ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬಿಜೆಪಿಯವರು ಕ್ರಿಮಿನಲ್ ಸಂಚು ರೂಪಿಸಿ ಮತಪತ್ರಗಳಲ್ಲಿ ಅಕ್ರಮ ನಡೆಸಿರುವುದು ಸ್ಪಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಅವರು 201 ಮತಗಳ ಅಂತರದಲ್ಲಿ ಜಯಗಳಿಸಿದ್ದರು. ಅವರಿಗೆ ಒಟ್ಟು 59,171 ಮತಗಳು ಬಂದಿದ್ದರೆ, ಬಿಜೆಪಿಯ ಜೀವರಾಜ್ ಅವರಿಗೆ 58,970 ಮತಗಳು ಲಭಿಸಿದ್ದವು. ಇವಿಎಂ ಮತಗಳಲ್ಲಿ ರಾಜೇಗೌಡರಿಗೆ 58,602 ಹಾಗೂ ಅಂಚೆ ಮತಗಳಲ್ಲಿ 569 ಮತಗಳು ಬಂದಿದ್ದರೆ, ಜೀವರಾಜ್ ಅವರಿಗೆ ಇವಿಎಂನಲ್ಲಿ 58,278 ಮತ್ತು ಅಂಚೆ ಮತಗಳಲ್ಲಿ 692 ಮತಗಳು ಬಂದಿದ್ದವು. ಈ ಎಲ್ಲಾ ಮತಗಳನ್ನು ಅರ್ಹ ಎಂದು ಪರಿಗಣಿಸಿ ಅಧಿಕಾರಿಗಳು ಮತ್ತು ಏಜೆಂಟರು ಸಹಿ ಮಾಡಿ ಫಲಿತಾಂಶ ಘೋಷಿಸಿದ್ದರು.
ಆದರೆ ಫಲಿತಾಂಶದ ನಂತರ ಜೀವರಾಜ್ ಅವರು ರಾಜ್ಯ ಹೈಕೋರ್ಟ್ನಲ್ಲಿ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ 2026 ಮಾರ್ಚ್ 6ರಂದು ಮರು ಎಣಿಕೆ ನಡೆದಿದ್ದು, ಈ ವೇಳೆ ರಾಜೇಗೌಡರಿಗೆ ಕೇವಲ 314 ಅಂಚೆ ಮತಗಳು ಮಾತ್ರ ಅರ್ಹವೆಂದು ಪರಿಗಣಿಸಲ್ಪಟ್ಟಿವೆ. ಉಳಿದ 255 ಮತಗಳು ಅನರ್ಹವೆಂದು ಘೋಷಿಸಲಾಗಿದೆ. ಮತ್ತೊಂದೆಡೆ ಜೀವರಾಜ್ ಅವರಿಗೆ ಮರು ಎಣಿಕೆಯಲ್ಲಿ 690 ಅಂಚೆ ಮತಗಳು ಲಭಿಸಿವೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, “ರಾಜೇಗೌಡರಿಗೆ ಬಂದಿದ್ದ ಸುಮಾರು 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದುಪಡಿ ಮಾಡಲಾಗಿದೆ. ಇದು ವೋಟ್ ಡಕಾಯಿತಿ ಮತ್ತು ಕ್ರಿಮಿನಲ್ ಸಂಚು,” ಎಂದು ಆರೋಪಿಸಿದರು. ಮತ ಎಣಿಕೆಯ ನಂತರ ದಾಖಲೆಗಳನ್ನು ಟ್ರಂಕ್ನಲ್ಲಿ ಇಡಲಾಗುತ್ತದೆ. ಆಗ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇದ್ದುದರಿಂದ, ಸಿಬ್ಬಂದಿಗಳ ಮೂಲಕ ಮತಪತ್ರಗಳಲ್ಲಿ ಹಸ್ತಕ್ಷೇಪ ನಡೆದಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಮೂರನೇ ಸುತ್ತಿನಲ್ಲಿ ರಾಜೇಗೌಡರಿಗೆ ಲಭಿಸಿದ್ದ 170 ಅಂಚೆ ಮತಗಳು ಈಗ ಅನರ್ಹವಾಗಿರುವುದು ಅನುಮಾನಾಸ್ಪದ ಎಂದು ಅವರು ಅಭಿಪ್ರಾಯಪಟ್ಟರು. 2023ರಲ್ಲಿ ನಡೆದ ಮೂಲ ಎಣಿಕೆಯ ವೇಳೆ ಯಾವುದೇ ಏಜೆಂಟ್ ಆಕ್ಷೇಪ ವ್ಯಕ್ತಪಡಿಸದಿರುವುದನ್ನು ಅವರು ಉಲ್ಲೇಖಿಸಿದರು.
ಮರು ಎಣಿಕೆ ವೇಳೆ ಚುನಾವಣಾ ವೀಕ್ಷಕರು ಸಹ ಹಾಜರಿದ್ದು, ಗಂಭೀರ ಅಕ್ರಮಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಮಾಹಿತಿ ಲಭ್ಯವಾಗಿದೆ ಎಂದು ಸಿಎಂ ಹೇಳಿದರು. ಅಂಚೆ ಮತಪತ್ರಗಳನ್ನು ಫೊರೆನ್ಸಿಕ್ ಪರಿಶೀಲನೆಗೆ ಕಳುಹಿಸಬೇಕಾಗಿದ್ದರೂ, ಅದನ್ನು ಮಾಡದೇ ಚುನಾವಣಾಧಿಕಾರಿಗಳು ಆತುರದಲ್ಲಿ ಫಲಿತಾಂಶ ಘೋಷಿಸಿರುವುದು ತಪ್ಪಾಗಿದೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮೊದಲು “ಚಿಲುಮೆ” ಸಂಸ್ಥೆ ಮೂಲಕ ಮತದಾರರ ಪಟ್ಟಿಯಲ್ಲಿ ತಿದ್ದುಪಡಿ ಮಾಡಲು ಬಿಜೆಪಿ ಯತ್ನಿಸಿದ್ದುದನ್ನು ಸ್ಮರಿಸಿದ ಅವರು, ಬಿಜೆಪಿಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ಟೀಕಿಸಿದರು.
ಇದೇ ವೇಳೆ, ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವುದನ್ನು ಉಲ್ಲೇಖಿಸಿದ ಸಿಎಂ, “ನಮ್ಮ ಯೋಜನೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳು ಜನರ ವಿಶ್ವಾಸ ಗೆದ್ದಿವೆ,” ಎಂದು ಹೇಳಿದರು. 2028ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಎಸ್ಡಿಪಿಐಗೆ ಬಂದ ಮತಗಳ ಬಗ್ಗೆ ವಿಶ್ಲೇಷಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ರಾಜೇಗೌಡ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದ್ದು, ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.












