ಬೆಂಗಳೂರು: ಬೆಂಗಳೂರು ನಗರವು ಕಾಂಕ್ರೀಟ್ ಜಂಗಲ್ ಆಗಿ ಮಾರ್ಪಡುತ್ತಿರುವುದು ಆತಂಕಕಾರಿ. ಇದೇ ರೀತಿ ಬೆಳವಣಿಗೆ ಮತ್ತು ವಾಹನ ದಟ್ಟಣೆ ಹೆಚ್ಚಾದಲ್ಲಿ ನವದೆಹಲಿಯಂತೆ ‘ಗ್ಯಾಸ್ ಚೇಂಬರ್’ ಆಗುವುದನ್ನು ತಪ್ಪಿಸಲು ಹಸಿರು ಹೊದಿಕೆಯನ್ನು ತ್ವರಿತವಾಗಿ ಹೆಚ್ಚಿಸುವುದು ಅನಿವಾರ್ಯ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ಅಸರ್ ಸೋಷಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಸಂಸ್ಥೆಯ ಸಹಯೋಗದಲ್ಲಿ ನಗರದ ಒಂದು ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಿದ್ದ ‘ಬೆಂಗಳೂರಿನಲ್ಲಿ ತಾಪಮಾನ ವೈಪರೀತ್ಯ ಹಾಗೂ ಅದರ ಪರಿಣಾಮಗಳು’ ಕುರಿತ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕವಾಗಿ ಆರೋಗ್ಯಕರ ನಗರವನ್ನು ಕಟ್ಟಲು ಕನಿಷ್ಠ 33% ಹಸಿರು ಹೊದಿಕೆ ಅಗತ್ಯವಿದೆ ಎಂದು ತಿಳಿಸಿದ ಸಚಿವರು, 1.40 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನಲ್ಲಿ ಕನಿಷ್ಠ 10 ಕೋಟಿ ಮರಗಳನ್ನು ಪೋಷಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು. ಒಬ್ಬ ವ್ಯಕ್ತಿಗೆ ಉತ್ತಮ ಆಮ್ಲಜನಕ ದೊರಕಲು ಕನಿಷ್ಠ 7 ಮರಗಳು ಬೇಕು ಎಂದು ವಿಜ್ಞಾನ ಪ್ರತಿಪಾದಿಸುತ್ತದೆ ಎಂದೂ ಅವರು ಸ್ಮರಿಸಿದರು.
ಗತ ವೈಭವ ಮರುಸ್ಥಾಪನೆಗೆ ಬದ್ಧತೆ
ಒಂದು ಕಾಲದಲ್ಲಿ ‘ನಿವೃತ್ತರ ಸ್ವರ್ಗ’ ಮತ್ತು ‘ಹವಾನಿಯಂತ್ರಿತ ನಗರ’ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಜಂಗಲ್ ಆಗುತ್ತಿರುವುದು ದುರಂತ ಎಂದು ವಿಷಾದಿಸಿದ ಸಚಿವರು, ಕೆಂಪೇಗೌಡರು ನಿರ್ಮಿಸಿದ ಹಸಿರು ಬೆಂಗಳೂರನ್ನು ಮತ್ತೆ ಪಡೆಯುವುದಕ್ಕೆ ಅರಣ್ಯ ಇಲಾಖೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ನಗರದ ಸುತ್ತಮುತ್ತಲ ಹಸಿರು ಹೊದಿಕೆಯನ್ನು ಮರುಸ್ಥಾಪಿಸಲು ಮತ್ತು ಪರಿಸರ ಮಾಲಿನ್ಯ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮಾಲಿನ್ಯ, ಕೆರೆಗಳ ಅವನತಿ ಮತ್ತು 11 ಕೋಟಿ ಸಸಿಗಳ ನಾಟಿ
ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ 250 ಕೆರೆಗಳಿದ್ದವು. ಇವುಗಳಲ್ಲಿ ಹಲವು ಅಭಿವೃದ್ಧಿ ಹೆಸರಿನಲ್ಲಿ ಮಾಯವಾಗಿವೆ, ಉಳಿದವುಗಳು ತ್ಯಾಜ್ಯ ನೀರಿನಿಂದ ಕಲುಷಿತಗೊಂಡಿವೆ. ಸಂಚಾರ ದಟ್ಟಣೆ ಮತ್ತು ವಾಹನಗಳ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆಯಿಂದ ನಗರದ ತಾಪಮಾನ ಏರುತ್ತಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯದಾದ್ಯಂತ 11 ಕೋಟಿ ಸಸಿಗಳನ್ನು ನೆಡಲಾಗಿದೆ. ಇವುಗಳಲ್ಲಿ ಎಷ್ಟು ಸಸಿಗಳು ಬದುಕುಳಿದಿವೆ ಎಂಬುದರ ವೈಜ್ಞಾನಿಕ ಸಮೀಕ್ಷೆ ನಡೆಸಿ, ವರದಿಯನ್ನು ಅರಣ್ಯ ಇಲಾಖೆಯ ವೆಬ್ಸೈಟ್ನಲ್ಲಿ ಸಾರ್ವಜನಿಕರಿಗೆ ಅಪ್ಲೋಡ್ ಮಾಡುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಅಕ್ರಮ ಒತ್ತುವರಿ ತೆರವು ಮತ್ತು ‘ನೆಡುತೋಪು’ಗಳ ನಿರ್ಮಾಣ
ಬೆಂಗಳೂರಿನ ‘ಶ್ವಾಸ ತಾಣ’ಗಳ ರಕ್ಷಣೆಗೆ ಮೆಗಾ ಪ್ಲಾನ್ ರೂಪಿಸಿರುವ ಅರಣ್ಯ ಇಲಾಖೆ, ಕಾಡುಗೋಡಿ ಮತ್ತು ತುರಹಳ್ಳಿ ಪ್ರದೇಶಗಳಲ್ಲಿ ಅಕ್ರಮ ಒತ್ತುವರಿಯಾಗಿದ್ದ ಸುಮಾರು ₹10,000 ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಂಡಿದೆ.
ಈ ಭೂಮಿಯಲ್ಲಿ ಕಾಂಪೌಂಡ್ ನಿರ್ಮಿಸಿ ಸಾವಿರಾರು ಸಸಿಗಳನ್ನು ನೆಡುವ ಮೂಲಕ ‘ನೆಡುತೋಪು’ಗಳನ್ನು (Urban Forests) ಸೃಷ್ಟಿಸಲಾಗುವುದು. ಇವು ನಗರದ ಜನರಿಗೆ ಶುದ್ಧ ಗಾಳಿ ಒದಗಿಸುವ ನೈಸರ್ಗಿಕ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಚಿವರು ಹೇಳಿದರು.
ಬೆಂಗಳೂರಿಗೆ ಮತ್ತೊಂದು ‘ಲಾಲ್ಬಾಗ್’
ನಗರದ ಹಸಿರು ವಿಸ್ತೀರ್ಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ತಾಲೂಕಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ‘ವಿಶ್ವಗುರು ಬಸವಣ್ಣನವರ ಬೃಹತ್ ಜೈವಿಕ ಉದ್ಯಾನವನ’ ನಿರ್ಮಾಣವಾಗಲಿದೆ ಎಂದು ಅವರು ಘೋಷಿಸಿದರು.
ಹವಾಮಾನ ಬದಲಾವಣೆಗೆ ಜಿಲ್ಲಾ ಮಟ್ಟದ ಕ್ರಿಯಾ ಯೋಜನೆ
ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ EMPRI ಸಂಸ್ಥೆ ರೂಪಿಸಿರುವ ‘ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ’ಗೆ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹವಾಮಾನ ವೈಪರೀತ್ಯ ಎದುರಿಸುವ ತರಬೇತಿ ಮತ್ತು ಅನುಷ್ಠಾನ ಶೀಘ್ರವೇ ಆರಂಭವಾಗಲಿದೆ.
“ವೃಕ್ಷೋ ರಕ್ಷಿತಃ ರಕ್ಷಿತಃ” ಎಂಬ ಧ್ಯೇಯದೊಂದಿಗೆ ಕೆರೆಗಳ ಪುನರ್ನಿರ್ಮಾಣ ಮತ್ತು ನಗರದ ಹಸಿರು ವಲಯವನ್ನು ವಿಸ್ತರಿಸುವುದೇ ನಮ್ಮ ಅಂತಿಮ ಗುರಿ ಎಂದು ಈಶ್ವರ ಖಂಡ್ರೆ ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ನಿರ್ದೇಶಕ ಎಂ.ಎಸ್. ದಿವಾಕರ್, ಐಐಹೆಚ್ಎಸ್ ಸ್ವಾತಿ, ಹೀಟ್ ವಾಚ್ ಸಂಸ್ಥೆಯ ಆಪೇಕ್ಷಿತಾ ವರ್ಷನಯ್, ಬಿಬಿಎಂಪಿ ಹವಾಮಾನ ಕ್ರಿಯಾ ಕೋಶದ ನಿತ್ಯಾ ಜೆ ಮತ್ತು ಇತರ ತಜ್ಞರು ಭಾಗವಹಿಸಿ ವಿವಿಧ ಅಂಶಗಳ ಬಗ್ಗೆ ಮಾತನಾಡಿದರು.
ಈ ಕಾರ್ಯಾಗಾರದಲ್ಲಿ ಚರ್ಚಿತವಾದ ವಿಷಯಗಳ ಕುರಿತು ವಿಸ್ತೃತ ವರದಿ ಸಲ್ಲಿಸಿದಲ್ಲಿ ಅರಣ್ಯ ಇಲಾಖೆಯಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.












