ಎರಡು ವರ್ಷಗಳ ನಂತರ ವಿಧಾನಸೌಧಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ; ಎಂಬಿ ಪಾಟೀಲ್ ಜೊತೆ ಸಕಾರಾತ್ಮಕ ಚರ್ಚೆ
ಬೆಂಗಳೂರು: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸೌಧಕ್ಕೆ ಭೇಟಿ ನೀಡಿದ ಹೆಚ್ಡಿ ಕುಮಾರಸ್ವಾಮಿ ಅವರು, ರಾಜ್ಯ ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ಮಂಡ್ಯದಲ್ಲಿ ARAI ಆಟೋಮೋಟಿವ್ ರಿಸರ್ಚ್ ಇನ್ಸ್ಟಿಟ್ಯೂಟ್ ಟೆಸ್ಟಿಂಗ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಜಾಗದ ಬಗ್ಗೆ ಮಹತ್ವದ ಸಮಾಲೋಚನೆ ನಡೆಸಿದರು.
ವಿಧಾನಸೌಧದಲ್ಲಿ ಎಂ.ಬಿ. ಪಾಟೀಲ್ ಅವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಮಂಡ್ಯ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಗಳು, ಮಾಜಿ ಮಂತ್ರಿಗಳು ಹಾಗೂ ಮಾಜಿ ಶಾಸಕರು ಭಾಗವಹಿಸಿದ್ದರು. ಸಭೆಯಲ್ಲಿ ಮಂಡ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ, ಉದ್ಯಮಗಳ ಉತ್ತೇಜನ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, “ಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರ ಸ್ಥಾಪಿಸುವ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಂ.ಬಿ. ಪಾಟೀಲ್ ಅವರನ್ನು ಸಭೆ ಕರೆಯುವಂತೆ ಕೇಳಿದ್ದೆ. ಅವರು ಸಭೆ ಕರೆದಿದ್ದಾರೆ. ಚರ್ಚೆ ಬಹಳ ಉತ್ತಮವಾಗಿ ನಡೆದಿದೆ. ಸಚಿವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,” ಎಂದು ಹೇಳಿದರು.
ARAI ಕೇಂದ್ರಕ್ಕೆ 500-600 ಎಕರೆ ಭೂಮಿ ಅಗತ್ಯ
ಕೇಂದ್ರದ ಅಧೀನದಲ್ಲಿರುವ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರವನ್ನು ಮಂಡ್ಯದಲ್ಲಿ ಸ್ಥಾಪಿಸುವ ಯೋಜನೆ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ದೇಶದಲ್ಲಿ ಪ್ರಸ್ತುತ ನಾಲ್ಕು ಕಡೆ ಮಾತ್ರ ಇರುವ ಈ ಕೇಂದ್ರಗಳಲ್ಲಿ ಐದನೇ ಕೇಂದ್ರವನ್ನು ಕರ್ನಾಟಕಕ್ಕೆ, ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ತರುವುದು ತನ್ನ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.
“ಈ ಕೇಂದ್ರವು ಅಂತಾರಾಷ್ಟ್ರೀಯ ಮಟ್ಟದ ಟೆಸ್ಟಿಂಗ್ ಸೌಲಭ್ಯವಾಗಬೇಕು. ವಿಶೇಷವಾಗಿ ಎಲೆಕ್ಟ್ರಿಕ್ ವಾಹನ ಉದ್ಯಮಕ್ಕೆ ಇದು ದೊಡ್ಡ ಉತ್ತೇಜನ ನೀಡಲಿದೆ,” ಎಂದು ಕುಮಾರಸ್ವಾಮಿ ಹೇಳಿದರು.
ARAI ಕೇಂದ್ರ ಸೇರಿದಂತೆ ಪೂರಕ ವ್ಯವಸ್ಥೆಗಳಿಗೆ ಸುಮಾರು 500-600 ಎಕರೆ ಭೂಮಿ ಅಗತ್ಯವಿದೆ. ಇದು ಮಂಡ್ಯದಲ್ಲೇ ಲಭ್ಯವಾಗಬೇಕು ಎಂದು ಅವರು ಒತ್ತಾಯಿಸಿದರು. “ಮಂಡ್ಯದ ಜನರ ಖುಣ ತೀರಿಸುವುದು ನನ್ನ ಜವಾಬ್ದಾರಿ. ಎಂ.ಬಿ. ಪಾಟೀಲ್ ಅವರು ಉತ್ತಮ ಸಹಕಾರ ನೀಡುತ್ತಿದ್ದಾರೆ,” ಎಂದು ಅವರು ಹೇಳಿದರು.

ಜಾಗದ ಕೊರತೆ; ಏಪ್ರಿಲ್ 30ರೊಳಗೆ ಪರಿಹಾರ ಕೋರಿದ್ದಾರೆ
“ಈಗಾಗಲೇ ಎರಡು-ಮೂರು ಸ್ಥಳಗಳನ್ನು ನೋಡಲಾಗಿದೆ. ಆದರೆ ಅಲ್ಲಿ ಲಭ್ಯವಿರುವ ಜಾಗ ಬಹಳ ಸೀಮಿತವಾಗಿದೆ. ಇದನ್ನು ಚರ್ಚಿಸಿದ್ದೇವೆ. ಏಪ್ರಿಲ್ 30ರೊಳಗೆ ಜಾಗದ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಸಚಿವರನ್ನು ಕೋರಿದ್ದೇನೆ. ಮೇ ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸುವ ಉದ್ದೇಶ ನಮ್ಮದು,” ಎಂದು ಕುಮಾರಸ್ವಾಮಿ ಹೇಳಿದರು.
ಒಂದು ಕಡೆ 500 ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದು ಅವರು ಸೂಚಿಸಿದರು. ರೈತರು ಅನುಭೋಗದಲ್ಲಿದ್ದರೆ ಸೂಕ್ತ ಪರಿಹಾರ ನೀಡಿ ಭೂಮಿ ತೆಗೆದುಕೊಳ್ಳಬಹುದು ಎಂದು ಅವರು ಸಲಹೆ ನೀಡಿದ್ದಾರೆ. ರೈತರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ ಎಂದೂ ತಿಳಿಸಿದರು. ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದಂತೆ 100 ಎಕರೆ ಭೂಮಿ ಲಭ್ಯವಿದೆ ಎಂದು ಎಂ.ಬಿ. ಪಾಟೀಲ್ ಅವರು ಭರವಸೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
“ಮಂಡ್ಯ ಕೃಷಿ ಆಧಾರಿತ ಜಿಲ್ಲೆ. ಸರ್ಕಾರಿ ಹಾಗೂ ಒಣ ಭೂಮಿ ಕಡಿಮೆ. ಆದರೆ ಹೆಚ್ಚು ಜಾಗ ನೀಡಿದರೆ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಬಹುದು. ಎಂ.ಬಿ. ಪಾಟೀಲ್ ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ,” ಎಂದು ಅವರು ಸಂತಸ ವ್ಯಕ್ತಪಡಿಸಿದರು.
ದಾವಣಗೆರೆ ದಕ್ಷಿಣ ಕಾಂಗ್ರೆಸ್ ಗಲಾಟೆ: “ಅದು ಅವರ ಪಕ್ಷದ ಆಂತರಿಕ ವಿಚಾರ”
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳ ಬಗ್ಗೆ ಪ್ರಶ್ನಿಸಿದಾಗ ಕುಮಾರಸ್ವಾಮಿ, “ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ನಾನು ಏಕೆ ಉತ್ತರಿಸಬೇಕು? ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರಿಗೆ ಸರಿ ಮಾಡಿಕೊಳ್ಳುವುದು ಅಥವಾ ಬಿಡುವುದು ಅವರ ವಿಷಯ,” ಎಂದು ಹೇಳಿದರು.
“ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಯಾವೊಬ್ಬ ಮುಖಂಡರೂ ಇದುವರೆಗೆ ನನ್ನ ಸಂಪರ್ಕದಲ್ಲಿಲ್ಲ. ಸಂಪರ್ಕಕ್ಕೆ ಬಂದರೆ ನಮ್ಮ ಹಿರಿಯ ನಾಯಕರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.












