ಹೂವಿನ ಹಡಗಲಿ ತಾಲೂಕು ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಮೈದಾನದಲ್ಲಿ 2003 ಮತ್ತು 2004ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮಕ್ಕೂ ಮೊದಲು ಸ್ವಾಮಿ ವಿವೇಕಾನಂದ ಇವರ ಮೂರ್ತಿಗೆ ಪೂಜೆಸಲ್ಲಿಸಿದ ನಂತರ ವಿದ್ಯಾರ್ಥಿಗಳು ತಮಗೆ ಅಕ್ಷರ ಕಲಿಸಿ ಜ್ಞಾನ ನೀಡಿದ ನೆಚ್ಚಿನ ಶಿಕ್ಷಕರನ್ನು ಹೂಮಳೆ ಗೈದು ಬರಮಾಡಿಕೊಂಡರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಗ್ರಾಮದ ಮಲ್ಲಿಕಾರ್ಜುನ ವಿರಕ್ತ ಮಠದ ಚನ್ನಬಸವ ಶ್ರೀಗಳು ಮಾತನಾಡಿ ಪ್ರಕೃತಿಯ ಋಣ, ಸಮಾಜ ಋಣ, ತಂದೆ ತಾಯಿಯ ಋಣ ಹಾಗೂ ಅಕ್ಷರ ಕಲಿಸಿದ ಗುರುಗಳ ಋಣವನ್ನು ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಗುರುವಂದನಾ ಕಾರ್ಯಕ್ರಮದ ಮೂಲಕ ಗುರುಗಳನ್ನು ಸತ್ಕರಿಸಿ ಗೌರವಿಸಿದಾಗ ಮಾತ್ರ ಋಣದ ಭಾರವನ್ನು ಇಳಿಸಿಕೊಳ್ಳಬಹುದು ಎಂದರು.
ನಂತರ ನಿವೃತ್ತ ಶಿಕ್ಷಕ ಎಸ್.ನಾಗಪ್ಪ ಸೇರಿದಂತೆ ವೇದಿಕೆ ಮೇಲಿದ್ದ ಹಲವಾರು ಶಿಕ್ಷಕರು ತಮ್ಮ ಸೇವೆ ಮತ್ತು ವಿದ್ಯಾರ್ಥಿಗಳ ಜೊತೆ ಹೊಂದಿದ್ದ ಒಡನಾಟವನ್ನು ಮೆಲಕುಹಾಕಿದರು. ನಂತರ ಹಲವಾರು ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸಹಾಯಕ ಪ್ರಾದ್ಯಾಪಕ ಪ್ರಮೋದ ಗೌಡ, ಶಿಕ್ಷಕಿಯರಾದ ಸಲಿಮ, ಹಾಗೂ ಶೃತಿ ಹೆಬ್ಬಾರೆ, ರವಿ ಹಾವೇರಿ, ಗುರುವಂದನಾ ಸಮಿತಿಯ ಅಧ್ಯಕ್ಷ ಹನುಮನಗೌಡ ಮುದ್ದಣ್ಣನವರ್, ಗ್ರಾಮ ಪಂಚಾಯತಿ ಅಧ್ಯಕ್ಷ ಚನ್ನಬಸಪ್ಪ ಗುಡಗೂರ, ಸದಸ್ಯ ಹೊನ್ನಪ್ಪ ಸಾಂತಪ್ಪನವರ, ವನಿತಾ ಗೋರ್ ಬಾಳ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಹಳೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.