
ಈ ಸಭೆಯಲ್ಲಿ ಉಪ ಸಮಿತಿಯ ಸದಸ್ಯರಾದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂಖಾನ್ ಪಾಲ್ಗೊಂಡು ಹಲವಾರು ಪ್ರಮುಖ ಸಲಹೆಗಳನ್ನು ನೀಡಿದರು.
ಹಾಜರಾಗದ ಹಿರಿಯ ಅಧಿಕಾರಿಗಳಿಗೆ ನೋಟಿಸ್:
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಈ ಸಭೆಗೆ ಸರ್ಕಾರದ ಪ್ರಮುಖ ಇಲಾಖೆಗಳ ಮುಖ್ಯಸ್ಥರು ಹಾಜರಾಗದೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದನ್ನು ಸಂಪುಟ ಉಪ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಹೆಚ್ಚಾಗಿ ಕಿರಿಯ ಅಧಿಕಾರಿಗಳು ಸಭೆಗೆ ಬಂದು ವಿಷಯದಲ್ಲಿ ಅಪೂರ್ಣ ತಿಳುವಳಿಕೆ ಹೊಂದಿರುವುದು ಸಭೆಯ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಮುಂದಿನ ಸಭೆಗಳಿಗೆ ಹಿರಿಯ ಅಧಿಕಾರಿಗಳು ಸ್ವತಃ ಹಾಜರಾಗುವುದು ಕಡ್ಡಾಯ ಎಂದು ತೀರ್ಮಾನಿಸಲಾಯಿತು. ಇದನ್ನು ಪಾಲಿಸದವರ ವಿರುದ್ಧ ನೋಟಿಸ್ ಜಾರಿ ಮಾಡಲಾಗುವುದು.
ಸಹಕಾರ ಇಲಾಖೆಯ ಗೈರು ಹಾಜರಿ:
ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ 371(ಜೆ) ನೀತಿಯಂತೆ ಮುಂಬಡ್ತಿ ಹಾಗೂ ಸೇವಾ ಜೇಷ್ಠತೆ ನೀಡದಿರುವ ಹಿನ್ನೆಲೆಯಲ್ಲಿ ಸಹಕಾರ ಇಲಾಖೆಗೆ ಈ ಹಿಂದಿನ ಸಭೆಯಲ್ಲಿ ತಕ್ಕ ಸೂಚನೆ ನೀಡಲಾಗಿತ್ತು. ಆದರೆ ಇಂದಿನ ಸಭೆಗೆ ಸಹ ಸಹಕಾರ ಇಲಾಖೆಯ ಯಾವುದೇ ಅಧಿಕಾರಿಗಳು ಹಾಜರಾಗದ ಹಿನ್ನೆಲೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ.
ಇತರ ಇಲಾಖೆಗಳಿಗೂ ನೋಟಿಸ್:
ಇದೇ ರೀತಿ, ಒಳಾಡಳಿತ, ಅಬಕಾರಿ ಹಾಗೂ ಪೊಲೀಸ್ ವೈರ್ಲೆಸ್ ಘಟಕಗಳೂ ಕಳೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಅನುಪಾಲನೆ ಬಗ್ಗೆ ವರದಿ ಸಲ್ಲಿಸದ ಹಿನ್ನೆಲೆಯಲ್ಲಿ, ಈ ಇಲಾಖೆಗಳಿಗೂ ನೋಟಿಸ್ ನೀಡಲು ಸೂಚನೆ ನೀಡಲಾಗಿದೆ.
ಮುಂದಿನ ಸಭೆಗೆ ಕಾನೂನು ತಜ್ಞರಿಗೂ ಆಹ್ವಾನ:
371(ಜೆ) ಅಡಿ ನೇಮಕಾತಿ, ಮುಂಬಡ್ತಿ, ಜೇಷ್ಠತೆಯಲ್ಲಿ ಕಂಡುಬರುವ ಲೋಪದೋಷಗಳ ಕುರಿತಂತೆ ನ್ಯಾಯಾಲಯಗಳಲ್ಲಿ ಪ್ರಕ್ರಿಯೆ ನಡೆಯುತ್ತಿರುವುದರಿಂದ, ಮುಂದಿನ ಸಭೆಗೆ ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ವಕೀಲರನ್ನು ಆಹ್ವಾನಿಸಲು ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಸೂಚಿಸಿದರು.