ಬೆಂಗಳೂರು: ಜೀವನಶೈಲಿ ಕಾಯಿಲೆಗಳು, ಮಾನಸಿಕ ಒತ್ತಡ ಹಾಗೂ ದೀರ್ಘಕಾಲದ ರೋಗಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹೋಮಿಯೋಪತಿ ಸಮಗ್ರ ಹಾಗೂ ಶಾಶ್ವತ ಆರೋಗ್ಯಕ್ಕೆ ದಾರಿದೀಪವಾಗಬಹುದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.
ನಗರದಲ್ಲಿ ಹೋಮಿಯೋಪತಿ ಫೌಂಡೇಶನ್ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ವಿಶ್ವ ಹೋಮಿಯೋಪತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹೋಮಿಯೋಪತಿ ಜನಪ್ರಿಯ ಹಾಗೂ ಶಕ್ತಿಶಾಲಿ ವೈದ್ಯಕೀಯ ಪದ್ಧತಿಯಾಗಿ ಬೆಳೆಯುತ್ತಿದೆ ಎಂದರು. ಆಯುಷ್ ಸಚಿವಾಲಯದ ಪ್ರೋತ್ಸಾಹದಿಂದ ಈ ಕ್ಷೇತ್ರದಲ್ಲಿ ಮಹತ್ವದ ಅಭಿವೃದ್ಧಿ ಕಂಡುಬಂದಿದೆ ಎಂದು ಹೇಳಿದರು.

ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಜನ್ಮ ದಿನದ ಅಂಗವಾಗಿ ಪ್ರತಿ ವರ್ಷ ಏಪ್ರಿಲ್ 10ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ. ಹೋಮಿಯೋಪತಿ ಪದ್ಧತಿ ರೋಗಿಯ ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಚಿಕಿತ್ಸೆಯನ್ನು ನೀಡುತ್ತದೆ ಎಂದು ರಾಜ್ಯಪಾಲರು ತಿಳಿಸಿದರು.
ಸರಿಯಾದ ಪ್ರಮಾಣದಲ್ಲಿ ನೀಡುವ ಔಷಧಿಗಳು ದೇಹದ ಸ್ವಾಭಾವಿಕ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ. ಇಂದಿನ ಕಾಲಘಟ್ಟದಲ್ಲಿ ಸಮಗ್ರ ಆರೋಗ್ಯದ ಅಗತ್ಯ ಹೆಚ್ಚುತ್ತಿರುವುದರಿಂದ ಹೋಮಿಯೋಪತಿಯ ಮಹತ್ವ ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. “ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ” ಎಂಬ ಈ ವರ್ಷದ ಧ್ಯೇಯ ವಾಕ್ಯವು ಸಮಯೋಚಿತವಾಗಿದೆ ಎಂದು ಹೇಳಿದರು.

ಹೋಮಿಯೋಪತಿಯಲ್ಲಿ ಸಂಶೋಧನೆ, ಡಿಜಿಟಲ್ ಆರೋಗ್ಯ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚಿಸುವ ಅಗತ್ಯವಿದೆ. ಇದರಿಂದ ಜಾಗತಿಕ ಮಟ್ಟದಲ್ಲಿ ಈ ವೈದ್ಯಕೀಯ ಪದ್ಧತಿಯ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ಹೋಮಿಯೋಪತಿ ರೋಗದ ಮೂಲವನ್ನು ಗುರುತಿಸಿ ಚಿಕಿತ್ಸೆ ನೀಡುವ ಪದ್ಧತಿಯಾಗಿದೆ ಎಂದು ಹೇಳಿದರು. ದೇಶದಲ್ಲಿ ವ್ಯಾಪಕವಾಗಿ ಬಳಸಲಾಗುವ ಪ್ರಮುಖ ವೈದ್ಯಕೀಯ ಪದ್ಧತಿಗಳಲ್ಲಿ ಇದೂ ಒಂದು ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಅಧೀನದಲ್ಲಿ 18 ಹೋಮಿಯೋಪತಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಭವಿಷ್ಯದ ವೈದ್ಯರನ್ನು ತಯಾರಿಸುತ್ತಿವೆ ಎಂದು ವಿವರಿಸಿದರು.

ಕರ್ನಾಟಕ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ. ಬಿ.ಟಿ. ರುದ್ರೇಶ್ ಮಾತನಾಡಿ, ಇಂದಿನ ಅನೇಕ ರೋಗಗಳಿಗೆ ಔಷಧಿಗಿಂತ ಹೆಚ್ಚು ಪ್ರೀತಿ, ಕಾಳಜಿ ಮತ್ತು ಉತ್ತಮ ಸಂಬಂಧಗಳ ಅಗತ್ಯವಿದೆ ಎಂದರು. ಮಾನಸಿಕ ಹಾಗೂ ಸಾಮಾಜಿಕ ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.
ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಮಾತನಾಡಿ, ಹೋಮಿಯೋಪತಿಯ ಮೇಲೆ ಜನರ ವಿಶ್ವಾಸ ಹೆಚ್ಚಿದ್ದು, ವೈದ್ಯರು ರೋಗಿಗಳೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಕುಲಸಚಿವ ಅರ್ಜುನ್ ಒಡೆಯರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












