ಬೆಂಗಳೂರು: ಬಿಜೆಪಿ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ. ಹಿಂದೂ ಧಾರ್ಮಿಕ ಚಿಹ್ನೆಗಳು ಕಂಡರೆ ಮುಖ್ಯಮಂತ್ರಿಗೆ ಅಸಹನೆ ಉಂಟಾಗುತ್ತದೆ ಎಂದು ಆರೋಪಿಸಿದ ಅವರು, ಅನ್ಯ ಮತೀಯ ಸಂಭ್ರಮಗಳಲ್ಲಿ ಮಾತ್ರ ಅವರು ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್. ಅಶೋಕ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ:
“ಸಿಎಂ ಸಿದ್ದರಾಮಯ್ಯ ಅವರೇ, ನಿಮಗೆ ತಿಲಕ ಕಂಡರೆ ನಡುಕ, ಕೇಸರಿ ಕಂಡರೆ ಮೈಯೆಲ್ಲ ಉರಿ, ಹನುಮ ಧ್ವಜ ಕಂಡರೆ ತಳಮಳ, ರಾಮಮಂದಿರ ಎಂದರೆ ಕಿರಿಕಿರಿ. ಆದರೆ ಅನ್ಯ ಮತೀಯ ಸಂಭ್ರಮಗಳಲ್ಲಿ ಮಾತ್ರ ಗಮಗಮಿಸುವ ಸೆಂಟು ಹೊಡೆದುಕೊಂಡು, ಟೋಪಿ ಹಾಕಿಕೊಂಡು, ನವ ಮದುಮಗನಂತೆ ಸಿಂಗಾರಗೊಳ್ಳುತ್ತೀರಿ.
ಹಿಂದೂಗಳೆಂದರೆ, ಹಿಂದೂಗಳ ನಂಬಿಕೆಗಳೆಂದರೆ, ಹಿಂದೂಗಳ ಆಚರಣೆಗಳೆಂದರೆ, ಹಿಂದೂಗಳ ಧಾರ್ಮಿಕ ಚಿಹ್ನೆಗಳೆಂದರೆ ನಿಮಗೆ ಯಾಕಿಷ್ಟು ಅಸಹನೆ ಸ್ವಾಮಿ, ಯಾಕಿಷ್ಟು ದ್ವೇಷ? ನೀವು ಬರೀ ಅಲ್ಪಸಂಖ್ಯಾತರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಸ್ವಾಮಿ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಅನ್ನೋದನ್ನ ಮರೆಯಬೇಡಿ.”
ಈ ಪೋಸ್ಟ್ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬಿಜೆಪಿ ನಾಯಕರು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹಿಂದೂ ವಿರೋಧಿ ನೀತಿ ಎಂದು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಆರ್. ಅಶೋಕ್ ಅವರ ಈ ಟೀಕೆಯು ಗಮನ ಸೆಳೆಯುತ್ತಿದೆ.
ಕಾಂಗ್ರೆಸ್ ಸರ್ಕಾರ ಎಲ್ಲಾ ಧರ್ಮಗಳಿಗೂ ಸಮಾನವಾಗಿ ವರ್ತಿಸುತ್ತಿದೆ ಎಂದು ಹೇಳುತ್ತಿದ್ದರೂ, ವಿರೋಧ ಪಕ್ಷಗಳು ನಿರಂತರವಾಗಿ ಈ ವಿಷಯವನ್ನು ರಾಜಕೀಯ ಪ್ರಶ್ನೆಯಾಗಿಸುತ್ತಿವೆ.












