ಬೆಂಗಳೂರು: ಕೆ.ಹೆಚ್. ಪಾಟೀಲ್ ಅವರು ತಮಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಬಿ-ಫಾರಂ ನೀಡಿ ರಾಜಕೀಯ ಪಯಣ ಆರಂಭಿಸಲು ಅವಕಾಶ ಕಲ್ಪಿಸಿದ್ದು ಅವರಿಗೆ ಇಂದಿನ ಸ್ಥಾನಮಾನ ಸಿಗಲು ಕಾರಣವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಮರಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸೋಮವಾರ ನಡೆದ ಮಾಜಿ ಸಚಿವ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಕೆ.ಹೆಚ್. ಪಾಟೀಲ್ ಅವರ 101ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಟೀಲರು, ವೀರಪ್ಪ ಮೊಯ್ಲಿ ಹಾಗೂ ದೆಹಲಿ ನಾಯಕರು ತಮ್ಮನ್ನು ಗುರುತಿಸಿ ಬಿ-ಫಾರಂ ನೀಡಿದ್ದಕ್ಕೆ ಇಂದಿನ ಸ್ಥಿತಿಗೆ ಬರಲು ಸಾಧ್ಯವಾಯಿತು ಎಂದರು.

“ಪಾಟೀಲರಿಗೂ ನನಗೂ 37 ವರ್ಷಗಳ ಅಂತರವಿದೆ. ನಾನು ಅವರ ಜೊತೆ ವಿದ್ಯಾರ್ಥಿ ನಾಯಕನಾಗಿ ಕೆಲಸ ಮಾಡಿದ್ದೇನೆ. ಪಾಟೀಲರು ಅಧ್ಯಕ್ಷರಾಗಿದ್ದಾಗ ಹಾಗೂ ವೀರಪ್ಪ ಮೊಯ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗ ಇಬ್ಬರೂ ಸೇರಿ ನನಗೆ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಟಿಕೆಟ್ ನೀಡಿದರು. ನಂತರ ಅವರ ಜೊತೆ ಶಾಸಕ, ಪಕ್ಷದ ಕಾರ್ಯದರ್ಶಿ ಹಾಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ” ಎಂದು ಶಿವಕುಮಾರ್ ವಿವರಿಸಿದರು.
ಪಾಟೀಲರ ಆಚಾರ-ವಿಚಾರಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದ ಅವರು, “ಇಟ್ಟರೆ ಸಗಣಿಯಾಗು, ತಟ್ಟಿದರೆ ಬೆರಣಿಯಾಗು, ಸುಟ್ಟರೆ ಹಣೆಗೆ ವಿಭೂತಿಯಾಗು” ಎಂಬ ಗೋವಿನ ಹಾಡು ಆಗಾಗ್ಗೆ ನೆನಪಾಗುತ್ತದೆ ಎಂದು ಹೇಳಿದರು. ಪಾಟೀಲರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ಶ್ಲಾಘಿಸಿದರು.
ಅರಣ್ಯ ಸಚಿವರಾಗಿದ್ದ ಪಾಟೀಲರು ರೈತರ ಬದುಕು, ಅರಣ್ಯ ರಕ್ಷಣೆ ಹಾಗೂ ಸಹಕಾರ ಕ್ಷೇತ್ರದಲ್ಲಿ ದೂರದೃಷ್ಟಿ ತೋರಿದ್ದರು. “ಒಂದು ಊರಿಗೆ ಒಂದು ಶಾಲೆ, ಒಂದು ಸಹಕಾರಿ ಸಂಘ ಇರಬೇಕು” ಎಂಬ ಸಹಕಾರ ತತ್ವವನ್ನು ಬೆಳೆಸಿದವರು ಎಂದು ಉಪಮುಖ್ಯಮಂತ್ರಿ ತಿಳಿಸಿದರು.
ಚುನಾವಣೆ ಟಿಕೆಟ್ ನೀಡುವಾಗ ಕೆಲವರ ಭಿನ್ನಾಭಿಪ್ರಾಯ ಇತ್ತು ಆದರೆ ದೆಹಲಿಯ ನಾಯಕರು ತೀರ್ಮಾನ ಮಾಡಿದರು. ಪಾಟೀಲರು ತಮ್ಮನ್ನು ಕರೆಸಿ “ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲುತ್ತೀಯಾ?” ಎಂದು ಕೇಳಿ ನಂತರ ಬಿ-ಫಾರಂಗೆ ಸಹಿ ಹಾಕಿಕೊಟ್ಟರು ಎಂದು ಶಿವಕುಮಾರ್ ನೆನಪಿಸಿಕೊಂಡರು. ಅಲ್ಲಿಂದ ತಮ್ಮ ರಾಜಕೀಯ ಪಯಣ ಆರಂಭವಾಯಿತು ಎಂದರು.

ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು-ಸಾವಿನ ಮಧ್ಯೆ ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ ಎಂದ ಅವರು, ಅಧಿಕಾರದಲ್ಲಿ ಎಷ್ಟು ಜನ ನಾಯಕರನ್ನು ತಯಾರು ಮಾಡುತ್ತೇವೆ ಎಂಬುದು ಮಹತ್ವದ್ದು ಎಂದರು. ಪಾಟೀಲರು ಅನೇಕ ನಾಯಕರನ್ನು ಬೆಳೆಸಿದ್ದಾರೆ ಎಂದು ಹೇಳಿದರು.
ಪಾಟೀಲರ ಧೈರ್ಯ, ದಿಟ್ಟ ನಾಯಕತ್ವ ಸ್ಫೂರ್ತಿಯಾಗಿದೆ. ಹೆಚ್.ಕೆ. ಪಾಟೀಲ್ ಅವರಲ್ಲಿ ತಂದೆಯಂತಹ ಧೈರ್ಯ ಇಲ್ಲದಿದ್ದರೂ ಉಳಿದ ಗುಣಗಳಿವೆ ಎಂದು ಉಲ್ಲೇಖಿಸಿದರು. ಕೃಷ್ಣ ಅವರ ನಂತರ ಹೆಚ್.ಕೆ. ಪಾಟೀಲ್ ನಾಯಕರಾಗುತ್ತಾರೆ ಎಂದು ಭಾವಿಸಿದ್ದೆ ಎಂದರು.
ದೇವರು ವರ-ಶಾಪ ನೀಡುವುದಿಲ್ಲ, ಕೇವಲ ಅವಕಾಶ ನೀಡುತ್ತಾನೆ. ಸಿಕ್ಕ ಅವಕಾಶದಲ್ಲಿ ಒಳ್ಳೆಯದನ್ನು ಮಾಡುವುದು ಮುಖ್ಯ ಎಂದು ಡಿ.ಕೆ. ಶಿವಕುಮಾರ್ ಮಾತು ಮುಗಿಸಿದರು.
ಈ ಕಾರ್ಯಕ್ರಮದಲ್ಲಿ ಪಾಟೀಲರ ಶಿಷ್ಯಕೋಟಿ, ಕಾಂಗ್ರೆಸ್ ನಾಯಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












